
ಮಡಿಕೇರಿ ಮೇ 3 NEWS DESK : ವಿರಾಜಪೇಟೆ ಶಿವಕೇರಿಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಶ್ರೀ ಚಾಮುಂಡಿ (ಚೌಂಡಿ) ದೇವರ ಉತ್ಸವವು ಮೇ 7 ರಿಂದ 10ರ ವರೆಗೆ ನಡೆಯಲಿದೆ.
ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ.
ಮೇ 7 ರಂದು ಪ್ರಾತಃಕಾಲ 6 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 8.30 ಗಂಟೆಗೆ ಕಳಸ ಪೂಜೆ, ಮಧ್ಯಾಹ್ನ 12 ಗಂಟೆಗೆ ದೇವಿಗೆ ಹೂವಿನ ಅಲಂಕಾರದೊಂದಿಗೆ ಮಹಾಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನ ನೆರವೇರಲಿದೆ.
ಅಪರಾಹ್ನ 2 ಗಂಟೆಗೆ ದೇವರ ಪಲ್ಲಕ್ಕಿಯನ್ನು ಅಲಂಕೃತ ಮಂಟಪದೊಂದಿಗೆ ವಿರಾಜಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಲಿದ್ದು, ರಾತ್ರಿ 9 ಗಂಟೆಗೆ ತಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ರಾತ್ರಿ 10 ಗಂಟೆಗೆ ಆರತಿ ಪೂಜೆ, ಮಹಾಪೂಜೆ ಹಾಗೂ ಮಂಗಳಾರತಿ ನೆರವೇರಲಿದೆ.
ಮೇ 8 ರಂದು ಬೆಳಿಗ್ಗೆ 10 ಗಂಟೆಗೆ ಪೂಜೆ, ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಪೂಜೆ, ಮಧ್ಯಾಹ್ನ 1 ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಮೇ 10 ರಂದು ಬೆಳಿಗ್ಗೆ 11 ಗಂಟೆಗೆ ಪೂಜೆ ಆರಂಭಗೊಳ್ಳಲಿದ್ದು, ಅಪರಾಹ್ನ 2 ಗಂಟೆಗೆ ಮಹಾಪೂಜೆ, ಮಂಗಳಾರತಿ ಜರುಗಲಿದೆ.
ಮೇ 12 ರಂದು ಮಧ್ಯಾಹ್ನ 3 ಗಂಟೆಗೆ ಗುಳಿಗನ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೋರಿದೆ.










