
ಮಡಿಕೇರಿ NEWS DESK ಸೆ.14 : ನೂರಾರು ವರ್ಷಗಳ ಇತಿಹಾಸವಿರುವ ಮಡಿಕೇರಿ ದಸರಾ ಜನೋತ್ಸವಕ್ಕೆ ಕೇವಲ ಒಂದು ವಾರ ಬಾಕಿ ಉಳಿದಿದೆ. ದಸರಾ ಹಬ್ಬದ ಪ್ರಮುಖ ಧಾರ್ಮಿಕ ಆಚರಣೆಯಾದ ಕರಗಗಳ ನಗರ ಸಂಚಾರ ಮುಂದಿನ ವಾರದಿಂದ ಆರಂಭವಾಗುತ್ತದೆ. ಆದರೆ ನಗರದ ಎಲ್ಲಾ ರಸ್ತೆಗಳು ಹೊಂಡ, ಗುಂಡಿಗಳಿಂದ ಕೂಡಿರುವುದರಿಂದ ದಸರಾ ಸಮಿತಿಗಳು ಬೇಸರ ವ್ಯಕ್ತಪಡಿಸಿವೆ. ಪ್ರತಿವರ್ಷ ಮಡಿಕೇರಿ ಮಹೋತ್ಸವ ಆರಂಭವಾಗುವುದೇ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ. ಸುಮಾರು ಒಂಭತ್ತು ದಿನಗಳ ನಗರ ಸಂಚಾರದ ಮೂಲಕ ಕರಗಗಳು ಭಕ್ತರಿಂದ ಪೂಜೆಯನ್ನು ಸ್ವೀಕರಿಸುತ್ತವೆ. 10 ನೇ ದಿನವಾದ ವಿಜಯದಶಮಿಯಂದು ಹತ್ತು ದೇವಾಲಯಗಳ ದಶಮಂಟಪಗಳ ಶೋಭಾಯಾತ್ರೆ ವೈಭವದಿಂದ ಸಾಗುತ್ತದೆ. ಆದರೆ ಮಡಿಕೇರಿ ನಗರದ ರಸ್ತೆಗಳು ಕರಗಗಳ ನಗರ ಸಂಚಾರ ಮತ್ತು ದಶಮಂಟಪಗಳ ಶೋಭಾಯಾತ್ರೆಗೆ ಯೋಗ್ಯವಾಗಿಲ್ಲ. ಕಳೆದ ಮೂರು ತಿಂಗಳ ಕಾಲ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ನಗರಸಭಾ ವ್ಯಾಪ್ತಿಯ ಎಲ್ಲಾ 23 ವಾರ್ಡ್ಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೊಂಡ, ಗುಂಡಿಗಳಿಂದ ಕೂಡಿದೆ. ನಗರದ ಹೃದಯ ಭಾಗದ ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ, ರಾಜಾಶೀಟ್ ರಸ್ತೆ, ಗೌಳಿಬೀದಿ ರಸ್ತೆ, ಕೊಹಿನೂರ್ ರಸ್ತೆ, ಮಹದೇವಪೇಟೆ ರಸ್ತೆ, ಇಂದಿರಾಗಾAಧಿ ವೃತ್ತ ರಸ್ತೆ, ಮಲ್ಲಿಕಾರ್ಜುನ ನಗರ ರಸ್ತೆ, ಗಣಪತಿ ಬೀದಿ ಮತ್ತು ಹೆಸರುವಾಸಿ ಪ್ರವಾಸಿತಾಣ ಅಬ್ಬಿ ಜಲಪಾತದ ರಸ್ತೆಗಳಲ್ಲಿ ವಾಹನಗಳ ಸಂಚಾರ ಅಸಾಧ್ಯವಾಗಿದೆ.
ದಸರಾದ ಹಿನ್ನೆಲೆ ಮಡಿಕೇರಿ ನಗರಕ್ಕೆ ಲಕ್ಷಕ್ಕೂ ಮೀರಿ ಪ್ರವಾಸಿಗರು ಆಗಮಿಸುತ್ತಾರೆ, ಸಾವಿರಾರು ವಾಹನಗಳು ಪ್ರವೇಸಿಸುತ್ತವೆ. ಆದರೆ ರಸ್ತೆಗಳ ಹೊಂಡ, ಗುಂಡಿಗಳು ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿವೆ, ಹದಗೆಟ್ಟ ರಸ್ತೆಗಳಿಂದ ನಗರದ ಸೌಂದರ್ಯಕ್ಕೆ ದಕ್ಕೆಯಾಗಿದೆ. ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣವಿದ್ದರೂ ರಸ್ತೆಗಳ ಡಾಂಬರೀಕರಣ ಕಾರ್ಯ ಆರಂಭಿಸದ ನಗರಸಭೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಅಧಿಕ ಮಳೆಯಾಗಿರುವ ಹಿನ್ನೆಲೆ ಎಲ್ಲಾ ರಸ್ತೆಗಳಿಗೆ ಹಾನಿಯಾಗಿದ್ದು, ಗುಂಡಿ ಮುಚ್ಚುವ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದು ನಗರಸಭೆಯ ಪೌರಾಯುಕ್ತ ಹೆಚ್.ಆರ್.ರಮೇಶ್ ತಿಳಿಸಿದ್ದಾರೆ. *ಗುಣಮಟ್ಟದ ಕಾಮಗಾರಿ ನಡೆಯಲಿ* ಕರಗೋತ್ಸವ ಮತ್ತು ದಶಮಂಟಪಗಳ ಯಶಸ್ವಿ ನಿರ್ವಹಣೆಗೆ ನಗರಸಭೆಯ ಸಹಕಾರ ಅತಿ ಮುಖ್ಯ. ಪ್ರಸ್ತುತ ಮಡಿಕೇರಿಯ ಹಲವು ರಸ್ತೆಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಇವುಗಳನ್ನು ಎನ್.ಡಿ.ಆರ್.ಎಫ್ ಹಾಗೂ ನಗರಸಭೆ ನಿಧಿಯಿಂದ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಕೊನೆಯ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಂಡರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶೀಘ್ರ ರಸ್ತೆ ಕಾಮಗಾರಿ ಆರಂಭಿಸಬೇಕು, ಎಷ್ಟು ಅನುದಾನವನ್ನು ರಸ್ತೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ ಎನ್ನುವುದನ್ನು ಸಾರ್ವಜನಿಕವಾಗಿ ತಿಳಿಸಬೇಕು. ಗುಣಮಟ್ಟದ ಕಾಮಗಾರಿ ನಡೆಸಿ, ಸಾರ್ವಜನಿಕರ ಸುಗಮ ಸಂಚಾರ ಹಾಗೂ ದಸರಾ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕು. ಮುಂದಿನ ವರ್ಷದ ದಸರಾ ವೇಳೆಗೆ ನಗರದಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸಬೇಕು. (ಬಿ.ಎಂ.ಹರೀಶ್ ಅಣ್ವೇಕರ್, ಅಧ್ಯಕ್ಷರು, ಮಡಿಕೇರಿ ದಸರಾ ದಶಮಂಟಪ ಸಮಿತಿ)









