
ಕುಶಾಲನಗರ ಜೂ.26 NEWS DESK : ಕುಶಾಲನಗರದ ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು. ಹಿಂದಿನ ಸಾಲಿನ ಕ್ಲಬ್ ಅಧ್ಯಕ್ಷ ದೇವರಗುಂಡ ಪ್ರವೀಣ್ ಸೋಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಾಲಿನ ಅಧ್ಯಕ್ಷರಾಗಿ ಎನ್.ಟಿ.ನಾರಾಯಣ, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ಶರತ್ ಕುಮಾರ್ ಮ್ಯಾಥ್ಯು ಅಧಿಕಾರ ವಹಿಸಿಕೊಂಡರು. ಮಾಜಿ ಜಿಲ್ಲಾ ಗವರ್ನರ್ ಎಂ.ಬಿ. ಸದಾಶಿವ ಅವರು ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸಾಲಿನ ಆಡಳಿತ ಮಂಡಳಿ ಸದಸ್ಯರಿಗೆ ಪದಗ್ರಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರಕಾರದ ಯೋಜನೆ ತಲುಪಲಾಗದ ಗ್ರಾಮೀಣ ಸ್ಥಳಗಳಿಗೆ, ಫಲಾನುಭವಿಗಳಿಗೆ ತಲುಪಿಸುವಲ್ಲಿ ಲಯನ್ಸ್ ಮೂಲಕ ನೆರವಾಗುತ್ತದೆ. ಸೇವೆಯೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ಬಡವರು, ಅಶಕ್ತರ ಪಾಲಿನ ಆಶಾಕಿರಣವಾಗಿದೆ, ಸೇವೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಕ್ರಿಯ, ಸಮಾಜ ಸೇವೆಯ ಗುಣಗಳನ್ನು ಹೊಂದಿರುವವರು ಹೆಚ್ಚು ಸದಸ್ಯರಾಗಬೇಕಿದೆ ಎಂದು ಕರೆ ನೀಡಿದರು. ಲಯನ್ಸ್ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಹಿಂದಿನ ಸಾಲಿನ ಕ್ಲಬ್ ಕಾರ್ಯದರ್ಶಿ ನಿತಿನ್ ಗುಪ್ತ, ವಲಯ ಅಧ್ಯಕ್ಷರುಗಳಾದ ಸುಮನ್ ಬಾಲಚಂದ್ರ, ಕನ್ನಿಕಾ ಅಯ್ಯಪ್ಪ, ಮಹದೇವಪ್ಪ, ಕನ್ನಂಡ ಬೊಳ್ಳಪ್ಪ, ಕೊಡಗನ ಹರ್ಷ, ಮಾಜಿ ಅಧ್ಯಕ್ಷರುಗಳಾದ ಕೆ ಎಸ್ ಸತೀಶ್ ಕುಮಾರ್, ಟಿ.ಕೆ.ರಾಜಶೇಖರ್, ಎಂ.ಎಸ್.ಚಿಣ್ಣಪ್ಪ, ಸಿ.ಆರ್.ನಾಗರಾಜು ಮತ್ತಿತರರು ಇದ್ದರು.










