
ಮಡಿಕೇರಿ ಸೆ.18 NEWS DESK : ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಇದೇ ಸೆ.22ರಿಂದ 30ರವರೆಗೆ ವೈವಿಧ್ಯಮಯ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೆ.22 ರಂದು ಬೆಳಗ್ಗೆ 6 ಗಂಟೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ವರೆಗಿನ ರಸ್ತೆಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ ಮೆರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆ.23 ರಂದು ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್ ಬಾಲ್, ಸಾರ್ವಜನಿಕರಿಗೆ ಮತ್ತು 15 ವರ್ಷದೊಳಗಿನ ಶಾಲಾ ಮಕ್ಕಳಿಗೆ 5+2 ಆಟಗಾರರ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.24 ರಂದು ಬೆಳಗ್ಗೆ ದಸರಾ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತದೆ. ಈ ಸಂದರ್ಭ ಬನ್ನಿ ಮಂಟಪದಿಂದ ಶ್ರೀ ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತರಲಾಗುತ್ತದೆ. ಅಂದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕ ವಿಭಾಗದಲ್ಲಿ ಪುರುಷರು, ಮಹಿಳೆಯರು, ದಸರಾ ಸಮಿತಿಯವರಿಗೆ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಥ್ರೋಬಾಲ್, ನಿಧಾನ ದ್ವಿಚಕ್ರವಾಹನ ಚಾಲನೆ(ಗೇರ್ ಮೋಟಾರ್ ವಾಹನ) ಸೇರಿದಂತೆ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. :: ವಿಶೇಷ ಚೇತನರಿಗೆ ಸ್ಪರ್ಧೆ :: ಅದೇ ದಿನದಂದು ವಿಶೇಷ ಚೇತನ ಬಾಲಕ-ಬಾಲಕಿಯರಿಗಾಗಿ 1 ರಿಂದ 4ನೇ ತರಗತಿ, 5 ರಿಂದ 7 ಮತ್ತು 8 ರಿಂದ 10ನೇ ತರಗತಿ ವಿಭಾಗಗಳಲ್ಲಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆಯೆಂದು ಹೇಳಿದರು. ಕ್ರೀಡಾಕೂಟಕ್ಕೆ ಮೊದಲ ಬಾರಿಗೆ ‘ಸ್ನೂಕರ್’ ಸೇರ್ಪಡೆ- ಇದೇ ಮೊದಲ ಬಾರಿಗೆ ‘ಸ್ನೂಕರ್’ ಕ್ರೀಡೆಯನ್ನು ದಸರಾ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಲಾಗಿದೆ.ಸೆ.25ರಂದು ನಗರದ ಕೂರ್ಗ್ ಎಂಟರ್ಪ್ರೈಸಸ್ ಬಿಲ್ಡಿಂಗ್ನಲ್ಲಿ ಸ್ನೂಕರ್ ಪಂದ್ಯಾವಳಿ ನಡೆಯಲಿದೆ. ಅದೇ ದಿನ ಜಿಲ್ಲಾ ಕ್ರಿಡಾಂಗಣದಲ್ಲಿ ಮಡಿಕೇರಿ ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ, ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ, ಶಿಕ್ಷಕರು, ವಕೀಲರು, ಮೆಡಿಕಲ್, ಜಿಪಂ, ಕಾರಾಗೃಹ ಸಿಬ್ಬಂದಿಗಳು, ಅಗ್ನಿಶಾಮಕ ದಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆಯೆಂದು ವಿವರಗಳನ್ನಿತ್ತರು. :: ಚೆಸ್ ಮತ್ತು ಕೇರಂ ಪಂದ್ಯಾವಳಿ :: ಸೆ.26ರಂದು ನಗರದ ಹೋಟೆಲ್ ರಾಜದರ್ಶನ್ನಲ್ಲಿ ವಿವಿಧ ವಿಭಾಗಗಳಲ್ಲಿ ಚೆಸ್ ಮತ್ತು ಕೇರಂ ಪಂದ್ಯಾವಳಿ ನಡೆಯಲಿದೆಯೆಂದರು.
ಸೆ.27ರಂದು ಗಾಂಧಿ ಮೈದಾನದಲ್ಲಿ ಸಾರ್ವಜನಿಕರಿಗೆ ಮುಕ್ತ ವಾಲಿಬಾಲ್, ಸೆ.28ರಂದು ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. :: ದೇಹದಾಢ್ರ್ಯ ಮತ್ತು ಕಿಕ್ ಬಾಕ್ಸಿಂಗ್ :: ಸೆ.29 ರಂದು ಸಂಜೆ 5 ಗಂಟೆಗೆ ನಗರದ ರಾಜದರ್ಶನ ಹೋಟೆಲ್ನಲ್ಲಿ ‘ದೇಹದಾಢ್ರ್ಯ’ ಸ್ಪರ್ಧೆ, ಸೆ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. :: *ದೊರೆಯದ ಸಹಕಾರ* :: ಜನೋತ್ಸವವಾಗಿ ಆಚರಿಸಲ್ಪಡುವ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕ್ರೀಡಾಕೂಟಕ್ಕೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅಗತ್ಯ ಸಹಕಾರ ದೊರಕುತ್ತಿಲ್ಲವೆಂದು ಪ್ರದೀಪ್ ಕರ್ಕೆರ ಬೇಸರ ವ್ಯಕ್ತಪಡಿಸಿದರು. ನಾಡ ಹಬ್ಬದ ಅಂಗವಾಗಿ ನಡೆಸಲಾಗುವ ಕ್ರೀಡಾಕೂಟದ ಆಯೋಜನೆಗೂ ಇಲಾಖೆಗೆ ಮೈದಾನ ಶುಲ್ಕವನ್ನು ನೀಡುವ ಪರಿಸ್ಥಿತಿ ಇದೆ. ಇಲಾಖೆಯಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರೀಡೋಪಕರಣಗಳು ಲಭ್ಯವಿಲ್ಲವೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ, ಉಪಾಧ್ಯಕ್ಷರುಗಳಾದ ಕೆ.ಆರ್. ದಿನೇಶ್ ಶೆಟ್ಟಿ, ಉಮೇಶ್, ಸಹ ಕಾರ್ಯರ್ಶಿ ನಿರಂಜನ್ ಎಂ.ಪಿ., ಗೌರವ ನಿರ್ದೇಶಕ ಜಿ.ಸಿ. ಕೃಷ್ಣ ಉಪಸ್ಥಿತರಿದ್ದರು.








