
ಮಡಿಕೇರಿ ಏ.23 NEWS DESK : ಸಂವಿಧಾನವನ್ನು ನಾಶ ಮಾಡುವ ಅಜೆಂಡಾ ಹೊಂದಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರದಿಂದ ಹೊರಗಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಈ ಬಾರಿಯ ಲೋಕಸಭಾ ಚುನಾವಣೆ ಅಸ್ತ್ರವಾಗಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಾವೇಶವನ್ನು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು, ‘ಮತ’ ಎಂದರೆ ಹಕ್ಕು ಮತ್ತು ಕರ್ತವ್ಯವಾಗಿದೆ. ಈ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಪರವಾಗಿರುವವರನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿರುವ ಸಂವಿಧಾನಕ್ಕೆ ವಿರುದ್ಧವಾಗಿ 1947 ರಲ್ಲಿ ಜನಸಂಘ ತನ್ನದೇ ಆದ ‘ಜನ ಸಂಘಿ ಸಂವಿಧಾನ’ವನ್ನು ಮಾಡಿಕೊಂಡಿತ್ತು. ಆ ಮೂಲಕ ಈ ರಾಷ್ಟ್ರದಲ್ಲಿ ಧರ್ಮ ಸಂಸತ್ ಹೇರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಿಂದ ಇದರ ಭಾಗವಾಗಿಯೇ “ಒಂದು ದೇಶ- ಒಂದು ಚುನಾವಣೆ” ಎನ್ನುವ ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ. ಇಂತಹ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಎಂದಿಗೂ ಸಂವಿಧಾನದ ತಂಟೆಗೆ ಹೋಗಿಲ್ಲವೆಂದು ಸ್ಪಷ್ಟಪಡಿಸಿದ ಮಹದೇವಪ್ಪ, 1995ರಲ್ಲಿ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನದ ಪರಾಮರ್ಷೆಗೆ ಮುಂದಾಗಿದ್ದರಾದರು, ಅಂದು ಅದನ್ನು ಆಗಗೊಡದಂತೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತೆಂದು ತಿಳಿಸಿದರು.
ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ಎಂದರೆ, ಸಮಾಜದಲ್ಲಿನ ಬಲ ಹೀನ ಸಮುದಾಯಗಳಿಗೆ ಬಲ ತುಂಬುವ ವ್ಯವಸ್ಥೆಯೇ ಆಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ರಾಷ್ಟ್ರದ ಎಲ್ಲಾ ಸಮೂಹಗಳಿಗೆ ಸರ್ವ ಸಮಾನವಾದ ಹಕ್ಕುಗಳೊಂದಿಗೆ, ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ನೀಡಿದ್ದಾರೆ. ಇಂತಹ ವ್ಯವಸ್ಥೆಯನ್ನು ಹಾಳು ಗೆಡಹಿ ‘ಮನು ವಾದ’ವನ್ನು ಜಾರಿ ಮಾಡುವ ಯತ್ನ ಬಿಜೆಪಿಯಿಂದ ನಡೆಯುತ್ತಿದೆ. ಇದು ಜಾರಿಯಾದಲ್ಲಿ ದೇಶದ ಬಹುಸಂಖ್ಯಾತ ಶೋಷಿತ ಸಮುದಾಯಗಳು ಕೇವಲ ಶೇ.2.5 ರಷ್ಟಿರುವ ಬಲಾಢ್ಯ ಸಮೂಹಗಳ ಸೇವೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆಂದು ಕಳವಳ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಕಾಲ ಮೊಘಲರು, ಬ್ರಿಟಿಷರಿಂದ ಆಳ್ವಿಕೆಗೆ ಒಳಗಾದರು ಈ ರಾಷ್ಟ್ರ ಭಾರತವಾಗಿಯೇ ಇದೆ, ತನ್ನತನವನ್ನು ಉಳಿಸಿಕೊಂಡಿದೆ. ಹೀಗಿದ್ದೂ ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಹೊಂದುವ ಮೂಲಕ ಸಂವಿಧಾನದ ಬದಲಾವಣೆಗೆ ಪಿತೂರಿ ನಡೆಸುತ್ತಿದೆಯೆಂದು ಜರೆದ ಮಹದೇವಪ್ಪ, ಬಿಜೆಪಿಗೆ ತನ್ನದೆ ಆದ ಜನಪರವಾದ ಯಾವುದೇ ಕಾರ್ಯಕ್ರಮಗಳಿಲ್ಲ, ರಾಜಕೀಯ ನೀತಿ ನಿಲುಮೆಗಳಿಲ್ಲ. ಕೇವಲ ಮೋದಿ, ಮೋದಿ ಎನ್ನುವುದು ಸರ್ವಾಧಿಕಾರಿ ಮನೋಭಾವನೆ. ಇಂತಹ ಸರ್ವಾಧಿಕಾರಿ ಮನೋಭಾವ ಸಂವಿಧಾನದ ಆಶಯಗಳನ್ನು ನಾಶ ಮಾಡಬಹುದೆಂದು ಆತಂಕ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯರು ಹಾಗೂ ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಮಾತನಾಡಿ, ಸಂವಿಧಾನ ಬದಲಾವಣೆಯ ಚಿಂತನೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಈ ಬಾರಿ 370 ಸ್ಥಾನಗಳ ಪಡೆಯುವ ಗುರಿಯನ್ನು ಹೊಂದಿದೆ. ಸಂವಿಧಾನದ ಬದಲಾವಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ, ಸಮಾನತೆ ಮಾಯವಾಗಿ ಗುಲಾಮಗಿರಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವAತೆ ಮನವಿ ಮಾಡಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ.ಕೆ.ಮಂಜುನಾಥ್ ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷರಾದ ಪಾಪು ಸಣ್ಣಯ್ಯ, ಪಕ್ಷದ ಪ್ರಮುಖರಾದ ವಿ.ಪಿ.ಶಶಿಧರ್, ರಾಜೇಶ್ ಯಲ್ಲಪ್ಪ, ಸುರಯ್ಯ ಅಬ್ರಾರ್, ಕೆ.ಎಂ.ಲೋಕೇಶ್, ಹೆಚ್.ಎ.ಹಂಸ, ಕೆ.ಎ.ಯಾಕುಬ್, ಮಂಜುನಾಥ್ ಗುಂಡೂರಾವ್, ಸೂರಜ್ ಹೊಸೂರು, ತೆನ್ನಿರ ಮೈನಾ, ಕಾನೆಹಿತ್ಲು ಮೊಣ್ಣಪ್ಪ, ಕೆ.ಈ.ಸುರೇಶ್, ಮುತ್ತುರಾಜ್, ಪಾಲಾಕ್ಷ ಜೋಸೆಫ್ ಮೊದಲಾದವರಿದ್ದರು.









