
ಮಡಿಕೇರಿ ಫೆ.19 NEWS DESK : ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 21 ನೆರೆ ಸಂತ್ರಸ್ತ ಕುಟುಂಬಸ್ಥರಿಗೆ ನೀಡಲಾದ ಜಾಗದಲ್ಲಿ ಹಾಕತ್ತೂರು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಹೊರತು ಶಾಸಕರು ಭೂಮಿಪೂಜೆ ಮಾಡಿದ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಮೇಕೇರಿ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿಗೇರಿ ಗ್ರಾಮದಲ್ಲಿ 21 ನೆರೆ ಸಂತ್ರಸ್ತ ಕುಟುಂಬಗಳಿಗೆ ಮೀಸಲಿಟ್ಟಿರುವ ಜಾಗದಲ್ಲಿ ಹಾಕತ್ತೂರು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಹೊರಟಿದೆ ಎಂದು ಮೇಕೇರಿ ಗ್ರಾ.ಪಂ ಗ್ರಾಮ ಸಭೆಯಲ್ಲಿ ಬಿಳಿಗೇರಿ ಗ್ರಾಮದ ವಾರ್ಡ್ ನಂ.2ರ ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಮೇಕೇರಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 1 ಏಕರೆ 88 ಸೆಂಟ್ ಹಾಗೂ ಹಾಕತ್ತೂರು ಪಂಚಾಯಿತಿ ಕಟ್ಟಡಕ್ಕೆಂದು 20 ಸೆಂಟ್ ಜಾಗವನ್ನು ಹದ್ದುಬಸ್ತು ಸರ್ವೆ ಮಾಡಲಾಗಿದೆ. 20 ಸೆಂಟು ಜಾಗದಲ್ಲಿ ಹಾಕತ್ತೂರು ಪಂಚಾಯಿತಿಯ ಕಟ್ಟಡ ನಿರ್ಮಿಸಲು ನಮ್ಮ ಅಭ್ಯಂತರವಿಲ್ಲ ಎಂದು ಸರ್ವ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದರು. ಹಾಕತ್ತೂರು ಗ್ರಾ.ಪಂ ಹಾಗೂ ಮೇಕೇರಿ ಗ್ರಾ.ಪಂ ಸೇರಿ ಹದ್ದುಬಸ್ತು ಸರ್ವೆ ನಡೆಸಿ 20 ಸೆಂಟು ಜಾಗದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಅಭ್ಯಂತರವಿರುವುದಿಲ್ಲವೆಂದು ಪತ್ರದ ಮೂಲಕ ತಿಳಿಸಲಾಗಿದೆ. ಆದರೆ ಜ.18 ರಂದು ಹಾಕತ್ತೂರು ಪಂಚಾಯಿತಿ ಟೆಂಡರ್ ಕರೆದಿದ್ದು, ಈ ಬಗ್ಗೆ ಮೇಕೇರಿ ಪಂಚಾಯಿತಿ ಅವರಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಹಾಕತ್ತೂರು ಪಂಚಾಯಿತಿ ಅವರಿಗೆ ಮೇಕೇರಿ ಪಂಚಾಯಿತಿಯಿಂದ ಪತ್ರ ಕಳುಹಿಸಿದರೂ ಇಲ್ಲಿಯವರೆಗೆ ಅವರು ನಮಗೆ ಯಾವುದೇ ಉತ್ತರ ನೀಡಿಲ್ಲ ಎಂದು ಆರೋಪಿಸಿದರು. ಭೂಮಿಪೂಜೆ ಮಾಡಿದ ಜಾಗದಲ್ಲಿ ಕಾಮಗಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಹಾಕತ್ತೂರು ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಮೇಕೇರಿ ಗ್ರಾಮ ಪಂಚಾಯಿತಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು. ಬಿಳಿಗೇರಿ ವಾರ್ಡ್ ನಂಬರ್ 2ರ ಮೇಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಖಾಸಗಿ ಜಾಗದಲ್ಲಿ ಹಾಕತ್ತೂರು ಪಂಚಾಯಿತಿ ಮೂರು ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿದೆ. ಈ ವಿಷಯವಾಗಿ ಹಾಕತ್ತೂರು ಪಂಚಾಯಿತಿಗೆ ಖಾಸಗಿ ಜಾಗ ದಾನ ಮಾಡಿದ ಕರಾರು ಪತ್ರದ ಒಂದು ಪ್ರತಿಯನ್ನು ನೀಡುವಂತೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪತ್ರದ ಪ್ರತಿಯನ್ನು ನೀಡಿರುವುದಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು. ಹಾಕತ್ತೂರು ಪಂಚಾಯಿತಿಯವರು 1 ಏಕರೆ 88 ಸೆಂಟ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಅದಕ್ಕೆ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ. ನೆರೆಸಂತ್ರಸ್ತರಿಗಾಗಿ ಮೀಸಲಿಟ್ಟ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎ.ಎ.ಅಬ್ದುಲ್ ಖಾದರ್ ಎಚ್ಚರಿಕೆ ನೀಡಿದರು.









