
ಮಡಿಕೇರಿ ಜು.16 NEWS DESK : ದೇವಾಲಯಗಳು ಹಿಂದೂಗಳ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರಗಳಾಗಿದ್ದು, ಸಾಮಾಜಿಕ ಸಾಮರಸ್ಯದ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ರಾಜ್ಯ ಸಂಯೋಜಕ ಮನೋಹರ ಮಠದ್ ಹೇಳಿದರು. ನಗರದ ನಂದನ ಸಭಾಂಗಣದಲ್ಲಿ ನಡೆದ ದೇವಾಲಯಗಳ ಅರ್ಚಕರು ಮತ್ತು ಸಮಿತಿ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವಾಲಯಗಳು ಹಿಂದಿನಿಂದಲೂ ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿ ವಿದ್ಯಾರ್ಜನೆಯ ಕೇಂದ್ರಗಳಾಗಿತ್ತು. ರಾಜ ಮಹಾರಾಜರುಗಳ ಕಾಲದಿಂದಲೂ ಧಾರ್ಮಿಕ ಕೇಂದ್ರಗಳು ಅನೇಕ ವಿಶ್ವವಿದ್ಯಾನಿಲಯಗಳಾಗಿ ವಿದ್ಯಾರ್ಜನೆಯನ್ನು ನೀಡುವ ಮೂಲಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ್ದವು. ಅದರ ಜೊತೆಗೆ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳು ಆಗಿದ್ದವು. ಅನೇಕ ಗುರುಕುಲ ಶಿಕ್ಷಣ ಪದ್ಧತಿಯು ದೇವಾಲಯದ ಅಧೀನದಲ್ಲಿ ನಡೆಯುತ್ತಿದ್ದವು. ಹೊಯ್ಸಳರು, ಚಾಲುಕ್ಯರು ಸೇರಿದಂತೆ ಅನೇಕ ರಾಜ ಮನೆತನಗಳು ಜ್ಞಾನಕ್ಕೆ ಒತ್ತು ನೀಡಿ ಅನೇಕ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿದ್ದ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ. ಅಂತಹ ಅನೇಕ ವಿಶ್ವವಿದ್ಯಾನಿಲಗಳು ಈಗಲೂ ನಮ್ಮ ಕಣ್ಣಮುಂದಿವೆ ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿಯೂ ದೇವಾಲಯಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಬಲರು, ಅಶಕ್ತರಿಗೆ ಸಹಾಯ ಹಸ್ತ ಚಾಚುವಂತಾಗಬೇಕು. ಆ ನಿಟ್ಟಿನಲ್ಲಿ ದೇವಾಲಯ ಸಮಿತಿಯಗಳು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು. ಕೊಡಗು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿ ದೇವಾಲಯ ಪ್ರಮುಖರುಗಳ ಸಮಾಲೋಚನಾ ಸಭೆಯನ್ನು ಆಯೋಜಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭ ದೇವಾಲಯ ಸಂವರ್ಧನಾ ಸಮಿತಿಯ ಕೊಡಗು ಜಿಲ್ಲಾ ಸಂಯೋಜಕರಾದ ಹೇಮಂತ್ ಕುಮಾರ್, ಸಹ ಸಂಯೋಜಕ ರಂಗಸ್ವಾಮಿ, ಪ್ರಮುಖರಾದ ರಮೇಶ್ ಹೊಳ್ಳ, ಪ್ರಸಾದ್ ಹಾನಗಲ್, ಕೆ.ಕೆ.ದಿನೇಶ್ ಕುಮಾರ್ ಹಾಗೂ ಇತರರು ಇದ್ದರು.









