
ಮಡಿಕೇರಿ NEWS DESK ಆ.11 : ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಹೊಸತೋಟ ಗ್ರಾಮದ ನಿವಾಸಿಗಳಾದ ನಿತ್ಯ(47) ಹಾಗೂ ಜನಾರ್ಧನ(47) ಮೃತಪಟ್ಟಿರುವ ದುರ್ದೈವಿಗಳು. ಹಳೇ ಶೌಚಾಲಯದ ಬಳಿ ಬರುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಶೌಚ ಗುಂಡಿ ಕುಸಿದು ನಿತ್ಯ ಅದರಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿ ನಿತ್ಯನ ರಕ್ಷಣೆಗಾಗಿ ಧಾವಿಸಿದ ಜನಾರ್ಧನ ಅವರು ಕೂಡ ಗುಂಡಿಯಲ್ಲಿ ಸಿಲುಕಿಕೊಂಡರು.
ತಕ್ಷಣ ಸ್ಥಳೀಯರು ಇಬ್ಬರನ್ನು ಗುಂಡಿಯಿ0ದ ಮೇಲಕ್ಕೆತ್ತಿ ಮಾದಾಪುರ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೆ ನಿತ್ಯ ಸಾವನ್ನಪ್ಪ್ಪಿದ್ದರೆ, ಜನಾರ್ಧನ ಚಿಂತಾಜನಕ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಇವರು ಕೂಡ ಸಾವನ್ನಪ್ಪಿದ್ದಾರೆ. *ಶಾಸಕರ ಸಾಂತ್ವನ* ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.









