
ಮಡಿಕೇರಿ NEWS DESK ನ.24 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ.26 ರಂದು ನಡೆಯುವ 34ನೇ ಕೊಡವ ನ್ಯಾಷನಲ್ ಡೇ ಮತ್ತು ಭಾರತೀಯ ಸಂವಿಧಾನ ದಿನಾಚರಣೆಯ ಯಶಸ್ಸಿಗಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪ್ರಮುಖರು ದೇವಟ್ ಪರಂಬುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿ ಸಿಎನ್ಸಿ ಬೇಡಿಕೆಗಳ ಈಡೇರಿಕೆಗೆ ಶಕ್ತಿ ತುಂಬುವಂತೆ ಕೋರಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಮತ್ತು ಎಸ್ಟಿ ಟ್ಯಾಗ್ ನೀಡಬೇಕು. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವ ಬುಡಕಟ್ಟಿನ ಮಾತೃ ಮಣ್ಣಿನಲ್ಲಿ ಐತಿಹಾಸಿಕ ನಿರಂತರತೆಗಾಗಿ ಸಾರ್ವತ್ರಿಕ ಮನ್ನಣೆಯನ್ನು ಕಲ್ಪಿಸಬೇಕು. ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ “ಸಂಸ್ಕಾರ ಗನ್” ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ದೇವಟ್ಪರಂಬ್ ನಲ್ಲಿ ಅಂತಾರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೊಡವ ನ್ಯಾಷನಲ್ ಡೇ ಸಂದರ್ಭ ಮಂಡಿಸುವುದಾಗಿ ತಿಳಿಸಿದರು. ಮಂಗಳವಾರ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯುವ ಕೊಡವ ನ್ಯಾಷನಲ್ ಡೇ ಮತ್ತು ಭಾರತೀಯ ಸಂವಿಧಾನ ದಿನಾಚರಣೆಯಲ್ಲಿ ಸರ್ವ ಕೊಡವರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪoಡ ಮನೋಜ್ ಹಾಗೂ ಚೀಯಬೇರ ಸತೀಶ್ ಹಾಜರಿದ್ದು ಹಿರಿಯರಿಗೆ ಗೌರವ ಅರ್ಪಿಸಿದರು.










