
ಮಡಿಕೇರಿ ಸೆ.15 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮಾ)ನ ಕೊಡಗು ಘಟಕವು ಇಪ್ಪತ್ತೈದನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಮುಂದಿನ ಅ.18ರ ಧನ್ವಂತರಿ ಜಯಂತಿಯಂದು ಸಂಸ್ಥೆಯ ‘ಬೆಳ್ಳಿ ಹಬ್ಬ’ವನ್ನು ಆಚರಿಸಿಕೊಳ್ಳಲಿದೆಯೆಂದು ನೀಮಾ ಅಧ್ಯಕ್ಷ ಡಾ. ರಾಜಾರಾಮ ಎ.ಆರ್. ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಸಾಲಿನ ಧನ್ವಂತರಿ ಜಯಂತಿಯ ಬಳಿಕ ನೀಮಾ ಕೊಡಗು ಘಟಕದ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ವೈವಿಧ್ಯಮಯವಾದ ಇಪ್ಪತ್ತೈದು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದೀಗ ಬೆಳ್ಳಿ ಹಬ್ಬದ ಸಮಾರಂಭವನ್ನು ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಿರುವುದಾಗಿ ತಿಳಿಸಿದರು. :: 25 ಮಂದಿ ಸಾಧಕರಿಗೆ ಸನ್ಮಾನ :: ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ನೀಮಾ ಪ್ರಕೃತಿಗಾಗಿ, ನೈಸರ್ಗಿಕ ಚಿಕಿತ್ಸೆಗಾಗಿ ಅಥವಾ ಜನರ ಆರೋಗ್ಯಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ 25 ಸಾಧಕರನ್ನು ಗುರುತಿಸಿ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸನ್ಮಾನಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ಸೂಕ್ತ ಹೆಸರನ್ನು ಸೂಚಿಸುವಂತೆ ಕೊಡಗು ನೀಮಾ ಅಧ್ಯಕ್ಷ ಡಾ. ರಾಜಾರಾಮ ಅವರು ಮನವಿ ಮಾಡಿ, ಸಾಧಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಸಾಧನೆಗೆ ಪೂರಕವಾದ ಮಾಹಿತಿ ಪತ್ರಗಳನ್ನು ಲಗತ್ತಿಸಿ ಸೆ.25ರ ಒಳಗಾಗಿ ಮೊ.9886266120, 9036843207, 9448058231ಗೆ ಕಳುಹಿಸಿಕೊಡುವಂತೆ ವಿನಂತಿಸಿದರು. *ನೀಮಾದಿಂದ ‘ತರು ತಜ್ಞ’* ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ನೀಮಾ ಸಂಘಟನೆಯು ಕಳೆದ ಒಂದು ವರ್ಷದ ಅವಧಿಯಲ್ಲಿ 2,500 ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ನ ಸಹಕಾರದೊಂದಿಗೆ ನಡೆಸಿಕೊಂಡು ಬಂದಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. :: ವೈದ್ಯರಿಗಾಗಿ ವಿಶೇಷ ಸ್ಪರ್ಧೆ :: ಕೊಡಗಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ‘ವೈದ್ಯಕೀಯ ರಂಗ ಬೆಳೆದು ಬಂದ ದಾರಿ’ ಎಂಬ ವಿಷಯದ ಕುರಿತು ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆ.25ರ ಒಳಗೆ ಎರಡು ಪುಟ ಮೀರದಂತೆ ಬರೆದು ಕಳುಹಿಸಬೇಕು. ವಿಜೇತ ವೈದ್ಯರಿಗೆ ವಿಶೇಷ ಬಹುಮಾನ ನೀಡಲಾಗುವುದೆಂದು ತಿಳಿಸಿದರು. ಈಗಾಗಲೇ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪೋಸ್ಟರ್ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಅಗ್ರ ಸ್ಥಾನವನ್ನು ಪಡೆದಿದ್ದ್ದು, ದ್ವಿತೀಯ ಸ್ಥಾನವನ್ನು ಮಡಿಕೇರಿಯ ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದರು. :: ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ :: ನೀಮಾ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆಯೊಂದನ್ನು ತರಲು ಉದ್ದೇಶಿಸಿದೆ. ಇದಕ್ಕೆ ಆಸಕ್ತರು ತಮ್ಮ ಲೇಖನಗಳನ್ನು ಸೆ.20 ರ ಒಳಗಾಗಿ ಕಳುಹಿಸಿಕೊಡುವಂತೆ ಇದೇ ಸಂದರ್ಭ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಡಾ.ಜ್ಯೋತಿ ರಾಜಾರಾಮ ಮತ್ತು ಡಾ.ಎಂ.ಅನುಷಾ ಉಪಸ್ಥಿತರಿದ್ದರು.









