![](https://newsdeskkannada.com/wp-content/uploads/2025/02/Z-ND-ADVT-18.jpg)
![](https://newsdeskkannada.com/wp-content/uploads/2025/02/Z-ADVT-TEACHERS-11.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-9.jpg)
ಮಡಿಕೇರಿ ಫೆ.15 NEWS DESK : ಅರೆಭಾಷಾ ಸಾಹಿತ್ಯ, ಸಂಸ್ಕೃತಿ ಮತ್ತು ಅದರ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಈ ಕುರಿತು ಮಾಹಿತಿ ನೀಡಿ, 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ‘ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ’ ಕ್ಷೇತ್ರದ ಸಾಧನೆಗಾಗಿ ಕೊಡಗಿನ ಡಾ.ಕಾವೇರಿಮನೆ ಬೋಜಪ್ಪ, ‘ಅರೆಭಾಷೆ ಮತ್ತು ಸಂಸ್ಕೃತಿಯ ಸೇವೆ’ಗಾಗಿ ತುಂತಜೆ ವೆಂಕಟೇಶ್(ಗಣೇಶ್) ಮತ್ತು ‘ಶಿಕ್ಷಣ ಮತ್ತು ವೈದ್ಯಕೀಯ ಸೇವೆ’ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಕೆ.ವಿ.ಚಿದಾನಂದ ಅವರು ಪಡೆದುಕೊಂಡಿದ್ದಾರೆಂದರು. 2023ನೇ ಸಾಲಿನ ಗೌರವ ಪ್ರಶಸ್ತಿಗೆ ‘ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿ ಸೇವೆ’ಗಾಗಿ ಕೊಡಗಿನ ಕುಯಿಂತೋಡು ದಾಮೋದರ, ‘ಅರೆಭಾಷಾ ಅಧ್ಯಯನ ಮತ್ತು ಸಂಶೋಧನೆ’ಗಾಗಿ ದಕ್ಷಿಣ ಕನ್ನಡದ ಎ.ಕೆ. ಹಿಮಕರ ಮತ್ತು ‘ಅರೆಭಾಷಾ ಸಾಧನೆ ಮತ್ತು ಕಲಾ ಪೋಷಕ’ರ ನೆಲೆಯಲ್ಲಿ ಕೊಡಗಿನ ಕೂಡಕಂಡ ಕಾವೇರಮ್ಮ ಸೋಮಣ್ಣ ಅವರುಗಳು ಆಯ್ಕೆಯಾಗಿದ್ದಾರೆಂದು ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಫೆ.28 ರಂದು ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಅವರುಗಳು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.
ಸಂಶೋಧನಾ ಪ್ರಬಂಧಗಳ ಬಿಡುಗಡೆ :: ಸಮಾರಂಭದಲ್ಲಿ ಅರೆಭಾಷಾ ಅಕಾಡೆಮಿಯ ಫೆಲೋಶಿಪ್ನಡಿ ಅರೆಭಾಷೆಗೆ ಸಂಬಂಧಿಸಿದ ವಿವಿಧ ವಿಷಯಗಳಡಿ ಸಂಶೋಧನೆಗಳನ್ನು ನಡೆಸಲಾಗಿತ್ತು. ಅದರಂತೆ ಡಾ. ಪುರುಷೋತ್ತಮ ಕೆ.ವಿ., ಬೇಕಲ್ ಲೀಲಾವತಿ, ಲೋಕೇಶ್ ಪೆರ್ಲಂಪಾಡಿ, ಕೆ.ಆರ್.ತೇಜ ಕುಮಾರ್, ಡಿ.ಸಿ.ನಂಜುಂಡ ಮತ್ತು ಸೀತಾರಾಮ ಕೇವಳ ಅವರ ಸಂಶೋಧನಾ ಪುಸ್ತಕಗಳನ್ನು ಬಿಡುಗಡೆಮಾಡಲಾಗುತ್ತದೆಂದು ಮಾಹಿತಿಯನ್ನಿತ್ತರು.
ವಿವಿಧ ಪುಸ್ತಕಗಳ ಅನಾವರಣ :: ಪುಸ್ತಕ ಪ್ರಕಟಣೆಗಾಗಿ ಅಕಾಡೆಮಿ ನಿಡಿದ್ದ ಆಹ್ವಾನದಂತೆ ವಿವಿಧ ಲೇಖಕರು ಸಲ್ಲಿದ್ದ ಪುಸ್ತಕಗಳಲ್ಲಿ ಆಯ್ದೆ ಪುಸ್ತಕಗಳ ಲೋಕಾರ್ಪಣೆ ಕಾರ್ಯ ಇದೇ ಸಂದರ್ಭ ನಡೆಸಲು ಉದ್ದೇಶಿಸಲಾಗಿದೆ. ವಿಮಲಾ ಅರುಣ ಅವರ ‘ಸೂಂತ್ರಿ’, ಕುಕ್ಕನೂರು ರೇಷ್ಮ ಅವರ ‘ಕಥಾ ಸಂಕಲನ’, ಲೀಲಾ ದಾಮೋದರ ಅವರು ರಚಿಸಿರುವ ‘ಸಾಲು ದೀಪ’ ಪುಸ್ತಕ ಬಿಡುಗಡೆಯಾಗಲಿದೆಯೆಂದು ವಿವರಗಳನ್ನಿತ್ತರು.
ವಾದ್ಯ ಪರಿಕರಗಳ ವಿತರಣೆ :: ಸಮಾರಂಭದಲ್ಲಿ ಅಕಾಡೆಮಿ ವತಿಯಿಂದ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಗುವುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಪೂಲಕಂಡ ಸಂದೀಪ್ ಹಾಗೂ ಪೊನ್ನಚ್ಚನ ಮೋಹನ್ ಉಪಸ್ಥಿತರಿದ್ದರು.