
ಸೋಮವಾರಪೇಟೆ ಸೆ.17 NEWS DESK : ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ತಲಾ 10 ಲಕ್ಷ ರೂ.ಗಳ ಅನುದಾನ ಕಲ್ಪಿಸುವುದಾಗಿ ಶಾಸಕ ಡಾ.ಮಂತರ್ ಗೌಡ ಅವರು ಭರವಸೆ ನೀಡಿದರು. ಸೋಮವಾರಪೇಟೆ ಹಾಗೂ ಶಾಂತಳ್ಳಿ ಹೋಬಳಿಯ 7 ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಮತ್ತು ಅಧಿಕಾರಿಗಳ ತಂಡ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಯಡೂರು ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಹಿಳೆಯರು ತಮ್ಮೂರಿನ ರಸ್ತೆಯ ಸಮಸ್ಯೆಯ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಗ್ರಾಮದೊಳಗಿನ ರಸ್ತೆಯಲ್ಲಿ ತಿರುಗಾಡಲು ಸಮಸ್ಯೆಯಾಗಿದೆ. ರಸ್ತೆ ಡಾಮರೀಕರಣಕ್ಕೆ ಅನುದಾನ ಕಲ್ಪಿಸಬೇಕೆಂದು ಮನವಿ ಮಾಡಿದರು. ಚೌಡ್ಲು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಚೌಡ್ಲು ಸುಗ್ಗಿ ಕಟ್ಟೆ ಅಭಿವೃದ್ಧಿಗೆ 10 ಲಕ್ಷ ರೂ.ಗಳ ಅನುದಾನ ಹಾಗೂ 50 ಲಕ್ಷ ರೂ.ಗಳ ವೆಚ್ಚದಲ್ಲಿ ಚನ್ನಬಸಪ್ಪ ಸಭಾಂಗಣದಿಂದ ಚೌಡ್ಲು ಗ್ರಾಮದೊಳಗಿನ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು. ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು ರಸ್ತೆ, ತಡೆಗೋಡೆ, ಹಾಗು ಸಮುದಾಯಭವನಕ್ಕೆ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು. ಈಗಾಗಲೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಮುಂದುವರಿದ ಕಾಮಗಾರಿಗೆ ಅನುದಾನ ನೀಡುತ್ತೇನೆ. ಗ್ರಾಮದೊಳಗಿನ ರಸ್ತೆಗೂ ಅನುದಾನ ಕಲ್ಪಿಸುವ ಭರವಸೆ ನೀಡಿದರು. ಸಭೆಯಲ್ಲಿ ಚೌಡ್ಲು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಪಿ.ಸತೀಶ್, ಹಾನಗಲ್ಶೆಟ್ಟಳ್ಳಿ ಅಧ್ಯಕ್ಷ ಉಲ್ಲಾಸ್, ಯಡೂರು ಗ್ರಾಮದ ಅಧ್ಯಕ್ಷ ಮೋಹನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಬಿ.ಸತೀಶ್, ಬಿ.ಈ,ಜಯೇಂದ್ರ, ಎಚ್.ಆರ್.ಸುರೇಶ್, ಜಾನಕಿ ವೆಂಕಟೇಶ್, ಲಾರೆನ್ಸ್, ಚೇತನ್, ಸೋಮಶೇಖರ್, ಕಿರಣ್ ಹಾಗು ಗ್ರಾಮಪಂಚಾಯಿತಿ ಸದಸ್ಯರುಗಳು ಇದ್ದರು.









