ಸೋಮವಾರಪೇಟೆ ಫೆ.13 NEWS DESK : 10 ಕೋಟಿ ರೂ.ಗಳ ವೆಚ್ಚದ ಐಗೂರು ಸೇತುವೆ ಕಾಮಗಾರಿಯನ್ನು ಒಂದು ವಾರದಲ್ಲಿ ಪ್ರಾರಂಭಿಸದಿದ್ದರೆ, ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕ ಡಾ.ಮಂತರ್ಗೌಡ ಎಚ್ಚರಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ತಾಲ್ಲೂಕಿನಲ್ಲಿ ವೈಪಲ್ಯಗೊಂಡಿದೆ. ಅಧಿಕಾರಿಗಳು ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ 90 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳು ಮಳೆಗಾಲದೊಳಗೆ ಮುಗಿಯಬೇಕಿದೆ. ಕಾಮಗಾರಿ ಪೂರ್ಣಗೊಂಡರೆ ಮಾತ್ರ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂದು ಹೇಳಿದರು. 20 ಕೋಟಿ ರೂ.ಗಳ ವೆಚ್ಚದ ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗದ ರಸ್ತೆ ಮಾರ್ಗ ಸ್ನೈಲ್ಸ್(ಗೊಣ್ಣೆಹುಳ) ವೇಗದಲ್ಲಿದೆ. 15 ಕೋಟಿ ರೂ.ಗಳ ವೆಚ್ಚದ ಅರೆಯೂರು ಹೊಸಳ್ಳಿ, ಸೀಗೆಹೊಸೂರು ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ಮಳೆಗಾಲ ಪ್ರಾರಂಭವಾಗುವ ಮೊದಲು 90 ಕೋಟಿ ರೂ.ಗಳ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. ರಾಜ್ಯ ಹೆದ್ದಾರಿ ಬದಿ ಕಾಡು ಕಡಿಯುವುದು, ಗುಂಡಿಗಳನ್ನು ಮುಚ್ಚು ಕಾಮಗಾರಿಯಲ್ಲಿ ಬಹುತೇಕ ಮೋಸ ನಡೆಯುತ್ತಿದೆ. ಕಾಮಗಾರಿ ಕಳಪೆಯಾಗುತ್ತಿದೆ. ಅಲ್ಪಸ್ವಲ್ಪ ಕಾಡನ್ನು ಕಡಿಯಲಾಗುತ್ತಿದೆ. ಗುಣಮಟ್ಟವಲ್ಲದ ಜೆಲ್ಲಿ ಹಾಗೂ ತಾರನ್ನು ಸುರಿಯುತ್ತಿದ್ದಾರೆ ಎಂದು ಸರ್ಕಾರದ ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಬಿ.ಎಂ.ಕಾಂತರಾಜು, ಸದಸ್ಯರಾದ ಸಬಿತಾ ಚನ್ನಕೇಶವ, ವೇದಕುಮಾರ್, ಸೂಡ ಅಧ್ಯಕ್ಷ ಕೆ.ಎ.ಆದಂ ಆರೋಪಿಸಿದರು. ಶೇ.30ರಷ್ಟು ಬಿಲೊ ಹಾಕಿ ಟೆಂಡರ್ ಪಡೆಯುವ ಗುತ್ತಿದಾರ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಇಂಜಿನಿಯರ್ಗಳು ಶಾಮೀಲಾಗದೆ ಕರ್ತವ್ಯ ನಿರ್ವಹಿಸಿದರೆ, ಬಿಲೊ ಹಾಕಿ ಯಾರು ಟೆಂಡರ್ ಪಡೆಯಲು ಸಾಧ್ಯವಿಲ್ಲ. ಕಂಪನಿ ಎಸ್ಟೇಟ್ ಅವರ ತೋಟ ಎರಡು ಬದಿಯಲ್ಲಿ ಅವರುಗಳು ಸ್ವಚ್ಚಗೊಳಿಸಿಕೊಳ್ಳುತ್ತಾರೆ. ಅದನ್ನು ಸೇರಿಸಿಯೇ ಬಿಲ್ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಹೇಳಿದರು. ಮುಂದೆ ಹೀಗಾದರೆ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು ಎಂದು ಎಇಇ ಅವರಿಗೆ ಎಚ್ಚರಿಸಿದರು. ಕೂಡಲೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಆದೇಶ ನೀಡಲಾಗುವುದು. ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ ನಾಯಕ್ ಹೇಳಿದರು. ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿಗೆ ಸಂಬಂಧಪಟ್ಟಂತೆ 160 ಅಂಗನವಾಡಿಗಳಿದ್ದು, 9 ಸಾವಿರ ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು. ಕೆಲ ಅಂಗನವಾಡಿಗಳಲ್ಲಿ ಮಕ್ಕಳೆ ಇರುವುದಿಲ್ಲ. ಅಲ್ಲಿನ ಶಿಕ್ಷಕರು ಕೂಡ ಪಾಳಿಯಲ್ಲಿ ಕೆಲಸ ಮಾಡಿತ್ತಿದ್ದಾರೆ. ತಲಾ ಮೂರು ದಿನಗಳಲ್ಲಿ ಒಬ್ಬೊಬ್ಬರು ಕಾಫಿ ಕುಯ್ಯಲು ಹೋಗುತ್ತಾರೆ ಎಂದು ಸಬಿತಾ ಆರೋಪಿಸಿದರು. ಬಡವರಿಗೆ ಸಿಗಬೇಕಾದ ಪೌಷ್ಠಿಕ ಆಹಾರಗಳು ಯಾರ್ಯಾರೋ ಮನೆ ಸೇರುತ್ತಿವೆ ಎಂದು ದೂರಿದರು. 160 ಅಂಗನವಾಡಿಯಲ್ಲಿ 9 ಸಾವಿರ ಮಕ್ಕಳು ಇರುವುದು ಸಾಧ್ಯವೇ ಇಲ್ಲ. ಇದು ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಒಂದು ಅಂಗನವಾಡಿಯಲ್ಲಿ 56 ಮಕ್ಕಳು ಎಲ್ಲಿಯೂ ಇಲ್ಲ. ಹೆಚ್ಚು ಮಕ್ಕಳನ್ನು ತೋರಿಸಿ ಇಲಾಖೆ ಸರ್ಕಾರ ಮೋಸ ಮಾಡುತ್ತಿದೆ. ಪ್ರತಿ ಅಂಗನವಾಡಿಯಲ್ಲಿರುವ ಮಕ್ಕಳ ಪಕ್ಕಾ ಲೆಕ್ಕವನ್ನು ಕೂಡಲೆ ಸಲ್ಲಿಸಬೇಕು ಎಂದು ಶಾಸಕರು ಅಧಿಕಾರಿಗೆ ಸೂಚಿಸಿದರು. ದುಂಡಳ್ಳಿ, ಯಸಳೂರು ಮಾರ್ಗದ ರಸ್ತೆ ಕಾಮಗಾರಿ ಪೂರೈಸಲು ಅರಣ್ಯ ಇಲಾಖೆ ಸಹಕಾರ ನೀಡಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಕೊಡಬೇಕು ಎಂದು ಎಸಿಎಫ್ ಗೋಪಾಲ್ ಅವರಿಗೆ ಶಾಸಕರು ಸೂಚಿಸಿದರು. ತಾಲ್ಲೂಕಿನ ಗಿರಿಜನರ ಹಾಡಿಯಲ್ಲಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಿದ್ದ 130 ಮಂದಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. 6 ಅರ್ಜಿಗಳು ಬಾಕಿಯಾಗಿವೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಹೇಳಿದರು. ಕೆಲ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯದಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಇಲಾಖಾಧಿಕಾರಿಗಳಿಗೂ ಹೆದರುತ್ತಿಲ್ಲ ಎಂದು ವೇದಕುಮಾರ್ ದೂರಿದರು. ಸೋಮವಾರಪೇಟೆ ತಾಲ್ಲೂಕು ಕಚೇರಿಯಲ್ಲಿ ದುರಸ್ತಿಗಾಗಿ 6000 ಫೈಲಗಳಿವೆ. ಅವುಗಳು ವಿಲೇವಾರಿಯಾಗಬೇಕಾದರೆ ಎರಡೂವರೆ ವರ್ಷಗಳು ಬೇಕಾಗಬಹುದು. 735 ಫೈಲ್ಗಳು ದುರಸ್ತಿಯಾಗಿವೆ. ಕಳೆದ ಒಂದು ತಿಂಗಳಲ್ಲಿ 200 ಫೈಲ್ಗಳನ್ನು ಎಡಿಎಲ್ಆರ್ಗೆ ಕಳುಹಿಸಿದ್ದೇನೆ ಎಂದು ತಹಸೀಲ್ದಾರ್ ಕೃಷ್ಣಮೂರ್ತಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಹೇಳಿದರು.











