
ಮಡಿಕೇರಿ NEWS DESK ಆ.14 : ಉತ್ತರಾಖಂಡದ ಹಲ್ದಾ÷್ವನಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿದ್ದ ವೇದಿಕೆಯನ್ನು ಹೋಮ-ಹವನದ ಮೂಲಕ “ಶುದ್ಧೀಕರಣ” ಮಾಡಲಾಗಿದೆ ಎಂಬ ವರದಿ ಅತ್ಯಂತ ನೋವುಂಟು ಮಾಡುವ ಮತ್ತು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಒಬ್ಬ ವ್ಯಕ್ತಿಯ ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯನ್ನು ಆಧಾರ ಮಾಡಿಕೊಂಡು, ಅವರು ಸ್ಪರ್ಶಿಸಿದ ಅಥವಾ ಬಳಸಿದ ಸ್ಥಳವನ್ನು “ಅಪವಿತ್ರ” ಎಂದು ಪರಿಗಣಿಸುವ ಮನೋಭಾವವಿದ್ದರೆ, ಅದು ನಮ್ಮ ಸಮಾಜದ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ನಿಲ್ಲಿಸುತ್ತದೆ. ಒಬ್ಬ ಮನುಷ್ಯನನ್ನು ಮತ್ತೊಬ್ಬ ಮನುಷ್ಯನಿಗಿಂತ ಕೀಳಾಗಿ ನೋಡುವ ಹಕ್ಕನ್ನು ಯಾರಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಯ ಹಕ್ಕನ್ನು ನೀಡಿದೆ. ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ನಿರ್ಮೂಲಗೊಳಿಸಿದೆ. ಆದ್ದರಿಂದ 21ನೇ ಶತಮಾನದ ಭಾರತದಲ್ಲಿ ಜಾತಿಯ ಆಧಾರದ ಮೇಲೆ ಯಾರನ್ನಾದರೂ “ಅಪವಿತ್ರ” ಎಂದು ನೋಡುವ ಮನೋಭಾವಕ್ಕೆ ಯಾವುದೇ ಸ್ಥಾನ ಇರಬಾರದು. ನಮ್ಮ ಖಂಡನೆ ಅಥವಾ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ. ಹೋಮ-ಹವನ, ಪೂಜೆ, ಪ್ರಾರ್ಥನೆ ಅಥವಾ ಯಾವುದೇ ಧಾರ್ಮಿಕ ಆಚರಣೆಯಾಗಲಿ ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಸ್ವಾತಂತ್ರö್ಯವನ್ನು ನಾವು ಗೌರವಿಸುತ್ತೇವೆ. ಯಾವುದೇ ಧಾರ್ಮಿಕ ಆಚರಣೆಯನ್ನು ಬಳಸಿಕೊಂಡು ಒಬ್ಬ ಮನುಷ್ಯನನ್ನು ಜಾತಿಯ ಆಧಾರದ ಮೇಲೆ ಕೀಳಾಗಿ ಕಾಣುವುದು ಅಥವಾ ಅವಮಾನಿಸುವುದು ಮಾತ್ರ ಖಂಡನೀಯ ಎಂದು ತಿಳಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಮನುಷ್ಯನನ್ನು ಮನುಷ್ಯನಿಂದ ಬೇರ್ಪಡಿಸುವುದು ನಮ್ಮ ಸಂವಿಧಾನದ ಆಶಯವೂ ಅಲ್ಲ, ಮಾನವೀಯತೆಯ ಮೌಲ್ಯವೂ ಅಲ್ಲ. ನಾವು ಯಾವುದೇ ಪಕ್ಷದ ವಿರುದ್ಧವೂ ಅಲ್ಲ, ಇದು ಕಾಂಗ್ರೆಸ್ ವಿರುದ್ಧದ ಅಥವಾ ಬಿಜೆಪಿ ವಿರುದ್ಧದ ವಿಷಯವಲ್ಲ. ಇದು ಯಾವುದೇ ಒಂದು ರಾಜಕೀಯ ಪಕ್ಷದ ಪ್ರಶ್ನೆಯಲ್ಲ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಆತ್ಮಗೌರವದ ಪ್ರಶ್ನೆ. ಇಂದು ಈ ಘಟನೆ ಒಬ್ಬ ನಾಯಕನಿಗೆ ಸಂಬಂಧಿಸಿದೆ. ನಾಳೆ ಇದೇ ಮನೋಭಾವದಿಂದ ಒಬ್ಬ ಸಾಮಾನ್ಯ ಕಾರ್ಮಿಕನನ್ನು, ಒಬ್ಬ ವಿದ್ಯಾರ್ಥಿಯನ್ನು, ಒಬ್ಬ ಮಹಿಳೆಯನ್ನು, ಒಬ್ಬ ಯುವಕನನ್ನು ಅಥವಾ ಯಾವುದೇ ಹಿಂದುಳಿದ ಸಮುದಾಯದ ವ್ಯಕ್ತಿಯನ್ನು ಅವಮಾನಿಸಬಹುದು. ಆದ್ದರಿಂದ ಇದನ್ನು ರಾಜಕೀಯದ ಕಣ್ಣಿನಿಂದ ಮಾತ್ರ ನೋಡದೆ ಮಾನವೀಯತೆ ಮತ್ತು ಸಂವಿಧಾನದ ಕಣ್ಣಿನಿಂದ ನೋಡಬೇಕು ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯವನ್ನು ವಿರೋಧಿಸಬಹುದು, ಆದರೆ ಅವರ ಮಾನವ ಘನತೆಯನ್ನು ಅಲ್ಲ. ಅವರ ರಾಜಕೀಯ ವಿಚಾರಗಳನ್ನು ಯಾರಾದರೂ ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಅವರನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ರಾಜಕೀಯ ಭಿನ್ನಾಭಿಪ್ರಾಯ ಇರಬಹುದು, ಜಾತಿ ದ್ವೇಷ ಇರಬಾರದು. ರಾಜಕೀಯ ವಿರೋಧ ಇರಬಹುದು, ಮಾನವ ಅವಮಾನ ಇರಬಾರದು. ವಿಚಾರಗಳ ವಿರುದ್ಧ ಹೋರಾಡಬಹುದು, ವ್ಯಕ್ತಿಯ ಜಾತಿಯ ವಿರುದ್ಧ ಅಲ್ಲ. ಇದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಕೆ.ಎ.ಯಾಕುಬ್ ಅಭಿಪ್ರಾಯಪಟ್ಟಿದ್ದಾರೆ. ನಾವು ನಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದೇವೆ ಎಂಬುವುದನ್ನು ಒಮ್ಮೆ ಯೋಚಿಸೋಣ. ಅವನು ಯಾವ ಜಾತಿಯವನು? ಎಂದು ಕೇಳುವ ಸಮಾಜ ಬೇಕೇ? ಅಥವಾ ಅವನು ಒಬ್ಬ ಮನುಷ್ಯ, ಅವನಿಗೂ ನನ್ನಷ್ಟೇ ಗೌರವವಿದೆ ಎಂದು ಹೇಳುವ ಸಮಾಜ ಬೇಕೇ?. ನಮ್ಮ ಉತ್ತರ ಸ್ಪಷ್ಟವಾಗಿರಬೇಕು, ನಮಗೆ ಬೇಕಾಗಿರುವುದು ಜಾತಿಯಿಂದ ಮನುಷ್ಯರನ್ನು ವಿಭಜಿಸುವ ಭಾರತವಲ್ಲ ಸಂವಿಧಾನದ ಮೂಲಕ ಎಲ್ಲರನ್ನು ಸಮಾನವಾಗಿ ಕಾಣುವ ಭಾರತ. ಇಂದಿನ ಯುವಕರು ನಾಳೆಯ ಭಾರತವನ್ನು ನಿರ್ಮಿಸಲಿದ್ದಾರೆ. ಆದ್ದರಿಂದ ಯುವಕರೇ, ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ದ್ವೇಷದ ಸಂದೇಶಗಳನ್ನು ಹರಡಬೇಡಿ. ಯಾರ ಜಾತಿಯನ್ನೂ ಅವಮಾನಿಸಬೇಡಿ, ಯಾರ ಧರ್ಮವನ್ನೂ ಅವಮಾನಿಸಬೇಡಿ. ರಾಜಕೀಯ ಭಿನ್ನಾಭಿಪ್ರಾಯವನ್ನು ದ್ವೇಷವಾಗಿ ಪರಿವರ್ತಿಸಬೇಡಿ. ನಿಮ್ಮ ಕೈಯಲ್ಲಿರುವ ಮೊಬೈಲ್ ಒಂದು ಆಯುಧವಾಗಬಾರದು, ಅದು ಸಮಾಜವನ್ನು ಜೋಡಿಸುವ ಸಾಧನವಾಗಲಿ. ನಿಮ್ಮ ಮಾತು ಮತ್ತೊಬ್ಬರ ಹೃದಯವನ್ನು ಒಡೆಯುವುದಕ್ಕಿಂತ, ಸಮಾಜವನ್ನು ಕಟ್ಟುವಂತಿರಲಿ ಎಂದು ಮನವಿ ಮಾಡಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ನಾವು ಎರಡು ರೀತಿಯ ಭಾರತವನ್ನು ಕೊಡಬಹುದು. ಒಂದು ಜಾತಿ ಕೇಳಿ ಮನುಷ್ಯನನ್ನು ಅಳೆಯುವ ಭಾರತ. ಇನ್ನೊಂದು ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಭಾರತ. ನಾವು ಎರಡನೆಯ ಭಾರತವನ್ನು ನಿರ್ಮಿಸೋಣ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ. ಅದು ಪ್ರತಿಯೊಬ್ಬ ಭಾರತೀಯನ ಗೌರವದ ರಕ್ಷಾಕವಚ. ಸಂವಿಧಾನದಲ್ಲಿರುವ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಈ ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಜಾತಿ ತಾರತಮ್ಯದ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದವರು, ಅವರು ಯಾರೇ ಆಗಿರಲಿ, ಯಾವುದೇ ಪಕ್ಷ ಅಥವಾ ಸಂಘಟನೆಗೆ ಸೇರಿದವರೇ ಆಗಿರಲಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಮಗೆ ಪ್ರತೀಕಾರ ಬೇಡ, ನಮಗೆ ನ್ಯಾಯ ಬೇಕು, ನಮಗೆ ದ್ವೇಷ ಬೇಡ, ನಮಗೆ ಸಾಮಾಜಿಕ ಸಾಮರಸ್ಯ ಬೇಕು. ನಮಗೆ ಜಾತಿ ಸಂಘರ್ಷ ಬೇಡ, ನಮಗೆ ಸಮಾನತೆಯ ಭಾರತ ಬೇಕು.
ವೇದಿಕೆಯನ್ನು ಶುದ್ಧೀಕರಿಸುವುದಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿರುವ ಜಾತಿ ಧರ್ಮದ ದ್ವೇಷವನ್ನು ಶುದ್ಧೀಕರಿಸೋಣ. ಸ್ಥಳವನ್ನು ಪವಿತ್ರಗೊಳಿಸುವುದಕ್ಕಿಂತ ಮೊದಲು ನಮ್ಮ ಚಿಂತನೆಗಳನ್ನು ಪವಿತ್ರಗೊಳಿಸೋಣ. ಮನುಷ್ಯನನ್ನು ಅಪವಿತ್ರ ಎಂದು ನೋಡುವುದನ್ನು ನಿಲ್ಲಿಸಿ, ಮಾನವೀಯತೆಯನ್ನು ಪವಿತ್ರವೆಂದು ಕಾಣೋಣ. ಏಕೆಂದರೆ ಮನುಷ್ಯನಿಗಿಂತ ದೊಡ್ಡ ಜಾತಿ ಯಾವುದೂ ಇಲ್ಲ. ಮಾನವೀಯತಿಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ. ಸಮಾನತಿಗಿಂತ ದೊಡ್ಡ ಮೌಲ್ಯ ಯಾವುದೂ ಇಲ್ಲ. ಸಂವಿಧಾನಕ್ಕಿAತ ದೊಡ್ಡ ರಕ್ಷಾಕವಚ ಯಾವುದೂ ಇಲ್ಲ. ನಮ್ಮ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ. ನಮ್ಮ ಹೋರಾಟ ಯಾವುದೇ ಜಾತಿಯ ವಿರುದ್ಧವಲ್ಲ. ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವೂ ಅಲ್ಲ. ನಮ್ಮ ಹೋರಾಟ ಅಸ್ಪೃಶ್ಯತೆ, ಜಾತಿ ದ್ವೇಷ, ಅಸಮಾನತೆ ಮತ್ತು ಮಾನವ ಘನತೆಯನ್ನು ಕುಗ್ಗಿಸುವ ಪ್ರತಿಯೊಂದು ಮನೋಭಾವದ ವಿರುದ್ಧ ಎಂದು ಕೆ.ಎ.ಯಾಕುಬ್ ಸ್ಪಷ್ಟಪಡಿಸಿದ್ದಾರೆ. ಜಾತಿ ಬೇಡ, ಮಾನವೀಯತೆ ಬೇಕು ದ್ವೇಷ ಬೇಡ, ಸಹೋದರತ್ವ ಬೇಕು ಅಸ್ಪೃಶ್ಯತೆ ಬೇಡ, ಸಮಾನತೆ ಬೇಕು. ವಿಭಜನೆ ಬೇಡ ಏಕತೆ ಬೇಕು. ಸಂವಿಧಾನವೇ ನಮ್ಮ ಮಾರ್ಗ ಮಾನವ ಘನತೆಯೇ ನಮ್ಮ ಗುರಿ ತಿಳಿಸಿದ್ದಾರೆ.









