
ಕುಶಾಲನಗರ ಸೆ.19 NEWS DESK : ಕುಶಾಲನಗರ ವ್ಯಾಪ್ತಿಯಲ್ಲಿ 15, 20 ವರ್ಷಗಳ ಹಳೆಯ ವಾಣಿಜ್ಯ ಕಟ್ಟಡಗಳಿಗೆ ಕಾರ್ಮಿಕ ಇಲಾಖೆಯಿಂದ ನೋಟಿಸ್ ನೀಡುತ್ತಿರುವುದು ತಪ್ಪು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ನೇತೃತ್ವದಲ್ಲಿ ಮನವಿ ನೀಡಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಚೇಂಬರ್ ಪ್ರತಿನಿಧಿಗಳು, ಸ್ಥಳೀಯ ಪಂಚಾಯಿತಿ ಕಟ್ಟಡ ನಿರ್ಮಾಣ ಪರವಾನಗಿ ನೀಡುವಾಗ ಕಾರ್ಮಿಕ ಸೆಸ್ ಪಡೆದಿರುತ್ತಾರೆ. ಕಾರ್ಮಿಕ ಇಲಾಖೆ ಪಂಚಾಯಿತಿಯಿಂದ ಸಂಗ್ರಹಿಸಲಾದ ಸೆಸ್ ಹಣವನ್ನು ಪಡೆಯಬೇಕು. ಅದು ಬಿಟ್ಟು ಮಾಲೀಕರಿಗೆ ನೋಟಿಸ್ ನೀಡಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ, ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಇರಲು ಸೂಚಿಸಿದರು. ಪ್ರತಿ 45 ದಿನಗಳಿಗೆ ಒಮ್ಮೆ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಗಬೇಕಿರುವ ಕೆಲಸ ಕಾರ್ಯಗಳ ಚರ್ಚಿಸಿ ಮುನ್ನಡೆಯಲು ಸಲಹೆ ನೀಡಿದರು. ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ, ಅನವಶ್ಯಕವಾಗಿ ಯಾರಿಗೂ ನೋಟಿಸ್ ಕೊಡುವುದಕ್ಕಿಂತ, ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅಗತ್ಯವಿರುವವರಿಂದ ಟ್ಯಾಕ್ಸ್ ಸಂಗ್ರಹ ಮಾಡಿ. ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ಪರಿಶೀಲಿಸಿ ಟ್ಯಾಕ್ಸ್ ಸಂಗ್ರಹ ಮಾಡಲು ಯಾರಿಂದಲೂ ವಿರೋಧವಿರುವುದಿಲ್ಲ ಎಂದು ತಿಳಿಸಿದರು. ಸಚಿವರು ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಖಜಾಂಚಿ ಎನ್.ವಿ.ಬಾಬು, ಉಪಾಧ್ಯಕ್ಷ ರಂಗಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಅಂಬೇಕಲ್ ನವೀನ್, ಸೋಮವಾರಪೇಟೆ ಅಧ್ಯಕ್ಷ ಧನು ಕುಮಾರ್ ಇತರರು ಉಪಸ್ಥಿತರಿದ್ದರು.









