
ಚೆಟ್ಟಳ್ಳಿ ಆ.13 NEWS DESK : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ 113 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮಾಜಿ ಸೈನಿಕರು, ಮಹಿಳೆಯರು ಹಾಗೂ ಶಿಕ್ಷಕಿಯರು ಸ್ವಚ್ಛತಾ ಶ್ರಮದಾನ ನಡೆಸಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ 113 ವರ್ಷಗಳ ಇತಿಹಾಸ ಹೊಂದಿರುವ ಸೂರ್ಲಬ್ಬಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸುತ್ತಿರುವುದು ಗಮನಾರ್ಹವಾಗಿದೆ. ಮಳೆಯನ್ನು ಲೆಕ್ಕಿಸದೆ 86 ವರ್ಷದ ಹಿರಿಯರಿಂದ ಹಿಡಿದು ಕಿರಿಯರವರೆಗೆ ಹಲವರು ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಂಡರು. ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರಮದಾನದಲ್ಲಿ ಮುದ್ದಂಡ ತಿಮ್ಮಯ್ಯ, ನಾಣ್ಯಪ್ಪ, ಪಟ್ಟು ಸೋಮಯ್ಯ, ಓಡಿಯಂಡ ಶಿವಯ್ಯ, ಗೌಡಂಡ ಕಾರ್ಯಪ್ಪ, ತಂಬುಕುತ್ತೀರ ರೇಖಾ ಸೋಮಯ್ಯ, ನಾಪಂಡ ಸೈಲಾ ಶಿವಕುಮಾರ್, ಕುಂಬಾರಗಡಿಗೆ ಗ್ರಾಮದ ತೆಕ್ಕೆರ ತಮ್ಮಯ್ಯ, ಮಂಕ್ಯ ಗ್ರಾಮದ ಮೇದೂರ ಕಂಠೀ ನಾಣ್ಯಪ್ಪ, ಮುಟ್ಲು ಗ್ರಾಮದ ಪುಡಿಯತಂಡ ಬೆಳ್ಳಿಯಪ್ಪ, ರವಿ ಕೆ., ಉದಿಯಂಡ ಶಾರದ, ಬೋಟ್ಟುಳಂಡ ಭಾರತಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಾಜಿ ಸೈನಿಕರಾದ ತಂಬುಕುತ್ತೀರ ಗಪ್ಪು ಸೋಮಯ್ಯ, ರಘು ರಮೇಶ್ ಹಾಗೂ ನಾಪಂಡ ಲೋಹಿತ ಶಿವಕುಮಾರ್, ಶಾಲೆಯ ಅತಿಥಿ ಶಿಕ್ಷಕಿಯರಾದ ವಿಜಯಲಕ್ಷ್ಮಿ ಸೋಮಯ್ಯ ಮತ್ತು ರಶ್ಮಿ ರಮೇಶ್, ಬಿಸಿಯೂಟ ತಯಾರಕಿ ಕನಿಕಂಡ ನೀಲಮ್ಮ ಉಪಸ್ಥಿತರಿದ್ದರು. ಶ್ರಮದಾನದಲ್ಲಿ ಭಾಗವಹಿಸಿದವರಿಗೆ ತಿಂಡಿ ಹಾಗೂ ಕಾಫಿಯ ವ್ಯವಸ್ಥೆ ಮಾಡಿಕೊಟ್ಟ ಮಾಜಿ ಸೈನಿಕ ಓಡಿಯಂಡ ಕಟ್ಟಿ ತಿಮ್ಮಯ್ಯ ಅವರಿಗೆ ಶ್ರಮದಾನಿಗಳು ಕೃತಜ್ಞತೆ ಸಲ್ಲಿಸಿದರು. ಶಾಲೆಯ ಉಳಿವಿಗಾಗಿ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ಮಾಜಿ ಸೈನಿಕರು ಒಗ್ಗೂಡಿ ನಡೆಸುತ್ತಿರುವ ಈ ಶ್ರಮದಾನವು ಗ್ರಾಮೀಣ ಸರ್ಕಾರಿ ಶಾಲೆಗಳ ಮೇಲಿನ ಜನರ ಬದ್ಧತೆಗೆ ಸಾಕ್ಷಿಯಾಗಿದೆ.
‘ವರದಿ : ಕರುಣ್ ಕಾಳಯ್ಯ









