
ಸಿದ್ದಾಪುರ ಅ.30 NEWS DESK : ಪಾಲಿಬೆಟ್ಟ ಚೆಶೈರ್ ಹೋಮ್ಸ್ ವಿಶೇಷ ಶಾಲೆಯ ಬೆಳ್ಳಿ ಹಬ್ಬ ಆಚರಣೆಯು ಶಾಲೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಭಾರತೀಯ ಕ್ರೀಡಾ ವಿವರಣೆಗಾರ ಹಾಗೂ ಪ್ರೋ ಕಬಡ್ಡಿ ಲೀಗ್ ನಿರ್ದೇಶಕ ಚಾರು ಶರ್ಮಾ
ಬೆಳ್ಳಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ಮೂಲಕ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಲು ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವುದು ಸಂತಸ ತಂದಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಸ್ವಉದ್ಯೋಗದ ಮೂಲಕ ಸಾವಲಂಬಿ ಜೀವನ ನಡೆಸಲು ಸಹಕಾರ ನೀಡುವುದರೊಂದಿಗೆ ಮಾದರಿ ವಿಶೇಷ ಚೇತನರ ಶಾಲೆಯನ್ನಾಗಿಸಿ ಮನೆಯ ಮಕ್ಕಳಂತೆ ಕಲಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ. ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಚೆಶೈರ್ ಹೋಮ್ಸ್ ಶಾಲೆಯ ಮುಖ್ಯಸ್ಥೆ ಗೀತಾ ಚಂಗಪ್ಪ ಮಾತನಾಡಿ, 6 ಮಕ್ಕಳಿಂದ ಪ್ರಾರಂಭವಾದ ಶಾಲೆ ಈಗ 25 ವರ್ಷ ಪೂರೈಸಿ ಬೆಳ್ಳಿ ಹಬ್ಬಕ್ಕೆ ಕಾಲಿಟ್ಟಿದ್ದು, ಇದೀಗ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉತ್ತಪ್ಪ ಭವಿಷ್ಯ ರೂಪಿಸಲು ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದ್ದು ಕರಕುಶಲ, ಪರಿಸರ, ಆರೋಗ್ಯ, ಯೋಗ, ಗಾಯನ, ನೃತ್ಯ, ಕ್ರೀಡೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಲ್ಲರ ಸಹಕಾರದಿಂದ ಶಾಲೆ ಮುನ್ನಡೆಯುತ್ತಿದ್ದು ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಯ ಸಂಸ್ಥಾಪಕರಾದ ಸಿ.ಎ.ಮುತ್ತಣ್ಣ, ಶಾಲಾ ಮುಖ್ಯ ಶಿಕ್ಷಕ ಶಿವರಾಜ್, ಹಳೆಯ ವಿದ್ಯಾರ್ಥಿ ಹಾಗು ಅಂತರಾಷ್ಟ್ರೀಯ ಕ್ರೀಡಾಪಟು ರಂಶಾದ್, ವಿದ್ಯಾರ್ಥಿ ಸುಮೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಅನುಜಾ ಶರ್ಮಾ, ವಿಶೇಷ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷೆ ಪುನೀತ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಖಜಾಂಚಿ ಡಾ. ಎ.ಸಿ.ಗಣಪತಿ, ಸಂಸ್ಥಾಪಕ ಸಿ.ಎ.ಮುತ್ತಣ್ಣ, ಮುಖ್ಯ ಶಿಕ್ಷಕ ಶಿವರಾಜ್ ಸೇರಿದಂತೆ ಗಣ್ಯರು, ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರುಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಯೋಗ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಗಣ್ಯರು ಮೆಚ್ಚಿಗೆ ವ್ಯಕ್ತಪಡಿಸಿದರು.









