
ನಾಪೋಕ್ಲು ಸೆ.16 NEWS DESK : ಎಲ್ಲಾ ಜಾತಿ ಧರ್ಮದವರು ಒಗ್ಗೂಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸರ್ವಧರ್ಮ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಎಲ್ಲಾ ವರ್ಗದ ಜನರು ಶಾಂತಿಯುತ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಎಲ್ಲ ಧರ್ಮದವರು ಶಾಂತಿಯನ್ನು ಕಾಪಾಡಬೇಕಾದದ್ದು ಅತ್ಯಗತ್ಯ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಶ್ರಮವಹಿಸಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾವು ಬಾಹ್ಯವನ್ನು ಉದ್ದರಿಸುವುದಕ್ಕಿಂತ ನಮ್ಮನ್ನು ನಾವು ಉದ್ದರಿಸಿಕೊಂಡು ಜೀವನ ಸಾಗಿಸಬೇಕು. ಸಾಮಾಜಿಕವಾಗಿರುವ ಎಲ್ಲ ಚೌಕಟ್ಟುಗಳನ್ನು ಕಳಿಸಿಕೊಂಡು ಇಡೀ ಮನುಕುಲವನ್ನು ಪ್ರೀತಿಸುವುದು ಸಹಜವಾದ ಧರ್ಮ ಎಂದರು. ನಾಪೆÇೀಕ್ಲುವಿನ ಸಂತಮೇರಿ ಚರ್ಚ್ ನ ಜ್ಞಾನಪ್ರಕಾಶ್ ಮಾತನಾಡಿ, ಈ ಭೂಮಿಯ ಮೇಲೆ ನೂರಾರು ಧರ್ಮಗಳಿವೆ ಈ ಎಲ್ಲ ಧರ್ಮಗಳಿಗಿಂತ ಬಹಳ ಮುಖ್ಯವಾದದ್ದು ಮನುಷ್ಯ ಧರ್ಮ. ತಂದೆ ತಾಯಿಗಳನ್ನು ಗೌರವಿಸುವುದು, ಕಳ್ಳತನ ಮಾಡದಿರುವುದು, ಮೋಸ, ಬೂಟಾಟಿಕೆ, ವಂಚನೆ ತ್ಯಜಿಸುವುದು, ಬೇರೆಯವರ ಭಾವನೆಗಳನ್ನು ಅರ್ಥೈಸಿಕೊಳ್ಳುವುದು ಮುಂತಾದ ಉತ್ತಮ ಗುಣಗಳನ್ನು ರೂಡಿಸಿಕೊಂಡು ಮನುಷ್ಯನಾಗಿ ಮಾಡಬೇಕು ಎಂದರು. ಜಮಾಯತ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರು ಸಮಾಜಮುಖಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಸರಕಾರದಿಂದ ಹೆಚ್ಚಿನ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ನಾವು ಮದುವೆ ಸಮಾರಂಭಗಳನ್ನು ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಇದನ್ನು ನಿವಾರಿಸಲು ಇದಾಗಲೇ 3.80 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾದಿ ಮಾಲ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದ ಅವರು ತಾವು ಮುಖ್ಯಮಂತ್ರಿಗಳ ನಿಕಟ ಸಂಪರ್ಕದಲ್ಲಿ ಇದ್ದು, ಈ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಫೈಝಿ ಉದ್ಘಾಟಿಸಿದರು. ಇದಕ್ಕೂ ಮೊದಲು ಹಳೆ ತಾಲೂಕಿನಿಂದ ನಾಪೆÇೀಕ್ಲು ಮಾರ್ಕೆಟ್ ವರೆಗೆ ಮೀಲಾದ್ ಜಾಥಾ ನಡೆಯಿತು. ಜಾಥಾದಲ್ಲಿ ಮಸೀದಿಯ ಸ್ತಬ್ಧ ಚಿತ್ರ, ಮಕ್ಕಳ ದಫ್ ಪ್ರದರ್ಶನ ಗಮನ ಸೆಳೆಯಿತು. ಈ ಸಂದರ್ಭ ಬಸ್ಸು ನಿಲ್ದಾಣದ ಸಮೀಪ ವಿವೇಕಾನಂದ ಯುವಕ ಸಂಘದಿಂದ ಜಾತವನ್ನು ಸ್ವಾಗತಿಸಿ ತಂಪು ಪಾನೀಯವನ್ನು ವಿತರಿಸುವುದರೊಂದಿಗೆ ಸರ್ವಧರ್ಮ ಸಮನ್ವಯ ಸಾರಿ ಸಮಾಜಕ್ಕೆ ಮಾದರಿಯಾದರು. ಸಂಜೆ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ಮನ್ಸೂರ್ ಆಲಿ, ಕೆ.ಎ.ಇಸ್ಮಾಯಿಲ್, ಖುರೇಶಿ ಎಂ.ಐ, ಅಶ್ರಫ್ ಕೆ.ವೈ, ಮೊಹಮ್ಮದ್, ಹಂಸ ಕೊಟ್ಟಮುಡಿ, ಕೆ.ಕೆ.ಉಸ್ಮಾನ್, ಅಜಿಜ್, ರಶೀದ್, ಅಬ್ದುಲ್, ಸಲೀಂ ಹ್ಯಾರಿಸ್, ಶೌಕತ್ ಅಲಿ, ಅರಫತ್, ಅಹಮದ್ ಸಿ.ಹೆಚ್, ಮಹಮ್ಮದ್ ಹಾಜಿ ಕುಂಜಿಲ, ಬದ್ರುದ್ದೀನ್ ಸಿ.ಎಂ., ನೌಫಲ್, ಆಸಿಫ್ ಆಲಿ, ತೆರುವತ್ ಹುಸೈನಾರ್, ನಾಲ್ಕು ನಾಡಿನ ಎಲ್ಲಾ ಜಮಾಯತ್ ಅಧ್ಯಕ್ಷರು, ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಜನಾಂಗಬಾಂಧವರು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಜಮಾಯತ್ ಕಾರ್ಯದರ್ಶಿ ಪಿ.ಎಂ.ಯೂನಸ್ ಸ್ವಾಗತಿಸಿದರು. ಅಹಮದ್ ಸಿ.ಹೆಚ್.ನಿರೂಪಿಸಿ, ತಿರುವತ್ ಹ್ಯಾರಿಸ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.








