


ಮಡಿಕೇರಿ ಮೇ 2 NEWS DESK : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮೇ 7 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, 6.30 ಗಂಟೆಗೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹಗಲು 11.45ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನೆರವೇರಲಿದ್ದು, ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ಜರುಗಲಿದೆ ಎಂದರು.
ಅಪರಾಹ್ನ 12 ಗಂಟೆಗೆ ಅನ್ನದಾನ, 12.30ಕ್ಕೆ ತಾಯಿಯ ದರ್ಶನ, ಸಂಜೆ 6 ಗಂಟೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ಜರುಗಲಿದ್ದು, ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ರಥ ಎಳೆಯಲು ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆಗಿಂತ ಎಂಟು ದಿನಗಳ ಮೊದಲು ವ್ರತಪಾಲನೆ ಮಾಡಬೇಕು. ಅಲ್ಲದೆ ಆ ದಿನ ದೇವಾಲಯದಲ್ಲಿ ತೀರ್ಥಸ್ನಾನ ಮಾಡಿ ಬಿಳಿಪಂಚೆ ಹಾಗೂ ಕೆಂಪು ಮೇಲು ಹೊದಿಕೆ ಧರಿಸಿವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗವುದೆಂದು ಗೋವಿಂದ ಸ್ವಾಮಿ ಹೇಳಿದರು.
ದೇವಾಲಯ ಆಡಳಿತ ಮಂಡಳಿ ಸದಸ್ಯ ಜಿ.ಕಿರಣ್ ಕುಮಾರ್ ಮಾತನಾಡಿ, ಸುಮಾರು 5 ಸಾವಿರ ಭಕ್ತಾಧಿಗಳು ವಾರ್ಷಿಕೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ದೂರದಿಂದ ಬರುವ ಭಕ್ತಾಧಿಗಳಿಗೆ ತಂಗಲು ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಭಕ್ತರಾದ ಚುಮ್ಮಿ ದೇವಯ್ಯ ಮಾತನಾಡಿ, ಪ್ರತಿವರ್ಷವೂ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಹೆಚ್.ಸಚಿನ್ ವಾಸುದೇವ್, ಡಿ.ಪ್ರಶಾಂತ್ ಉಪಸ್ಥಿತರಿದ್ದರು.










