ಮಡಿಕೇರಿ ಏ.24 NEWS DESK : ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಕೊಡಗು ಜಿಲ್ಲಾ ವ್ಯಾಪಿ 1600 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯುಕ್ತರಾದ ಪೊಲೀಸ್ ಸಿಬ್ಬಂದಿಗಳಿಗೆ, ಚುನಾವಣಾ ಸಂದರ್ಭ ಕರ್ತವ್ಯ ನಿರ್ವಹಿಸುವ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾಗಿದ್ದು, ಇದನ್ನು ಅತ್ಯಂತ ಶಾಂತಿಯುತವಾಗಿ ನಡೆಸುವುದಕ್ಕೆ ನಡೆಸುವುದಕ್ಕೆ ಪೂರಕವಾಗಿ ಈ ಬಾರಿ ಒಬ್ಬರು ಎಸ್ಪಿ, ಆರು ಡಿವೈಎಸ್ಪಿ, 14, ವೃತ್ತ ನಿರೀಕ್ಷಕರು, 45 ಎಸ್ಐ, 59 ಎಎಸ್ಐ, 678 ಸಿಬ್ಬಂದಿಗಳು, 280 ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
::: ಗುಜರಾತ್ ಪೊಲೀಸರ ನೆರವು :::
ಈ ಬಾರಿ ಗುಜರಾತ್ನ 2 ಕಂಪೆನಿ (180 ಮಂದಿ) ಪಲೀಸ್ ಸಿಬ್ಬಂದಿಗಳನ್ನು, 8 ಕೆಎಸ್ಆರ್ಪಿ, ಜಿಲ್ಲಾ ಸಶಸ್ತ್ರ ಪೊಲೀಸ್ ದಳವನ್ನು ಬಂದೋಬಸ್ತ್ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
44 ಸೆಕ್ಟರ್ ಮೊಬೈಲ್ ಘಟಕ- ಚುನಾವಣಾ ಹಂತದಲ್ಲಿ ಜಿಲ್ಲೆಯ ಯಾವುದೇ ಮತಗಟ್ಟೆ ಬಳಿಯಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನು ನಿಗ್ರಹಿಸುವುದಕ್ಕೆ ಪೂರಕವಾಗಿ 44 ಸೆಕ್ಟರ್ ಮೊಬೈಲ್ ಘಟಕಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಯಾವುದೇ ವಿಭಾಗದಲ್ಲಿ ಅಹಿತಕರ ಘಟನೆಯ ಸುಳಿವು ದೊರೆತೊಡನೆ ಕ್ಷಿಪ್ರಗತಿಯಲ್ಲಿ ಸ್ಥಳಕ್ಕೆ ತೆರಳಿ ಅದನ್ನು ನಿಗ್ರಹಿಸುವಲ್ಲಿ ಈ ಘಟಕಗಳು ಕಾರ್ಯನಿರ್ವಹಿಸಲಿವೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತದ ‘ಫ್ಲೈಯಿಂಗ್ ಸ್ಕ್ವಾಡ್’ಗಳು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಅತೀ ಸೂಕ್ಷ್ಮ-ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತೆ- ಜಿಲ್ಲೆಯಾದ್ಯಂತ ಈಗಾಗಲೆ ಗುರುತಿಸಲಾಗಿರುವ ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗುತ್ತದೆ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದರು.
ಈ ಸಂದರ್ಭ ಎಎಸ್ಪಿ ಕೆ.ಎಸ್.ಸುಂದರರಾಜ್, ಡಿವೈಎಸ್ಪಿಗಳಾದ ಆರ್.ವಿ.ಗಂಗಾಧರಪ್ಪ, ಮೋಹನ್ ಕುಮಾರ್ ಹಾಗೂ ಮಹೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.