
ಮಡಿಕೇರಿ ಆ.13 NEWS DESK : ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಡಾ.ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮ ವ್ಯಾಪ್ತಿಯ ಎರಡು ಸಾವಿರಕ್ಕೂ ಅಧಿಕ ಮಂದಿ ವೈಯುಕ್ತಿಕವಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲಿದ್ದಾರೆ ಎಂದು ಚೆಟ್ಟಿಮಾನಿ(ಕುಂದಚೇರಿ) ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಹಾಗೂ ಕುಂದಚೇರಿ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಯು.ಹ್ಯಾರೀಸ್ ಅವರು, ಕೇಂದ್ರ ಸರಕಾರ ಇತ್ತೀಚೆಗೆ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಕೊಡಗು ಜಿಲ್ಲಾ ವ್ಯಾಪ್ತಿಯ 55 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಕುಂದಚೇರಿ ಪಂಚಾಯ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮಗಳು ಒಳಪಡುತ್ತದೆ. ಈ ಎರಡು ಗ್ರಾಮಗಳಲ್ಲಿ ಸರಿ ಸುಮಾರು 4 ಸಾವಿರ ಜನರು ವಾಸವಿದ್ದು, ಬಹುತೇಕ ಬಡವರ್ಗದ ಮಂದಿಯೇ ಆಗಿದ್ದಾರೆ. ವರದಿ ಜಾರಿಯಾದಲ್ಲಿ ಇವರೆಲ್ಲರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಶೇ.37 ರಷ್ಟು ಅರಣ್ಯ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಗುರುತಿಸಲಾಗಿದೆ. ಆದರೆ, ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮಗಳಲ್ಲಿ 7,388 ಹೆಕ್ಟೇರ್ ಅರಣ್ಯ ಮತ್ತು ಕೃಷಿ ಭೂಮಿ ಇದ್ದು, ಇದರಲ್ಲಿ ಶೇ.56.25 ರಷ್ಟು ಅಂದರೆ 4,152 ಹೆಕ್ಟೇರ್ ಪ್ರದೇಶ ಅದಾಗಲೆ ಅರಣ್ಯ ಪ್ರದೇಶವಾಗಿಯೇ ಸಂರಕ್ಷಿತವಾಗಿದೆ. ಹೀಗಿರುವಾಗ ಜನವಸತಿಯ ಜಾಗವನ್ನು ಒಳಗೊಂಡಂತೆ ಈ ಎರಡೂ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಗುರುತಿಸಕೂಡದು, ಈ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯ ಐವತ್ತೈದು ಗ್ರಾಮಗಳು ಸೇರಿದಂತೆ, ಜಿಲ್ಲೆಯನ್ನು ಸುತ್ತಲೂ ಆವರಿಸಿರುವ ಅರಣ್ಯ ಪ್ರದೇಶ ಸೂಕ್ಷ್ಮ ಪರಿಸರ ವಲಯವೆಂದು ಪರಿಗಣಿಸಿ, ಈ ಸೂಕ್ಷ್ಮ ಪರಿಸರ ವಲಯದಿಂದ 6 ಕಿ.ಮೀ. ವ್ಯಾಪ್ತಿಯವರೆಗಿನ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲ್ಪಟ್ಟಲ್ಲಿ, ಇಡೀ ಕೊಡಗು ಜಿಲ್ಲೆಯೆ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಗೊಂಡು ಬಿಡುವ ಅಪಾಯವಿದೆ ಎಂದರು. *ಸರ್ವೆಗೆ ಆಗ್ರಹ* ಕುಂದಚೇರಿ ಪಂಚಾಯ್ತಿ ಮಾಜಿ ಅಧ್ಯಕ್ಷ ಪೊಡನೋಳನ ಬಿ.ದಿನೇಶ್ ಮಾತನಾಡಿ, ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮ ವ್ಯಾಪ್ತಿಯಲ್ಲಿನ ಸ್ವಾಭಾವಿಕ ಮತ್ತು ಮೀಸಲು ಅರಣ್ಯ ಹಾಗೂ ಜನವಸತಿಯ ಪ್ರದೇಶಗಳನ್ನು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಕಾರ್ಯದ ಮೂಲಕ ಸ್ಪಷ್ಟವಾಗಿ ಗುರುತಿಸಬೇಕು. ಈ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯದ ಪಟ್ಟಿಯಿಂದ ಹೊರಗಿಡಬೇಕೆಂದು ಆಗ್ರಹಿಸಿದರು. ಚೆಟ್ಟಿಮಾನಿಯ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕೆದಂಬಾಡಿ ಎಸ್.ಕೀರ್ತಿ ಕುಮಾರ್ ಮಾತನಾಡಿ, ನಮ್ಮ ಗ್ರಾಮಗಳು ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಗೊಂಡಿರುವುದನ್ನು ವಿರೋಧಿಸಿ, ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ಗ್ರಾಮಸ್ಥರು, ಕೃಷಿಕರು, ಕಾರ್ಮಿಕರು, ಯುವ ಸಮೂಹ ಒಗ್ಗೂಡಿ ಹೋರಾಟವನ್ನು ನಡೆಸುತ್ತಿದ್ದೇವೆ. ಇದು ಇಡೀ ಕೊಡಗಿನ ಜನರ ಬದುಕಿನ ಪ್ರಶ್ನೆಯಾಗಿದ್ದು, ಇಂತಹ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಬಾರದೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕುಂದಚೇರಿ ಚೆಟ್ಟಿಮಾನಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಪ್ರಸನ್ನ ಕುಮಾರ್ ಕೆ., ಸಮಿತಿಯ ಪ್ರಮುಖರಾದ ಕೋಡಿ ಹಂಸ ಹಾಗೂ ಕೀರ್ತಿ ಉತ್ತಪ್ಪ ಉಪಸ್ಥಿತರಿದ್ದರು.









