
ಮಡಿಕೇರಿ ಸೆ.13 NEWS DESK : ಮಡಿಕೇರಿ ತಾಲ್ಲೂಕಿನ ಗಾಳಿಬೀಡುವಿನಿಂದ ಕೋಳಿಗೂಡು ಪುನರ್ವಸತಿ ಬಡಾವಣೆಯವರೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಪ್ರತಿದಿನ ಬೆಳಿಗ್ಗೆ 8.30 ಮತ್ತು ಸಂಜೆ 4.45 ಗಂಟೆಗೆ ಕೋಳಿಗೂಡು ಪುನರ್ವಸತಿ ಬಡಾವಣೆಗೆ ಬಸ್ ತಲುಪಲಿದೆ. ಬಸ್ ಸಂಚಾರವನ್ನು ಆರಂಭಿಸಿದ ಹಿನ್ನೆಲೆ ಮಡಿಕೇರಿ ಬಸ್ ಡಿಪೋ ವ್ಯವಸ್ಥಾಪಕರು ಹಾಗೂ ಚಾಲಕರನ್ನು ಕೋಳಿಗೂಡು ಪುನರ್ವಸತಿ ಬಡಾವಣೆಯಲ್ಲಿ ಗ್ರಾಮಸ್ಥರು ಅಭಿನಂದಿಸಿ ಸ್ವಾಗತಿಸಿದರು. ನಂತರ ಗಾಳಿಬೀಡು ಪುನರ್ವಸತಿ ಸಂಘದ ಅಧ್ಯಕ್ಷ ರವಿ ಅಪ್ಪುಕುಟ್ಟನ್, ಉಪಾಧ್ಯಕ್ಷ ಸ್ಟೀವನ್ ಡಿಸೋಜ, ತಾಜ್, ಕಾರ್ಯದರ್ಶಿ ಅಮ್ಮಿ, ಖಜಾಂಚಿ ಸುಮಿತ್ರ ಹಾಗೂ ಬಡಾವಣೆ ನಿವಾಸಿಗಳು ಬಸ್ ಗೆ ಪೂಜೆ ಸಲ್ಲಿಸಿದರು. ಮನವಿಗೆ ತಕ್ಷಣ ಸ್ಪಂದಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಗಾಳಿಬೀಡು ಪುನರ್ವಸತಿ ಸಂಘದಿಂದ ಬಡಾವಣೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರ ಬಸ್ ಸಂಚಾರ ಆರಂಭಿಸುವ ಭರವಸೆ ನೀಡಿದರಲ್ಲದೆ, ಇದೀಗ ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.









