
ಕುಶಾಲನಗರ ಫೆ.12 NEWS DESK : ಎನ್ಸಿಸಿಯ ವಿಶೇಷ ಸಾಧನೆಗಳಿಗಾಗಿ ಕುಶಾಲನಗರ ತಾಲ್ಲೂಕಿನ ಹುಲುಸೆ ಗ್ರಾಮದ ಎನ್.ಸಿ.ಸಿ ಕೆಡೆಟ್ ಕ್ಯಾಪ್ಟನ್ ಹೆಚ್.ಎಸ್.ಕಿಶನ್ಗೆ ಮುಖ್ಯಮಂತ್ರಿಗಳ ಪ್ರಶಂಸಾ ಪದಕ ಲಭಿಸಿದೆ. ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿಇ ವಿದ್ಯಾರ್ಥಿಯಾಗಿರುವ ಕೆಡೆಟ್ ಕ್ಯಾಪ್ಟನ್ ಕಿಶನ್ ಎಚ್. ಎಸ್. ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ (ಎನ್ಸಿಸಿ)ಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಮುಖ್ಯಮಂತ್ರಿಗಳ ಪ್ರಶಂಸೆ ದೊರೆತಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಖ್ಯಮಂತ್ರಿಗಳ ಪರವಾಗಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರದಾನ ಮಾಡಿದರು. ಕೆಡೆಟ್ ಕ್ಯಾಪ್ಟನ್ ಕಿಶನ್ ಎನ್ಸಿಸಿ ಪ್ರಯಾಣವು ಹಲವಾರು ಪ್ರತಿಷ್ಠಿತ ಸಾಧನೆಗಳಿಂದ ಗುರುತಿಸಲ್ಪಟ್ಟಿದೆ. 2023 ರಲ್ಲಿ ಉಡುಪಿಯ ಅರೇಬಿಯನ್ ಸಮುದ್ರದಲ್ಲಿ ಸಾಗರ ನೌಕಾಯಾನ ದಂಡಯಾತ್ರೆಯಲ್ಲಿ ಭಾಗವಹಿಸಿ 240 ಕಿಮೀ (Whaler) ವೇಲರ್ ನೌಕಾಯಾನವನ್ನು ಯಶಸ್ವಿಯಾಗಿ ಕ್ರಮಿಸಿದ್ದರು. ಕರಾವಳಿಯುದ್ದಕ್ಕೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 2024 ರಲ್ಲಿ ಆಲ್ ಇಂಡಿಯಾ ನೌಕಾ ಸೈನಿಕ್ ಕ್ಯಾಂಪ್ (INS ಶಿವಾಜಿ, ಲೋನಾವಾಲ) ನಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದನು. ಆರೋಗ್ಯ ಮತ್ತು ನೈರ್ಮಲ್ಯ ಪರೀಕ್ಷೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಇವರ ಸ್ಪರ್ಧೆಯಲ್ಲಿ 17 ನಿರ್ದೇಶನಾಲಯಗಳಲ್ಲಿ ಕರ್ನಾಟಕ ಮತ್ತು ಗೋವಾ 4 ನೇ ಸ್ಥಾನವನ್ನು ಗಳಿಸಿತ್ತು. ಅವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾದ RDC 2025 ರ ಸಮಯದಲ್ಲಿ ಬಂದಿತ್ತು. ಅಲ್ಲಿ ಅವರು ಗಂಗಾ ನದಿಯಲ್ಲಿ ವಿಶೇಷ ನೌಕಾಯಾನ ದಂಡಯಾತ್ರೆಯಲ್ಲಿ (SSE) ಭಾಗವಹಿಸಿದ್ದರು. ಪಾಟ್ನಾದಿಂದ ನ್ಯೂ ಫರಕ್ಕಾವರೆಗೆ ಬರೋಬ್ಬರಿ 240 ಕಿ.ಮೀ. ಕ್ರಮಿಸುವ ಮೂಲಕ ಕರ್ನಾಟಕ ಮತ್ತು ಗೋವಾದ 24 ಸದಸ್ಯರ ತುಕಡಿಯ ಭಾಗವಾಗಿದ್ದರು. ಭಾರತದಾದ್ಯಂತ ಇತರೇ NCC ನಿರ್ದೇಶನಾಲಯಗಳ ಕೆಡೆಟ್ಗಳೊಂದಿಗೆ ನೌಕಾಯಾನ ಮಾಡಿದ ಕೀರ್ತಿ ಕಿಶನ್ ರದ್ದಾಗಿದೆ. ಇದರ ನಂತರ, ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ನಡೆದ ಪ್ರಧಾನ ಮಂತ್ರಿಗಳ ರ್ಯಾಲಿಯಲ್ಲಿ ವಿಶೇಷ ನೌಕಾಯಾನ ದಂಡಯಾತ್ರೆಯ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಮತ್ತು ಗೋವಾದ ಏಕೈಕ ಹಿರಿಯ ವಿಭಾಗದ (SD) ಕೆಡೆಟ್ ಆಗಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು.
ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ, ಅವರು ಭಾಗವಹಿಸುವ ಪ್ರತಿಯೊಂದು ನಿರ್ದೇಶನಾಲಯದಿಂದ ಒಬ್ಬ ಕೆಡೆಟ್ ಜೊತೆಗೆ ಮೆರವಣಿಗೆ ನಡೆಸಿದ್ದರು.
ಇದು ರಾಷ್ಟ್ರೀಯ ಮಟ್ಟದಲ್ಲಿ ದಂಡಯಾತ್ರೆಯ ಮಹತ್ವವನ್ನು ಪ್ರದರ್ಶಿಸಿತ್ತು.
ಈ ಸಂದರ್ಭ ಮಾತನಾಡಿದ ಕಿಶನ್, ಎನ್ಸಿಸಿಗೆ ಸೇರಿದ್ದು ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು. ಇದು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ನನ್ನ ಕನಸನ್ನು ಪುನರುಜ್ಜೀವನಗೊಳಿಸಿತು. ಮತ್ತು ತರಬೇತಿ ನೀಡಲು, ಸ್ಪರ್ಧಿಸಲು ಮತ್ತು ಮುನ್ನಡೆಸಲು ನನಗೆ ಅವಕಾಶಗಳನ್ನು ನೀಡಿತು. ಕಠಿಣ ಶಿಬಿರಗಳು, ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೆ ಒಗ್ಗಿಕೊಳ್ಳುವುದು ನನ್ನ ಸಮರ್ಪಣೆಯನ್ನು ಬಲಪಡಿಸಿದೆ ಮತ್ತು ನನ್ನ ಆಕಾಂಕ್ಷೆಗಳನ್ನು ರೂಪಿಸಿದೆ” ಎಂದು ಕೆಡೆಟ್ ಕ್ಯಾಪ್ಟನ್ ಕಿಶನ್ ತಮ್ಮ ಪ್ರಯಾಣವನ್ನು ನೆನಪಿಸಿಕೊಂಡರು. ಎನ್ಸಿಸಿ ಮೂಲಕ, ಅವರು ವಿವಿಧ ರಕ್ಷಣಾ ಪಡೆಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸುವ ಅವಕಾಶ ಹಾಗೂ ಮಾರ್ಗದರ್ಶನವನ್ನು ಪಡೆದಿದ್ದಾರೆ. ಪ್ರಧಾನ ಮಂತ್ರಿ, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು, ರಕ್ಷಣಾ ಸಚಿವರು ಮತ್ತು ಎನ್ಸಿಸಿ ಮಹಾನಿರ್ದೇಶಕರನ್ನು ವೀಕ್ಷಿಸುವ ಮತ್ತು ಭೇಟಿಯಾಗುವ ಸದವಕಾಶ ದೊರಕಿದ್ದು, ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯ ಹಾಗೂ ನನ್ನ ಕುಟುಂಬ ಹಾಗೂ ನನ್ನ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಹೇಳ ಹೇಳುತ್ತಲೇ ಕಿಶನ್ ಕಂಗಳಲ್ಲಿ ಆನಂದ ಭಾಷ್ಪ ಹನಿ ಹನಿಯಾಗಿ ಜಾರುತಿತ್ತು. ಶಿಸ್ತು ಮತ್ತು ರಾಷ್ಟ್ರೀಯ ಸೇವೆಯ ಆಕಾಂಕ್ಷಿಗಳಾದ ಯುವ ಕೆಡೆಟ್ಗಳಿಗೆ ವೀರ ಯೋಧರು ಹಾಗೂ ಕ್ರೀಡಾ ಕಲಿಗಳ ಜಿಲ್ಲೆ ಕೊಡಗಿನ ಕುವರ ಕಿಶನ್ ಸಾಧನೆ ಸ್ಫೂರ್ತಿದಾಯಕ ವಾಗಿದೆ. ಸಾಧಕ ವಿದ್ಯಾರ್ಥಿ ಹೆಚ್.ಎಸ್.ಕಿಶನ್ ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಪಂ ಸದಸ್ಯರೂ ಆಗಿರುವ ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕ ಹೆಚ್.ಎನ್.ಶಿವನಂಜಪ್ಪ ( ಮಹೇಶ್ ) ಹಾಗೂ ಸರಿತಾ ದಂಪತಿಗಳ ಪುತ್ರ.
ವಿಶೇಷ ವರದಿ : ಕೆ.ಎಸ್.ಮೂರ್ತಿ









