
ಮಡಿಕೇರಿ ಏ.25 NEWS DESK : ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ “ಕಾಂಗತ ಮೂಡ್” (The Shadow) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಮೂರ್ನಾಡಿನ ಬಿದ್ದಂಡ ಪೊನ್ನಪ್ಪ ಅವರ ನಿವಾಸದಲ್ಲಿ ಆರಂಭಗೊಂಡ ಚಿತ್ರೀಕರಣವು ಕಳೆದ 11 ದಿನಗಳಲ್ಲಿ ಕೊಡಗಿನ ವಿವಿಧೆಡೆ ಚಿತ್ರೀಕರಿಸಿ ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.
ಚಿತ್ರೀಕರಣಕ್ಕೆ ಸಹಕರಿಸಿದ ಮೂರ್ನಾಡು ಕಾಂತೂರು ಗ್ರಾಮದ ಕಾಫಿ ಬೆಳೆಗಾರರಾದ ಬಿದ್ದಂಡ ಲೀಲಾ ಪೊನ್ನಪ್ಪ ಚಿತ್ರೀಕರಣ ಪೂರ್ಣಗೊಂಡ ಹಿನ್ನಲೆ ಕುಂಬಳಕಾಯಿ ಒಡೆದು, ಮಾತನಾಡಿ “ಕಾಂಗತ ಮೂಡ್” ಚಿತ್ರ ಕೊಡಗು ಸೇರಿದಂತೆ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡು ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಕೊಡವ ಭಾಷೆಯ ಉಳಿವು, ಜನರಿಗೆ ಹಾಗೂ ಸಮಾಜಕ್ಕೆ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಲುಪಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಕೊಡವ ಸಿನಿಮಾವನ್ನು ನಮ್ಮ ತಂಡದೊಂದಿಗೆ ನಿರ್ಮಿಸಲಾಗುತ್ತಿದ್ದು, ಕೊಡಗಿನಾದ್ಯಂತ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಇದೇ ರೀತಿ ತಮ್ಮ ಬೆಂಬಲ ಇರಲಿ ಎಂದರು.
“ಕಾಂಗತ ಮೂಡ್” ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಚಿತ್ರ ತಂಡದ ಕಲಾವಿದರು ಹಾಗೂ ತಂತ್ರಜ್ಞರಿಗೆ ಧನ್ಯವಾದಗಳನ್ನು ಸಲ್ಲಿಸಿ, ಶೀಘ್ರದಲ್ಲೆ ಸಿನಿಮಾವನ್ನು ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.
ಸಹ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಚಿತ್ರೀಕರಣವನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ಚಿತ್ರದ ಸಹ ನಿರ್ದೇಶಕಿ ಈರಮಂಡ ಹರಣಿ ವಿಜಯ್ ಮಾತನಾಡಿ, ನಿರ್ದೇಶಕ ಪ್ರಕಾಶ್ ಕಾರ್ಯಪ್ಪ ಅವರು, ವರ್ಷದಿಂದ ವರ್ಷಕ್ಕೆ ಉತ್ತಮ ಸಿನಿಮಾಗಳನ್ನು ನಿರ್ಮಿಸಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಸಿನಿಮಾವು ಪ್ರಸ್ತುತ ವಿದ್ಯಾಮಾನದಲ್ಲಿ ಕೊಡಗು ಕಾಣುತ್ತಿರುವ ಸಮಸ್ಯೆಗಳನ್ನು ಒಳಗೊಂಡಿದ್ದು, ಸಿನಿಮಾ ಬಿಡುಗಡೆಗೊಂಡ ನಂತರ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
:: ಚಿತ್ರತಂಡ ::
ಚಿತ್ರದ ನಿರ್ದೇಶನದೊಂದಿಗೆ ನಟರಾಗಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಬಣ್ಣಹಚ್ಚಿದ್ದು, ಗೌರವ ಅತಿಥಿ ಪಾತ್ರದಲ್ಲಿ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಸೇರಿದಂತೆ ಚಡಿಯಂಡ ಸಂತೋಷ್ ಮೇದಪ್ಪ, ಅಪ್ಪಡೇರಂಡ ತೇಜು ಪೊನ್ನಪ್ಪ, ಗುಮ್ಮಟ್ಟಿರ ಕಿಶು ಉತ್ತಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಅಮ್ಮಾಟಂಡ ದೇವಯ್ಯ, ವಿಂದ್ಯ ದೇವಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ತಂಬುಕುತ್ತೀರಾ ಚರಣ್, ಕುಡೆಕಲ್ ಸಂತೋಷ್, ಸಿದ್ದಂಡ ಶಂಭು, ದೇವಂಡಿರ ಲೋಕೇಶ್, ಮಡೆಯಂಡ ಸೂರಜ್, ಮಡೆಯಂಡ ಪ್ರೀನಾ ಮೂರ್ನಾಡುವಿನ ಸ್ಟೆಪ್ ಅಪ್ ಡ್ಯಾನ್ಸ್ ಅಕಾಡೆಮಿಯ ಬಾಲ ಕಲಾವಿದರುಗಳು, ಕಂಡಂಗಾಲ ಮೂವತ್ತುಮನಿ ಸುಬ್ರಮಣಿ ತಂಡದವರು ನಟಿಸಿದ್ದಾರೆ. ಸಹ-ನಿರ್ದೇಶಕಿ ಹಾಗೂ ಸಂಭಾಷಣೆ ಈರಮಂಡ ಹರಿಣಿ ವಿಜಯ್, ಚಿತ್ರ ಕಥೆ ಗಾರ್ಗಿ ಕಾರೆಹಕ್ಲು, ಛಾಯಾಗ್ರಹಣ ಪ್ರದೀಪ್ ಆರ್ಯನ್ ಹಾಗೂ ರಿಕ್ತಿ ನಿರಂಜನ್, ಸೌಂಡ್ ಇಂಜಿನಿಯರ್ ಮೇಘರಾಜ್, ಸಂಕಲನ ಮುತ್ತುರಾಜ್, ಡಿ.ಐ ನಿಖಿಲ್ ಕಾರ್ಯಪ್ಪ, ಸಬ್ ಟೈಟಲ್ ಚೋಕಂಡ ದಿನು ನಂಜಪ್ಪ ಹಾಗೂ ಯದುನಂದನ್ ಅವರು ಸಂಗೀತ ನೀಡಿದ್ದಾರೆ.
ಕಾರ್ಯಕಾರಿ ನಿರ್ಮಾಪಕ ಈರಮಂಡ ವಿಜಯ್ ಉತ್ತಯ್ಯ, ಸಹಾಯಕ ನಿರ್ದೇಶಕ ಕೊಚ್ಚೆರ ನರೇನ್ ಬಿದ್ದಪ್ಪ, ನಿರ್ಮಾಣ ನಿಯಂತ್ರಕ ನೀಲ್ ನಾಗರಾಜ್ ಕಾರ್ಯ ನಿರ್ವಹಿಸಿದ್ದಾರೆ.
ಸಿನಿಮಾ ಬಡುವಂಡ ಅರುಣ್, ಕನ್ನು ಅಪ್ಪಚ್ಚು ಅವರ ಮಾಲೀಕತ್ವದ ಡ್ರೀಮ್ ಪಾತ್ ಎಸ್ಟೇಟ್ ಸ್ಟೇ, ವಾಟರ್ ಸೈಡ್ ಕಾಫಿ ಕೆಫೆ, ಬಿದ್ದಂಡ ಪೊನ್ನಪ್ಪ, ನಿವಾಸ ಹೊದ್ದೂರು ಚೌರೀರ ಐನ್ ಮನೆ ಗದ್ದೆಗಳು ಮೂರ್ನಾಡು ಪಟ್ಟಣ, ಕೋಡಂಬೂರು, ಬಲಮುರಿ, ಬಿಟ್ಟಂಗಾಲ, ಕಂಡಂಗಾಲ, ಪಿರಿಯಾಪಟ್ಟಣ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಗೊಂಡಿದು, ಇದೇ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಚಿಂತನೆ ಇದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.








