



ವಿರಾಜಪೇಟೆ ಸೆ.12 NEWS DESK : ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ಕಾನೂನಿನ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಲು ಬದ್ಧರಾಗಿ ಎಂದು ವಿರಾಜಪೇಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅಭಿಪ್ರಾಯಪಟ್ಟರು. ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ವಿರಾಜಪೇಟೆ ಪೊಲೀಸ್ ಠಾಣೆ ಹಾಗೂ ಪದವಿ ಕಾಲೇಜಿನ ಐಕ್ಯೂಎಸಿ, ಎನ್ ಎಸ್ ಎಸ್, ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಚಾರಿ ನಿಯಮಗಳು ಹಾಗೂ ಮಾದಕ ವಸ್ತು ಸೇವನೆಯ ಪರಿಣಾಮಗಳು, ಕಾಯಿದೆಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅವರು, ಮಾತನಾಡಿದರು. ಸಂಚಾರಿ ನಿಯಮಗಳು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಉದಾಹರಣೆ ಸಮೇತ ವಿವಿರಿಸಿದ ಅವರು, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ಯಥಾವತ್ತಾಗಿ ಪಾಲಿಸಬೇಕು. ವಾಹನ ಚಾಲನೆಯ ವೇಳೆಯಲ್ಲಿ ಸಂಭಂದಿತ ದಾಖಲೆಗಳು ಕಡ್ಡಾಯವಾಗಿ ಇರಬೇಕು ಎಂದರು. ಮಾದಕ ವಸ್ತುಗಳು ಮನುಷ್ಯನ ಜೀವನವನ್ನು ಹಾಳು ಮಾಡಿಬಿಡುತ್ತವೆ. ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದಾಸರಾಗದೇ ಭವ್ಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕಾನೂನನ್ನು ನಾವು ಗೌರವಿಸಿ ಪಾಲಿಸಬೇಕು. ಅವಾಗ ಅಪರಾಧಕ್ಕೆ ಆಸ್ಪದವಿರುವುದಿಲ್ಲ ಎಂದರು. ಸಂಚಾರಿ ನಿಯಮ ಉಲ್ಲಂಘನೆಯ ಕಾಯಿದೆಗಳು ಹಾಗೂ ಮಾದಕ ವಸ್ತು ಸೇವನೆಯ ಪರಿಣಾಮ, ಶಿಕ್ಷೆಗಳ ಕುರಿತು ಸಾಕ್ಷ್ಯ ಚಿತ್ರದ ಸಮೇತ ವಿವರಿಸಿ ಜಾಗೃತಿ ಮೂಡಿಸಿದರು. ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಪ್ರಮೋದ್ ರವರು ಮಾತನಾಡಿ ಕಾನೂನು ಸುವ್ಯವಸ್ಥೆ ಗೆ ಎಲ್ಲರೂ ಬದ್ಧರಾಗಿರಬೇಕು. ವಿದ್ಯಾರ್ಥಿ ಹಂತದಿಂದಲೇ ಉತ್ತಮ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ರೂಪಿಸಿಕೊಳ್ಳಬೇಕು. ಜೊತೆಗೆ ಕಾನೂನಿನ ಪಾಠವನ್ನು ಸಮಾಜಕ್ಕೆ ತಿಳಿ ಹೇಳಬೇಕು. ಅಪರಾಧ ಪ್ರಕರಣಗಳು ನಡೆಯದಂತೆ ಎಚ್ಚರಿಕೆಯನ್ನು ವಹಿಸಬೇಕು. ಉತ್ತಮ ಶಿಕ್ಷಣವನ್ನು ಪಡೆಯುದರ ಜೊತೆಗೆ ಉತ್ತಮ ಉದ್ಯೋಗವನ್ನು ಪಡೆದುಕೊಂಡು ಪೋಷಕರಿಗೂ, ವಿದ್ಯಾಸಂಸ್ಥೆಗೂ ಕೀರ್ತಿಯನ್ನು ತನ್ನಿ ಎಂದರು. ಅಪರಾಧವನ್ನು ತಡೆಗಟ್ಟಲು ಪೊಲೀಸ್ ಇಲಾಖೆಯ ಜೊತೆಗೆ ಸಹಕರಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮುಖ್ಯ. ಸಂವಿಧಾನವನ್ನು ಅರಿಯಬೇಕು. ಕಾನೂನಿನ ಅರಿವಾದಲ್ಲಿ ಅಪರಾಧಗಳು ನಡೆಯಲು ಸಾಧ್ಯವಿಲ್ಲ ಎಂದರು. ವಿರಾಜಪೇಟೆ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಈ ಜಾಗೃತಿ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿಗಳು ತಾವು ಕಲಿತದನ್ನು ಬೇರೆಯವರಿಗೂ ತಿಳಿಸಿ ಜಾಗೃತಿ ಮೂಡಿಸಿ ಎಂದರು. ವೇದಿಕೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಗಳಾದ ಲತಾ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಎನ್.ಎಸ್.ಎಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ರವರು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಪ್ರತಿಮಾ ರೈ ರವರು ಸ್ವಾಗತಿಸಿ, ಎನ್ ಎಸ್ ಎಸ್ ಅಧಿಕಾರಿ ಶಾಂತಿಭೂಷಣ್ ನಿರೂಪಿಸಿ, ಉಪನ್ಯಾಸಕಿ ವಿಲೀನ ರವರು ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಪೊಲೀಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.










