
ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕದ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಯಾದಪುರ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಯಾದಪುರವು ಅರಸಿಕೆರೆಯಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಈ ದೇವಾಲಯವು ಬೆಟ್ಟದ ಮೇಲಿದ್ದು ಶಿವನಿಗೆ ಸಮರ್ಪಿತವಾಗಿದೆ. 1101 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟವನ್ನು ಉತ್ತರ ದಕ್ಷಿಣವಾಗಿ ಎರಡು ಕಡೆಯಿಂದ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದವನ್ನು ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಒಂದು ಗೋಪುರವಿದೆ. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ. ಇತಿಹಾಸ :: ಹಿಂದೆ ಈ ಪ್ರಾಂತ್ಯ ಮೊದಲು ಅರಣ್ಯವಾಗಿತ್ತು. ಸಿದ್ಧರು ಅನೇಕ ವರ್ಷ ತಪಸ್ಸು ಮಾಡಿ ಸಿದ್ದಿಯಾದ ಸ್ಥಳವೇ ಯಾದಪುರವಾಯಿತೆಂದು ಪ್ರಚಲಿತದಲ್ಲಿ ಇದೆ. ಒಂದು ದಂತಕಥೆಯ ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯನ್ನು (ಶಿವ) ಮೆಚ್ಚಿಸಿ, ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗೆ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದು ಗುಣಮುಖರಾದರಂತೆ. ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯು ಬೆಟ್ಟದ ಮೇಲೆ ತಮ್ಮ ಎರಡು ಪಾದಗಳನ್ನು ಮಾತ್ರ ಮೂಡಿಸಿ ಕೆಳಗೆ ಯಾದಪುರದ ಊರ ಮಧ್ಯಭಾಗದಲ್ಲಿ ಮಲಗಿರುವ ಮುದ್ದು ನಂದಿಯ ರೂಪದಲ್ಲಿ ಉದ್ಭವಿಸಿದರಂತೆ. ಹೆಸರಿನ ಉಗಮ :: ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ ಜೇನುಗೂಡು ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕ್ಷೇತ್ರವೆಂದು ಹೆಸರು ಬಂದಿದೆ. ಈ ಜೇನುಗೂಡುನಲ್ಲಿ, ಜೇನುನೊಣಗಳ ರೂಪದಲ್ಲಿ ದೇವತೆಗಳ ವಾಸಸ್ಥಾನವಾಗಿದ್ದಾರೆ ಎಂದು ಹೇಳಲಾಗುತ್ತದೆ. ಜೇನುಕಲ್ಲು ಸಿದ್ದೇಶ್ವರರನ್ನು ಅಜ್ಜಯ್ಯಾ, ಸಿದ್ದೇಶ್ವರ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು :: ಪ್ರತಿ ತಿಂಗಳು ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಯುವ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ ಉತ್ಸವಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.











