
ಮಡಿಕೇರಿ ಸೆ.18 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಉತ್ಸವವು ಸೆ.22 ರಿಂದ ಆರಂಭವಾಗಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಸೋಮವಾರ ಬೆಳಿಗ್ಗೆ 8.30 ಗಂಟೆಗೆ ದೇವಾಲಯದಲ್ಲಿ ಗಣಪತಿ ಹೋಮ ಹಾಗೂ ನವರಾತ್ರಿ ಕೊನೆಗೊಳ್ಳುವ ತನಕ ದೇವಾಲಯದ ಟ್ರಸ್ಟ್ ಮತ್ತು ದಾನಿಗಳ ಸಹಕಾರದಿಂದ ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಮಧ್ಯಾಹ್ನ 2 ಗಂಟೆಗೆ ಕರಗ ಕಟ್ಟಿ ಅಲಂಕರಿಸಲ್ಪಡುವ ಸ್ಥಳವಾದ ಪಂಪಿನ ಕೆರೆಗೆ ಕರಗ ತೆರಳಲಿದೆ. :: ಪೂಜಾ ಕಾರ್ಯಕ್ರಮಗಳು ಹಾಗೂ ಕರಗ ಸಂಚರಿಸುವ ಮಾರ್ಗ :: ಸೆ.22 ರಂದು ಸಂಜೆ 5 ಗಂಟೆಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಅಲಂಕೃತ ಕರಗವನ್ನು ಮೆರವಣಿಗೆ ಮೂಲಕ ಮಡಿಕೇರಿಯ ರಾಜಬೀದಿ ಮಾರ್ಗವಾಗಿ ಮಹದೇವಪೇಟೆ ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ಹಿಂತಿರುಗಲಿದೆ. ಸೆ.23 ರಂದು ಬೆಳಿಗ್ಗೆ 11.30ಕ್ಕೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ, ಮಧ್ಯಾಹ್ನ 12.30 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ, 1.30 ಗಂಟೆಗೆ ನಗರ ಪ್ರದಕ್ಷಿಣೆಗೆ ದೇವಾಲಯದಿಂದ ಹೊರಟು ಶಾಂತಿನಿಕೇತನ ಮೂಲಕ ಸುದರ್ಶನ ಅತಿಥಿ ಗೃಹದ ಕೆಳಭಾಗ, ಜಯನಗರ ಬಡಾವಣೆ. ಬ್ರಾಹ್ಮಣರ ಬೀದಿ, ಅಶ್ವತ್ಥಕಟ್ಟೆ, ದೇಚೂರು ಮಾರ್ಗವಾಗಿ ದೇಚೂರು ಶ್ರೀ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ಹಿಂತಿರುಗಲಿದೆ. ಸೆ.24 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆಯ ನಂತರ ಮಧ್ಯಾಹ್ನ 12.30ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ, 1.30 ಗಂಟೆಗೆ ದೇವಾಲಯದಿಂದ ಹೊರಟು ಶ್ರೀ ಓಂಕಾರೇಶ್ವರ ದೇವಾಲಯ ಮಾರ್ಗವಾಗಿ ಬಾಹ್ಮಣರ ಬೀದಿ, ದೇಚೂರು, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ರಸ್ತೆ, ಖಾದಿ ಬಂಡಾರ, ಅಪ್ಪಚ್ಚ ಕವಿ ರಸ್ತೆ, ನಂತರ ಪ್ರಸಾದ್ ಲಾಡ್ಜ್ ಮುಂಭಾಗ, ಕೈಗಾರಿಕಾ ಬಡಾವಣೆ, ಡೈರಿ ಫಾರಂ ರಸ್ತೆ, ರಿಮ್ಯಾಂಡ್ ಹೋಂ ಹಿಂಭಾಗ, ಎಲ್.ಐ.ಸಿ. ಕಛೇರಿ, ರೇಸ್ಕೋರ್ಸ್ ರಸ್ತೆಗಾಗಿ ಹಿಂತಿರುಗಲಿದೆ.
ಸೆ.25 ರಂದು ದೇವಾಲಯದಲ್ಲಿ ಕರಗಕ್ಕೆ ವಿಶೇಷ ಪೂಜೆ ನಡೆಯಲಿದೆ. ಮಧ್ಯಾಹ್ನ 1.30 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಸೆ.26 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ, ಮಧ್ಯಾಹ್ನ 12.30ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ, 1.30 ಗಂಟೆಗೆ ದೇವಾಲಯದಿಂದ ಹೊರಟು ಪೆನ್ಷನ್ ಲೇನ್, ಹೊಟೇಲ್ ರಾಜದರ್ಶನ್ ಹಿಂಭಾಗದ ಮುನೀಶ್ವರ ದೇವಾಲಯ, ಶ್ರೀ ಪ್ರಸನ್ನ ಗಣಪತಿ ದೇವಾಲಯ, ಹೊಸ ಬಡಾವಣೆ, ಗೌಳಿಬೀದಿ ಮಾರ್ಗವಾಗಿ ದೇವಾಲಯಕ್ಕೆ ಹಿಂತಿರುಗಲಿದೆ.
ನವರಾತ್ರಿಯವರೆಗೆ ದೇವಾಲಯದಲ್ಲಿ ಮಧ್ಯಾಹ್ನ 12.30 ಗಂಟೆಗೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ, ಮಧ್ಯಾಹ್ನ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಹಾಗೂ ರಾತ್ರಿ 8.30ರ ವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ-ವಿಧಾನಗಳು ನಡೆಯಲಿದೆ. ಅ.1 ರಂದು ಆಯುಧ ಪೂಜೆಯ ಪ್ರಯುಕ್ತ ಬೆಳಿಗ್ಗೆ 6 ಗಂಟೆಯಿಂದ ಸಂಜೆ 8.30 ಗಂಟೆಯವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಮತ್ತು ವಾಹನ ಪೂಜೆ ಜರುಗಲಿದೆ. ಅ.2 ರಂದು ನವರಾತ್ರಿಯ ದಿನದಂದು ರಾತ್ರಿ 12 ಗಂಟೆಗೆ ಅಲಂಕೃತ ಕರಗದೊಂದಿಗೆ ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ತೆರಳಿ ನಾಲ್ಕು ಶಕ್ತಿ ದೇವತೆ ಕರಗಗಳು ಎಲ್ಲಾ ದಶ ಮಂಟಪಗಳಿಗೆ ಪೂಜೆ ಸಲ್ಲಿಸಿ, ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ದೇವಾಲಯಕ್ಕೆ ಹಿಂತಿರುಗಲಿದೆ. ನಂತರ ಮೂರನೆಯ ದಿನವಾದ ಅ.4 ರಂದು ಸಂಜೆ ಕರಗಕ್ಕೆ ಸಂಬಂಧಿಸಿದಂತೆ “ಕುಂಭ ಪೂಜೆ” ನಡೆಯುವುದರೊಂದಿಗೆ ಈ ವರ್ಷದ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.









