
ಮಡಿಕೇರಿ ಜೂ.11 NEWS DESK : ಕಳೆದ ಅನೇಕ ವರ್ಷಗಳಿಂದ ಲೈನ್ ಮನೆಗಳು ಮತ್ತು ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಬಡ ಕೂಲಿ ಕಾರ್ಮಿಕ ವರ್ಗಕ್ಕೆ ಸರಕಾರ ಶೀಘ್ರ ನಿವೇಶನ ಅಥವಾ ವಸತಿ ಸೌಲಭ್ಯ ಕಲ್ಪಿಸಬೇಕು. ವನ್ಯಜೀವಿ ದಾಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಎಐಟಿಯುಸಿ ಸಂಘಟನೆ ಒತ್ತಾಯಿಸಿದೆ.
ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ಕೃಷಿ ಕಾರ್ಮಿಕರು ಸ್ವಂತ ನಿವೇಶನ ಮತ್ತು ಮನೆ ಇಲ್ಲದೆ ಲೈನ್ ಮನೆಗಳು ಮತ್ತಿತರೆಡೆ ಬಾಡಿಗೆ ಮನೆ, ಗುಡಿಸಲುಗಳಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆಯನ್ನು ಒದಗಿಸಿಕೊಡಿ ಎಂದು ಕಳೆದ ಅನೇಕ ವರ್ಷಗಳಿಂದ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಸರಕಾರಗಳು ಬಡವರ ಕೂಗಿಗೆ ಸ್ಪಂದಿಸಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ಪೈಸಾರಿ ಭೂಮಿ ಇದ್ದರೂ ಇದು ಉಳ್ಳವರ ಪಾಲಾಗುತ್ತಿದೆಯೇ ಹೊರತು ಬಡ ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡುವ ಕಾಳಜಿಯನ್ನು ಜನಪ್ರತಿನಿಧಿಗಳು ತೋರುತ್ತಿಲ್ಲ ಎಂದು ಆರೋಪಿಸಿದರು.
ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿದ್ದ ಶಾಸಕರುಗಳು ಬಡವರಿಗೆ ನಿವೇಶನ ಅಥವಾ ವಸತಿ ಕಲ್ಪಿಸಲು ಯಾವುದೇ ಕಾಳಜಿ ತೋರಿರಲಿಲ್ಲ. ಆದರೆ ಪ್ರಸ್ತುತ ಬಂದಿರುವ ಕಾಂಗ್ರೆಸ್ ಶಾಸಕರುಗಳಾದರೂ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ವಿಶ್ವಾಸ ಸುಳ್ಳಾದರೆ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾರ್ಮಿಕ ವರ್ಗ ತಕ್ಕ ಪಾಠ ಕಲಿಸಲು ನಿರ್ಧರಿಸಿದೆ. ಆದ್ದರಿಂದ ಜಿಲ್ಲೆಯ ಶಾಸಕರುಗಳು ಆದಷ್ಟು ಶೀಘ್ರ ಬಡ ಕೃಷಿ ಕಾರ್ಮಿಕರಿಗೆ ಸ್ವಂತ ನಿವೇಶನ ಅಥವಾ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
::: ವನ್ಯಜೀವಿ ಹಾವಳಿ :::
ಕೊಡಗಿನ ಕಾಫಿ ತೋಟಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಇವರುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಕಾಡಾನೆ ಮತ್ತು ಹುಲಿಗಳ ದಾಳಿಯಾಗುತ್ತಿದೆ. ಕಾಡುಪ್ರಾಣಿಗಳ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಈ ಸಮಸ್ಯೆಯನ್ನು ಯಾವುದೇ ಸರಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ. ಕಾಡಾನೆಗಳ ಉಪಟಳದ ಅತಿರೇಕಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅರಣ್ಯ ಇಲಾಖೆಯ ಅಸಡ್ಡೆಯೇ ಪ್ರಮುಖ ಕಾರಣ. ದೈತ್ಯ ಕಾಡಾನೆಗಳು ದೊಡ್ಡ ಸಂಖ್ಯೆಯಲ್ಲಿ ತೋಟಗಳ ನಾಶದಲ್ಲಿ ತೊಡಗಿವೆ. ಬೆಳೆಗಾರರು ಹಾಗೂ ಕಾರ್ಮಿಕರು ಆತಂಕದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ.
ಕಾಡಾನೆಗಳು ಮನುಷ್ಯರ ಮೇಲಿನ ದಾಳಿಯನ್ನು ಮುಂದುವರೆಸಿವೆ. ಅರಣ್ಯ ಇಲಾಖೆ ಪರಿಹಾರದ ಚೆಕ್ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ನಾಳಿನ ಅಪಾಯದ ಬಗ್ಗೆ ಅದಕ್ಕೆ ಚಿಂತೆ ಇಲ್ಲದಾಗಿದೆ. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಆನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ನೀಡಿದ ಭರವಸೆ ಇಲ್ಲಿಯವರೆಗೆ ಈಡೇರಿಲ್ಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 4 ತಿಂಗಳಿನಲ್ಲಿ ಜಿಲ್ಲೆಯಲ್ಲಿ ಕಾಡಾನೆಗಳು ಮಾಡಿದ ದಾಳಿಯಿಂದ ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಕೃಷಿ ಫಸಲುಗಳು ನಾಶವಾಗಿವೆ. ಹಾಡಹಗಲೇ ಮುಖ್ಯ ರಸ್ತೆಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳು ಜೀವಭಯ ಮೂಡಿಸುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ.
ಭಯದಿಂದ ಕಾರ್ಮಿಕರು ತೋಟಗಳಿಗೆ ತೆರಳುತ್ತಿಲ್ಲ. ಬದುಕಿಗಾಗಿ ಕೂಲಿ ಕೆಲಸವನ್ನು ಅವಲಂಬಿಸಿರುವ ಬಡ ಕಾರ್ಮಿಕರು ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಎಂದು ಗಮನ ಸೆಳೆದರು.
ಕಾಡಾನೆ ಹಾವಳಿಯ ನೈಜತೆಯನ್ನು ಅಧ್ಯಯನ ಮಾಡಬೇಕು, ಕಾಡಾನೆ ದಾಳಿಗೆ ತುತ್ತಾಗಿ ಗಾಯಗೊಂಡವರನ್ನು ನಿರ್ಲಕ್ಷಿಸದೆ ಅವರು ಗುಣಮುಖರಾಗುವವರೆಗಿನ ಸಂಪೂರ್ಣ ಖರ್ಚುವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಬೇಕು ಮತ್ತು ಶಾಶ್ವತವಾದ ವೈಜ್ಞಾನಿಕ ರೂಪದ ಬೃಹತ್ ಯೋಜನೆಯೊಂದನ್ನು ರೂಪಿಸಬೇಕು ಎಂದು ಒತ್ತಾಯಿಸಿ ಜೂ.13 ರಂದು ಸೋಮವಾರಪೇಟೆಯಲ್ಲಿ ಎಐಟಿಯುಸಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸೋಮಪ್ಪ ತಿಳಿಸಿದರು.
ಈ ಪ್ರತಿಭಟನೆಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಜಿಲ್ಲಾ ವ್ಯಾಪಿ ಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಪಿ.ಸುಂದರ, ತಾಲ್ಲೂಕು ಸಂಚಾಲಕ ಶೇಷಪ್ಪ, ಪ್ರಮುಖರಾದ ಕೆ.ಎಂ.ಮಂಜುನಾಥ್ ಹಾಗೂ ಶಬಾನ ಉಪಸ್ಥಿತರಿದ್ದರು.








