
ಮಡಿಕೇರಿ NEWS DESK ಆ.12 : ಕೊಡವ ಮಕ್ಕಡ ಕೂಟದ 126ನೇ ಪುಸ್ತಕ ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ರಚಿತ “ಕಥಾಂಜಲಿ” ಪುಸ್ತಕ ಬಿಡುಗಡೆ ಸಮಾರಂಭ ಆ.16 ರಂದು ಮಡಿಕೇರಿಯಲ್ಲಿ ನಡೆಯಲಿದೆ. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಅವರು “ಕಥಾಂಜಲಿ” ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸಮಾಜ ಸೇವಕರುಗಳಾದ ಕೆ.ಎಂ.ಗಣೇಶ್, ಆಯಲಪಂಡ ಪುಷ್ಪ ಪೂಣಚ್ಚ, ದಮಯಂತಿ ಪೊನ್ನಪ್ಪ ಹಾಗೂ “ಕಥಾಂಜಲಿ” ಪುಸ್ತಕದ ಬರಹಗಾರ ಎಂ.ಶ್ರೀಧರ್ ಹೂವಲ್ಲಿ ಅವರು ಉಪಸ್ಥಿತರಿರುವರು. *ಕಥಾಂಜಲಿ* “ಕಥಾಂಜಲಿ” ಎಂ.ಶ್ರೀಧರ್ ಹೂವಲ್ಲಿ ಅವರು ರಚಿಸಿರುವ ಎರಡನೇ ಕೃತಿಯಾಗಿದ್ದು, ಇದರಲ್ಲಿ ಒಟ್ಟು 11 ಕಥೆಗಳಿವೆ. ಸಾಮಾಜಿಕ ಮತ್ತು ಸಾಂಸಾರಿಕ ಕಥಾ ವಸ್ತು ಅಡಕವಾಗಿದೆ. *ಲೇಖಕರ ಪರಿಚಯ* ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ಅವರು ಪತ್ರಿಕೋದ್ಯಮಕ್ಕೆ ಬರುವ ಮೊದಲು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ರಂಗಭೂಮಿ, ಸಿನಿಮಾ ಮತ್ತು ಕಿರುಚಿತ್ರಗಳಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ. ದಿ.ಆರ್.ಕೆ.ಮುತ್ತಪ್ಪ ಹಾಗೂ ಪದ್ಮಿನಿ ದಂಪತಿಯ ಪ್ರಥಮ ಪುತ್ರರಾಗಿರುವ ಇವರು ಮೇಕೇರಿ, ಮಕ್ಕಂದೂರು ಶಾಲೆ ಮತ್ತು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಪೂರೈಸಿದ್ದಾರೆ.
ವ್ಯಾಸಂಗ ಮುಗಿಸಿದ ನಂತರ ಖಾಸಗಿ ಸಂಸ್ಥೆಯೊAದರಲ್ಲಿ ಉದ್ಯೋಗ ಮಾಡುತ್ತಿದ್ದ ಎಂ.ಶ್ರೀಧರ್ ಹೂವಲ್ಲಿ ಅವರು ಲೇಖನ, ಕವನ, ಕತೆ ಹಾಗೂ ಕಾದಂಬರಿ ಮತ್ತಿತರ ಬರಹಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಇವರ ಮೊಟ್ಟ ಮೊದಲ ಕಾದಂಬರಿ ‘ಪ್ರೇಮಾಮೃತ’ ವನ್ನು ಪ್ರಕಟಿಸಿ ರಾಜ್ಯದ ಗ್ರಂಥಾಲಯಗಳಿಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕಾ ಭವನ ಟ್ರಸ್ಟ್ ನ ಟ್ರಸ್ಟಿಯಾಗಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಧರ್ ಹೂವಲ್ಲಿ ಅವರು 2007ರಲ್ಲಿ ಕೊಡಗು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ‘ಗಡಿನಾಡ ಸಂಚಾರಿ’ ಪತ್ರಿಕೆಯ ಬೆಳ್ಳಿಹಬ್ಬದ ಸಂದರ್ಭ ಅಂದು ಸಂಸದರಾಗಿದ್ದ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಸಚಿವರಾಗಿದ್ದ ಎಂ.ಸಿ.ನಾಣಯ್ಯ ಅವರುಗಳು ಸನ್ಮಾನಿಸಿ ಗೌರವಿಸಿದ್ದಾರೆ. ಈ ಹಿಂದೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಶ್ರೀಧರ್ ನೆಲ್ಲಿತ್ತಾಯ ಅವರು ಅಂದಿನ ಎಸ್ಪಿ ಅನುಚೇತ್ ಅವರ ಮೂಲಕ ಸನ್ಮಾನಿಸಿ ಗೌರವಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಸನ್ಮಾನಿಸಿ ಗೌರವಿಸಿದ್ದಾರೆ. “ಕಥಾಂಜಲಿ” ಶ್ರೀಧರ್ ಹೂವಲ್ಲಿ ಅವರ ಎರಡನೇ ಕೃತಿಯಾಗಿದೆ. ಎಲ್ಲರೂ ನಮ್ಮವರೇ ಎಂಬ ಮನೋಭಾವದ ವ್ಯಕ್ತಿತ್ವ ಹೊಂದಿರುವ ಇವರು ಉತ್ತಮ ಮನಸ್ಸಿನ ಸ್ನೇಹ ಜೀವಿಯಾಗಿದ್ದಾರೆ. ಎಲ್ಲರನ್ನು ಪ್ರೀತಿಸುವ, ಗೌರವಿಸುವ ಗುಣ ಇವರಲ್ಲಿದೆ. ಜಿಲ್ಲೆಯ ಬಹುತೇಕ ರಾಜಕಾರಣಿಗಳ, ಅಧಿಕಾರಿಗಳ, ಉದ್ಯಮಿಗಳ, ಸಾಹಿತಿಗಳ, ಜನ ಸಾಮಾನ್ಯರ ಪ್ರೀತಿ- ವಿಶ್ವಾಸವನ್ನು ಶ್ರೀಧರ್ ಹೂವಲ್ಲಿ ಗಳಿಸಿಕೊಂಡಿದ್ದಾರೆ.









