
ಮಡಿಕೇರಿ ಫೆ.11 NEWS DESK : ಪ್ರತಿನಿತ್ಯವೂ ದೇವರ ಭಜನೆ ಮಾಡುವುದರಿಂದ ವ್ಯಕ್ತಿಯ ಏಕಾಗ್ರತೆಯ ಜೊತೆಗೆ ಹಲವು ರೀತಿಯಲ್ಲಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ.ಕೆ. ದಿನೇಶ್ ಕುಮಾರ್ ಅಭಿಪ್ರಾಯಪಟ್ಟರು. ಕತ್ತಲೆಕಾಡು-ಜೇನುಕೊಲ್ಲಿ ಶ್ರೀ ವಿನಾಯಕ ಸೇವಾ ಟ್ರಸ್ಟ್ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳು ಎಳೆಯ ಪ್ರಾಯದಿಂದಲೇ ಭಜನೆ ಮುಂತಾದ ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಇದರಿಂದಾಗಿ ಭವಿಷ್ಯದಲ್ಲಿ ಅವರು ಸಮಾಜಕ್ಕಾಗಿ ತೊಡಗಿಸಿಕೊಳ್ಳಲು ಪ್ರೇರೇಪಣೆಯಾಗುತ್ತದೆ. ಮನುಷ್ಯ ಯಾವತ್ತೂ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಸಂಘಟನಾತ್ಮಕವಾಗಿ ಇದ್ದಾಗ ಮಾತ್ರ ಸಮಾಜದಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ ಎಂದರು. ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ವಿಚಾರಧಾರೆಗಳನ್ನು ಇತರರೊಡನೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸಂಘಟನೆ ಕಟ್ಟಿಕೊಂಡು ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ಭಾಗಿಯಾಗುವುದು ಸುಲಭದ ಕೆಲಸ ಅಲ್ಲ. ನಮ್ಮ ಸಂಸ್ಕೃತಿಯ ಉಳಿವಿಗೆ ಶ್ರಮಿಸುವ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿರಂತರ ಪ್ರಕ್ರಿಯೆ ನಮ್ಮಿಂದ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಸದಸ್ಯರಾದ ಸುರೇಶ್ ಮಾವಟ್ಕರ್ ಮತ್ತು ವೈ.ಆರ್. ಅಮೃತರಾಜ್ ಮಾತನಾಡಿ, ವಿನಾಯಕ ಸೇವಾ ಟ್ರಸ್ಟ್ನ ವಿದ್ಯಾರ್ಥಿ ಸದಸ್ಯರು ಭಜನೆ ತರಗತಿಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಭವಿಷ್ಯದ ಶಕ್ತಿಗಳಿಗೆ ಭಜನೆ ತರಬೇತಿ ನೀಡುತ್ತಿರುವುದು ನಮ್ಮ ಸೌಭಾಗ್ಯ. ಪ್ರತಿಯೊಬ್ಬ ಪೋಷಕರು ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಹೊನ್ನಪ್ಪ ಆಚಾರ್ಯ ಮಾತನಾಡಿ, ೧೭ ವರ್ಷದಿಂದ ವಿನಾಯಕ ಸೇವಾ ಸಮಿತಿ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೆವು. ಕಳೆದ ವರ್ಷದಿಂದ ಟ್ರಸ್ಟ್ ಅಧೀನದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಸಾರ್ವಜನಿಕರು, ದಾನಿಗಳ ನೆರವಿನಿಂದ ಟ್ರಸ್ಟ್ಗೆ ಜಾಗ ಖರೀದಿಸಿದ್ದು, ಮುಂದಿನ ದಿನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆಂದು ತಿಳಿಸಿದರು. ವಿನಾಯಕ ಸೇವಾ ಸಮಿತಿ ಹಾಗೂ ಟ್ರಸ್ಟ್ನ ವಾರ್ಷಿಕ ವರದಿಯನ್ನ ಟ್ರಸ್ಟ್ ಕಾರ್ಯದರ್ಶಿ ಬ್ರಿಜೇಶ್ ರೈ ಮಂಡಿಸಿದರು. ಭಜನೆ ತರಗತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಕಡಗದಾಳು ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ ಕರ್ಪಸ್ವಾಮಿ, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಯು. ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಜನಾರ್ದನ, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಯಶಸ್, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ಎಸ್. ಅಶೋಕ್, ಲೋಕೇಶ್ ರೈ, ಟ್ರಸ್ಟ್ ಪ್ರಮುಖರಾದ ರಮಣಿ ಶೇಷಪ್ಪ, ಲಲಿತ ಅಪ್ಪಯ್ಯ, ನವೀನ್ ಆಚಾರ್ಯ, ಚೈತನ್ಯ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು. ಟ್ರಸ್ಟ್ನ ವಿದ್ಯಾರ್ಥಿ ಘಟಕ ಸದಸ್ಯರು ಪ್ರಾರ್ಥಿಸಿದರು. ಚಂದ್ರಶೇಖರ್ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ರೈ ವಂದಿಸಿದರು.










