ಕುಶಾಲನಗರ ಮೇ 24 NEWS DESK : ಶಿಕ್ಷಣದ ಮೂಲಕ ಮಾತ್ರ ಸ್ವಾವಲಂಬಿಗಳಾಗಬಹುದು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಸಿ.ಕೆ.ಸುಬ್ಬರಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಆರ್ಥಿಕ ಕೊರತೆ ಹೆಸರಿನಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು. ಶಿಸ್ತು ಮತ್ತು ಗುರು ಹಿರಿಯರಿಗೆ ವಿಧೇಯತೆ ಮೂಲಕ ಸಾಧನೆ ಸಾಧ್ಯ, ಗುಣಮಟ್ಟ ಸೃಷ್ಟಿಸಲು ಅತ್ಯಂತ ಶ್ರಮದ ಅಗತ್ಯತೆ ಇದೆ ಎಂದರು. ಪ್ರಕೃತಿ ಮತ್ತು ವಿಜ್ಞಾನ ಎಲ್ಲರ ಧ್ವನಿಗಿಂತ ಮಿಗಿಲಾಗಿದ್ದು, ಅದರ ಮೂಲಕ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು. ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಸತೀಶ್ ಎನ್.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೆಂಗಳೂರಿನ ಕ್ಯೂ ಸ್ಪೈಡರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರೀಶ್ ಶಿವಣ್ಣ, ಶನಿವಾರಸಂತೆ ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಜಯಕುಮಾರ್ ಮಾತನಾಡಿದರು. ಪ್ರಾಂಶುಪಾಲರಾದ ಡಾ ಸತೀಶ್ ಎನ್ ಎಸ್ ಅವರು ಕಾಲೇಜಿನ ಸಮಗ್ರ ವರದಿ ವಾಚಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದ ವಿದ್ಯಾರ್ಥಿಗಳಿಗೆ ಸಾಧಕರಿಗೆ ಬಹುಮಾನ ವಿತರಣೆ ನಡೆಯಿತು. ವೇದಿಕೆಯಲ್ಲಿ ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತ ಮತ್ತು ತಂಡದ ಸದಸ್ಯರಿಂದ ಪ್ರಾರ್ಥನೆ, ನಾಡಗೀತೆ, ವಿಭಾಗ ಮುಖ್ಯಸ್ಥ ಡಾ ಪರಶಿವಮೂರ್ತಿ ಅವರಿಂದ ಸ್ವಾಗತ, ಅಧೀಕ್ಷಕರಾದ ರೂಪ ಮತ್ತು ಉಪನ್ಯಾಸಕರಾದ ಮಹೇಂದ್ರ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.










