
ಮಡಿಕೇರಿ ಫೆ.17 NEWS DESK : ಮಹಾನ್ ಮಾನವತಾವಾದಿ ಸಂತ ಸೇವಾಲಾಲ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ವೆಂಕಟ ನಾಯಕ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲೆಮಾರಿ ಜನ ಸಮುದಾಯದ ಬಂಜಾರ, ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ ಗೋರ್, ಸೋನಾರ್, ಲೋಹಾರ್, ಬಾಜೀಗರ್ ಮತ್ತಿತರ ಅನೇಕ ಉಪನಾಮಗಳಿಂದ ಗುರುತಿಸಲ್ಪಡುವ ಬಂಜಾರರು ಮೂಲತಃ ದಿನಸಿ ಮತ್ತು ಲವಣದ ವ್ಯಾಪಾರಿಯಾಗಿದ್ದರು ಎಂದು ಅವರು ವೆಂಕಟ್ ನಾಯಕ್ ಅವರು ವಿವರಿಸಿದರು. ಲಂಬಾಣಿ, ಬಂಜಾರ ಸಮಾಜ ಬಗ್ಗೆ ಮಹಾಭಾರತದಲ್ಲಿಯೇ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ ಎಂದು ತಿಳಿಸಿದರು. ಸಂತ ಸೇವಾಲಾಲ್ ಅವರು 1739 ಫೆಬ್ರವರಿ 15 ರಂದು ಸೂರಗೊಂಡನ ಕೊಪ್ಪದಲ್ಲಿ ಜನಿಸಿದರೆಂದು ಹೇಳಲಾಗುತ್ತದೆ. ಗೋವುಗಳ ಸಂರಕ್ಷಣೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ನುಡಿದರು. ಲಂಬಾಣಿ ಭಾಷೆ, ಸಂಸ್ಕøತಿ ಆಚಾರ-ವಿಚಾರ ಉಡುಗೆ-ತೊಡುಗೆ ವೈಶಿಷ್ಟ್ಯತೆಯಿಂದ ಕೂಡಿದೆ. ಸಮಾಜದ ಮುಖ್ಯವಾಹಿನಿಯಿಂದ ಬಂಜಾರ ಸಮಾಜವು ಇನ್ನೂ ಸಹ ದೂರವಿದ್ದು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಸಂತ ಸೇವಾಲಾಲ್ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ತಾವು ಓದಬೇಕು, ಇತರರನ್ನು ಓದಿಸಬೇಕು ಎಂಬ ಆಶಯ ಹೊಂದಿದ್ದರು ಎಂದು ವೆಂಕಟ ನಾಯಕ್ ಅವರು ತಿಳಿಸಿದರು. ಬಂಜಾರ, ಲಂಬಾಣಿ ಸಮಾಜಕ್ಕೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಮತ್ತಿತರ ರಾಜ್ಯಗಳು ಸೇರಿದಂತೆ, ದೇಶ ವಿದೇಶಗಳಲ್ಲಿ ಲಂಬಾಣಿ ಸಮಾಜದವರು ಇದ್ದಾರೆ ಎಂದರು. ಪ್ರತಿ ತಾಂಡಗಳಲ್ಲಿ ಮನುಷ್ಯನಾಗಿ ಜನಿಸಿ ಒಂದು ಜನಾಂಗದ ಏಳಿಗೆಗಾಗಿ ಸಂತ ಸೇವಾಲಾಲ್ ಸಿದ್ಧಾಂತ ಮತ್ತು ವಿಚಾರಗಳು ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು ಎಂದು ಹೇಳಿದರು.ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಗೋಧಿ ಸಸಿಯನ್ನು ಬೆಳೆದು ‘ತೀಜ್ ಹಬ್ಬ’ವೆಂದು ಪ್ರಸ್ತುತಗೊಂಡಿರುವ (ಮನೆ ಮನೆ ಪೂಜೆ) ಘರೆ ಘರೇರ್ ಹಬ್ಬ ಆಚರಿಸಿದಾಗ ಕನಿಷ್ಠ ಒಂದೆರಡು ಕುರಿಗಳನ್ನು ಪ್ರತಿಯೊಬ್ಬ ಬಂಜಾರ ಕುಟುಂಬ ಮರಿಯಮ್ಮಗೆ ಬಲಿಕೊಟ್ಟು ಬೀಗರಿಗೆ ಉಣಿಸುವುದು ವಾಡಿಕೆ. ಈ ಹಬ್ಬ ಬಂತೆಂದರೆ ಸುತ್ತಲ ಹಳ್ಳಿಗಳ ಭಲೇ ಖುಷಿ ಪಡುತ್ತಾರೆ ಎಂದು ವಿವರಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕರಾದ ಕುಮಾರ ಅವರು ಮಾತನಾಡಿದರು, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ. ಕವಿತಾ, ಗಣಿ ಮತ್ತು ಭೂವಿಜ್ಮಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನಾಗರಾಜು, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಮಣಜೂರು ಮಂಜುನಾಥ್ ಇತರರು ಇದ್ದರು.









