
ಮಡಿಕೇರಿ ಆ.11 NEWS DESK : ಆಡಳಿತ ಲೋಪಗಳಿಂದ ಮುಕ್ಕಾಗಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತುವಿನ ಘನತೆಯನ್ನು ಮರುಸ್ಥಾಪಿಸಿ, ಅದರ ಪರಂಪರೆ ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಚಿಂತನೆ ತಮ್ಮದಾಗಿದೆಯೆಂದು ಹಿರಿಯ ಸಾಹಿತಿಗಳು ಹಾಗೂ ಮುಂದಿನ ಕಸಾಪ ಚುನಾವಣಾ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರು ಸ್ಥಾಪಿಸಿ 112 ವರ್ಷಗಳಿ ಸಂದಿದೆ. ಇಂತಹ ಸಂಸ್ಥೆಯ ಘನತೆ ಗೌರವಗಳಿಗೆ ಕಳೆದೆರಡು ಅವಧಿಗಳಲ್ಲಿನ ದುರಾಡಳಿತ, ಭ್ರಷ್ಟತೆಗಳಿಂದ ಕುಂದುಂಟಾಗಿದೆಯೆಂದು ಅತೀವ ಬೇಸರ ವ್ಯಕ್ತಪಡಿಸಿದರು. ಪ್ರತಿ ಕುಟುಂಬಕ್ಕೊಂದು ಸದಸ್ಯತ್ವವಾಗಬೇಕು- ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತ 4.50 ಲಕ್ಷ ಸದಸ್ಯತ್ವವನ್ನು ಹೊಂದಿದೆ. ರಾಜ್ಯದ ಕನ್ನಡಿಗರ ಸಂಖ್ಯೆಗೆ ಹೋಲಿಸಿದಲ್ಲಿ ಸದಸ್ಯತ್ವ ಅತ್ಯಂತ ಸಣ್ಣ ಪ್ರಮಾಣದ್ದು. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಕನ್ನಡಿಗರ ಪ್ರತಿ ಕುಟುಂಬದಿಂದ ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು ಮತ್ತು ಆ ಮೂಲಕ ನಿಜ ಅರ್ಥದಲ್ಲಿ ಕಸಾಪ ಕನ್ನಡಿಗರ ಸಂಸ್ಥೆಯಾಗಿ ರೂಪು ತಳೆಯಬೇಕೆನ್ನುವ ಆಶಯ ತಮ್ಮದೆಂದು ದೃಢವಾಗಿ ನುಡಿದರು. ಪ್ರಸುತ ಕನ್ನಡ ಸಾಹಿತ್ಯ ಪರಿಷತ್ತು ಆಡಳಿತಾಧಿಕಾರಿಗಳ ಕೈಯಲ್ಲಿದೆಯಾದರೆ, ರಾಜ್ಯದ ಎಲ್ಲಾ ಜಿಲ್ಲೆಗಳ ಕಸಾಪ ಆಡಳಿತದ ಅಧಿಕಾರದ ಅವಧಿ ಪ್ರಸಕ್ತ ಸಾಲಿನ ನವೆಂಬರ್ 21 ರಂದು ಕೊನೆಗೊಳ್ಳಲಿದೆ. ಬಹುಶಃ ಡಿಸೆಂಬರ್ನಲ್ಲಿ ರಾಜ್ಯ ಕಸಾಪ ಚುನಾಣೆಗಳು ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ರಾಜ್ಯದ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮತ್ತು ವಿವಿಧ ಜಿಲ್ಲೆಗಳ ಕಸಾಪ ಪದಾಧಿಕಾರಿಗಳು ತನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗುರುತಿಸಿದ್ದಾರೆ. ಈ ಹಿನ್ನೆಲೆ ಕಾವೇರಿಯ ನಾಡು ಕೊಡಗಿನಿಂದ ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ ತನ್ನ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿರುವುದಾಗಿ ತಿಳಿಸಿದರು. “ಕಸಾಪ ಉಳಿಸಿ ಹೋರಾಟ”- ಕಳೆÉದ ಒಂದು ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಅಧಿಕಾರ ಪಡೆಯುವ “ಗಂಜಿ ಕೇಂದ್ರ”ವನ್ನಾಗಿ ಮಾಡಿಕೊಳ್ಳಲಾಗಿತ್ತೆಂದು ಅತ್ಯಂತ ಕಟುವಾಗಿ ನುಡಿದ ಜಾಣಗೆರೆ ವೆಂಕಟರಾಮಯ್ಯ, ಕಸಾಪದ ಮೂಲ ಚಿಂತನೆಗಳನ್ನು ಕೈಬಿಟ್ಟು ಅಧಿಕಾರದ ಗದ್ದುಗೆಯನ್ನಾಗಿಸಿಕೊಂಡವರ ಮನಸ್ಥಿತಿಗಳಿಂದ ಕಸಾಪದ ಅಧಃಪತನ ಆರಂಭಗೊಂಡಿತ್ತು. ಇದರಿಂದ “ಮನುಷ್ಯ ಜಾತಿ ತಾನೊಂದೆ ವಲಂ” ಎನ್ನುವ ಕಸಾಪ ಕಚೇರಿಯ ಮುಂದಿನ ಫಲಕವು ಕಣ್ಮರೆಯಾಗಿ ಪರಿಷತ್ತಿನಲ್ಲಿದ್ದ ಸಾಮಾಜಿಕ ನ್ಯಾಯವೆನ್ನುವುದು ಮರೆಯಾಗಿತ್ತು. ಇಂತಹ ವ್ಯವಸ್ಥೆಯಿಂದ ಕಸಾಪವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಾಡಿನ ಸಾಹಿತಿಗಳು ಸೇರಿದಂತೆ ಸಮಾನ ಮನಸ್ಕರನ್ನು ಒಳಗೊಂಡಂತೆ ನಡೆಸಿದ “ಕಸಾಪ ಉಳಿಸಿ ಹೋರಾಟ” ಫಲವನ್ನು ನೀಡಿದ್ದು, ದುರಾಡಳಿತ ನಡೆಸಿದವರು ಪರಿಷತ್ತಿನಿಂದ ದೂರ ಹೋಗಿದ್ದಾರೆಂದು ಸಂತಸ ವ್ಯಕ್ತಪಡಿಸಿ, ಇದೀಗ ಕಸಾಪವನ್ನು ಮರಳಿ ಕಟ್ಟಬೇಕಾಗಿದೆಯೆಂದು ತಿಳಿಸಿದರು. ಹಿಂದಿನ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಡಳಿತ ನಡೆಸಿದವರು ಪರಿಷತ್ತಿನ ಕಚೇರಿಯಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಹಾಗೂ ಅನಪೇಕ್ಷಿತವಾದ ಬೈಲ ತಿದ್ದುಪಡಿಗಳಿಗೆ ಮುಂದಾಗುವ ಮೂಲಕ ಅಕ್ಷರಶಃ ಭಯದ ವಾತಾವರಣವನ್ನೆ ನಿರ್ಮಿಸಿದ್ದರು. ತಮ್ಮ ಚಿಂತನೆಯಂತೆ ಪರಿಷತ್ತಿನ ಬೈಲಾ ತಿದ್ದುಪಡಿ ನಡೆಸುವ ಸಲುವಾಗಿ ರಾಜ್ಯದ ಅತ್ಯಂತ ದೂರದ, ಸದಸ್ಯರು ಬರಲಾಗದಂತಹ ಸ್ಥಳಗಳಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ಪ್ರಯತ್ನಗಳನ್ನು ನಡೆಸಿದ್ದರು. ಇಂತಹ ನಾಲ್ಕು ಸಭೆಯನ್ನು ಹೋರಾಟದ ಮೂಲಕ ತಪ್ಪಿಸಿ, ಪರಿಷತ್ತನ್ನು ಉಳಿಸಲು ಶ್ರಮಿಸಿದ್ದಾಗಿ ತಿಳಿಸಿದರು. ವಸೂಲಿ ಮತ್ತು ಶಿಕ್ಷೆಯಾಗಲಿ :: ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ನಡೆದಿರುವ ಹಣದ ದುರ್ಬಳಕೆ ನಡೆದಿದ್ದು, ಇದನ್ನು ಸಂಬಂಧಪಟ್ಟವರಿಂದ ಸರ್ಕಾರ ವಸೂಲಿ ಮಾಡಬೇಕು ಮತ್ತು ಅಗತ್ಯ ಶಿಕ್ಷೆಯೂ ಅವರಿಗೆ ಆಗಬೇಕೆಂದು ಜಾಣಗೆರೆ ವೆಂಕಟರಾಮಯ್ಯ ಆಗ್ರಹಿಸಿದರು. ಹಿರಿಯ ಪತ್ರಕರ್ತರಾದ ಆರ್ಜಿ ಹಳ್ಳಿ ನಾಗರಾಜು ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ದುಷ್ಟ ಶಕ್ತಿಗಳಿಂದ ಮುಕ್ತವಾಗಿಸಿ ಸ್ವಚ್ಛಾಡಳಿತವನ್ನು ನಿಡಬೇಕೆನ್ನುವ ಕಾರಣಗಳ ಹಿನ್ನೆಲೆ, ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆಯೆಂದು ತಿಳಿಸಿದರು. ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅವರು ಮಾತನಾಡಿ, ಕಸಾಪದ ಆಡಳಿತವನ್ನು ಆಡಳಿತಶಾಹಿ ವ್ಯವಸ್ಥೆ ದಿಕ್ಕು ತಪ್ಪಿಸಿದೆ. ಯಾವುದೇ ಕಾರಣಕ್ಕು ಅಧಿಕಾರದ ಆಸೆಯಿಂದ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಕೂಡದೆಂದು ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಮಡಿಕೇರಿ ತಾಲ್ಲೂಕು ಮಾಜಿ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯು, ಕಾ.ನ.ಚಂದ್ರಶೇಖರ್ ಉಪಸ್ಥಿತರಿದ್ದರು.









