ಮಡಿಕೇರಿ NEWS DESK ನ.24 : ಭಾರತೀಯ ಸೇನೆಗೆ ಅಪಾರ ಶಕ್ತಿಯನ್ನು ತುಂಬಿದ ಮತ್ತು ತಮ್ಮದೇ ಆದ ಕೊಡುಗೆಯನ್ನು ನೀಡಿದ ವಿಶ್ವ ವಿಖ್ಯಾತ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ವೀರ ಸೇನಾಧಿಕಾರಿಗಳಿಗೆ ಅಗೌರವ ತೋರಿದ ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಕೊಡಗು ಜಿಲ್ಲೆಯ ಹೆಮ್ಮೆಯ ವೀರಪುತ್ರರಾಗಿದ್ದಾರೆ. ಇವರ ಸೇನಾ ಸಾಧನೆಯ ಬಗ್ಗೆ ಅರಿವಿಲ್ಲದ ಕಿಡಿಗೇಡಿ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿ ಸಮಾಜದ ಸಾಮರಸ್ಯ ಕದಡುವ ಯತ್ನ ಮಾಡಿದ್ದಾನೆ. ದೇಶಭಕ್ತ ಯೋಧರನ್ನು ಅವಮಾನಿಸಿದ ಆರೋಪಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಈತನನ್ನು ಗಡಿಪಾರು ಮಾಡಬೇಕು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿ.ಜಿ.ಮೋಹನ್ ಆಗ್ರಹಿಸಿದ್ದಾರೆ.











