
ಮಡಿಕೇರಿ ಏ.30 NEWS DESK : ಕನಸು ಕಾಣುವಾಗ ದೊಡ್ಡ ಕನಸನ್ನು ಕಾಣುವ ಮೂಲಕ ಅತ್ಯತ್ತಮ ಹುದ್ದೆಗಳನ್ನು ಅಲಂಕರಿಸುವ ಪ್ರಯತ್ನ ಮಾಡಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ಬಿ.ರಾಘವ ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಐಕ್ಯೂಎಸಿ, ಪ್ಲೇಸ್ ಮೆಂಟ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಕೋಶಗಳ ಸಹ ಯೋಜನೆಯಲ್ಲಿ ವೆರ್ವ್ವೆ ಮ್ಯಾಂಕ್ವೆ ಏವಿಯೇಷನ್ ಅಕಾಡೆಮಿ (Vervve Manque Aviation Academy) ಯು ಆಯೋಜಿಸಿದ ಕೆರಿಯರ್ ಡೆವಲಪ್ಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಪ್ರತಿಯೊಬ್ಬನ ಆರ್ಥಿಕತೆಯನ್ನು ಸದೃಢಗೊಳಿಸಲು ಉದ್ಯೋಗದ ಅಗತ್ಯವಿದೆ. ಉದ್ಯೋಗವಕಾಶದ ನೆಲೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಶೋಧಿಸಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗವಕಾಶ, ಉತ್ತಮ ಜೀವನ ನಿರ್ವಹಣೆಯ ಬಗೆಗೆ ಕನಸು ಕಾಣಬೇಕಾಗಿದೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಜೊತೆಯಲ್ಲಿ ಅತ್ಯುತ್ತಮ ಔದ್ಯೋಗಿಕ ಆಯಾಮದ ಕಡೆಗೆ ಚಲಿಸುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವೆರ್ವ್ವೆ ಮ್ಯಾಂಕ್ವೆ ಏವಿಯೇಷನ್ ಅಕಾಡೆಮಿ (Vervve Manque Aviation Academy) ಯ ಎಕ್ಸಿಕ್ಯುಟಿವ್ ನಿರ್ದೇಶಕರಾದ ದಿವ್ಯಾ ಕಾವೇರಿಯಪ್ಪ ಮಾತನಾಡಿ, ವಿಮಾನಯಾನಕ್ಕೆ ಸಂಬಂಧಿಸಿದ ಉದ್ಯೋಗಶೀಲತೆಯ ಕುರಿತು ಮಾಹಿತಿ ನೀಡಿದರು.
ತರಬೇತಿ, ಸಂವಹನ ಕಲೆ, ವ್ಯಕ್ತಿತ್ವದ ಆಯಾಮಗಳು ಗಗನಸಖಿಯಾಗಲು ಇರುವ ಮೂಲಭೂತ ಅಂಶಗಳು ಭಾರತದಾದ್ಯಂತ ವ್ಯಾಪಕವಾಗುತ್ತಿರುವ ವಿಮಾನಯಾನ ಉದ್ಯೋಗಶೀಲತೆಯು ಯುವ ತಲೆಮಾರಿಗೆ ವಿಪುಲ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯ ಮಾಜಿ ಉದ್ಯೋಗಿಯಾದ ನಿಶಿಖಾ ಪೂಣಚ್ಚ ಮಾತನಾಡಿ, ವೈಮಾನಿಕ ಸಂಸ್ಥೆಗಳಲ್ಲಿ ಉದ್ಯೋಗಿಯಾಗಬೇಕಾದರೆ ಇರಬೇಕಾದ ಅರ್ಹತೆ, ವ್ಯಕ್ತಿತ್ವದ ನವಿರು, ಭಾಷಿಕ ಸಾಧ್ಯತೆ, ವಸ್ತ್ರ, ಉಡುಪು ಇತ್ಯಾದಿ ಅಂಶಗಳ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿಯ ಸಂಯೋಜಕರಾದ ಡಾ. ಆರ್.ರಾಜೇಂದ್ರ, ಸ್ಕಿಲ್ ಡೆವಲಪ್ಮೆಂಟ್ ಕೋಶದ ಸಂಯೋಜಕರಾದ ಡಾ. ಶೈಲಶ್ರೀ ಹಾಜರಿದ್ದರು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.








