ಸೋಮವಾರಪೇಟೆ, NEWS DESK ಸೆ.15: ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನಕೆರೆ ಕ್ಷೇತ್ರದಲ್ಲಿ ಸ್ವರ್ಣಗೌರಿ ಉತ್ಸವದ ಅಂಗವಾಗಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸೋಮವಾರ ನೆರವೇರಿತು.
ಬೆಳಿಗ್ಗೆ 10 ಗಂಟೆಗೆ ಸಂಪ್ರದಾಯದಂತೆ ಶ್ರೀ ಸಿದ್ದೇಶ್ವರ, ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿ, ನಂತರ ಕೆರೆಯ ನೀರಿನಲ್ಲಿ ವಿಸರ್ಜಿಸಿದರು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಗೌರಿ ಹಬ್ಬದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆಗೆ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಭಕ್ತರು ಹೊನ್ನಮ್ಮ ತಾಯಿಯ ಆಶೀರ್ವಾದ ಪಡೆದರು. ವಿಶೇಷವಾಗಿ ನವದಂಪತಿಗಳು ಕೆರೆಗೆ ಬಾಗಿನ ಅರ್ಪಿಸಿ, ತಮ್ಮ ಇಷ್ಟಾರ್ಥಗಳು ನೆರವೇರಿಸುವಂತೆ ಪ್ರಾರ್ಥಿಸಿದರು.
ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಡಾ. ಮಂತರ್ಗೌಡ ಅವರು ಹೊನ್ನಮ್ಮ ತಾಯಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಹೊನ್ನಮ್ಮ ತಾಯಿ ದೇವಾಲಯದ ಅಭಿವೃದ್ಧಿಗಾಗಿ ₹10 ಲಕ್ಷ ವೆಚ್ಚದಲ್ಲಿ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ. ಚಂದ್ರಶೇಖರ್, ಉಪಾಧ್ಯಕ್ಷ ಡಿ.ಬಿ. ವೀರೇಶ್, ಕಾರ್ಯದರ್ಶಿ ಪ್ರದೀಪ್, ಸದಸ್ಯರಾದ ಡಿ.ಬಿ. ಲೋಕೇಶ್, ಎಂ.ಬಿ. ವಸಂತ್, ಕೆ.ಟಿ. ಭರತ್, ಡಿ.ಟಿ. ಮಂಜುನಾಥ್, ಡಿ.ಎಚ್. ಭರತ್ ಹಾಗೂ ಎಂ.ಎಲ್. ಆಕಾಶ್ ಇದ್ದರು.








