
ನಾಪೋಕ್ಲು ಸೆ.13 NEWS DESK : ಮುರ್ನಾಡು ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಸಲುವಾಗಿ “ಗುರುವಂದನಾ” ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ಪಂದನಾ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅಧ್ಯಾಪನ ವೃತ್ತಿ, ಮಾರ್ಗದರ್ಶನ ಅವರಿಗಿದ್ದ ತಾತ್ವಿಕ ಚಿಂತನೆ ಇಂದಿನ ಶಿಕ್ಷಕರ ಸ್ಫೂರ್ತಿಯ ಸೆಲೆಯಾಗಿದೆ. ಗುರುಗಳ ವಿನಃ ಯಾವ ವಿದ್ಯಾರ್ಥಿಯೂ ಪರಿಪೂರ್ಣನಾಗಲಾರ ಎಂದರು. ವಿದ್ಯಾರ್ಥಿನಿ ಮಯೂರಿ ಮಾತನಾಡಿ ಶಿಕ್ಷಕರ ಕರ್ತವ್ಯ ನಿಷ್ಠೆ, ನಿಷ್ಪಕ್ಷಪಾತ ಮನೋಭಾವ, ಶ್ರದ್ಧೆ, ಶಿಸ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಕಿರುಕಾಣಿಕೆಯನ್ನು ನೀಡಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮುಂಡಂಡ ಕೆ.ಅಪ್ಪಚ್ಚು, ಉಪಾಧ್ಯಕ್ಷರಾದ ಚೇಂದ್ರಿಮಾಡ ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಎಂ.ಅರುಣ್ ಅಪ್ಪಚ್ಚು, ಉಪಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳ ಉಪಸ್ಥಿತರಿದ್ದರು. ಸೌಜನ್ಯ ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಆರ್.ಪ್ರಕೃತಿ ಸ್ವಾಗತಿಸಿದರು, ಹಬೀಬ ನಿರೂಪಿಸಿ ಎಂ.ಸಿ.ಮೋನಿಷಾ ವಂದಿಸಿದರು.
ವರದಿ : ದುಗ್ಗಳ ಸದಾನಂದ.









