ಸೋಮವಾರಪೇಟೆ ಮೇ 17 : ಸೋಮವಾರಪೇಟೆ ತಾಲ್ಲೂಕು ಕಚೇರಿ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕಚೇರಿಯಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿ, ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ನಂತರ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಗ್ರಾಮೀಣ ಭಾಗದಿಂದ ಬಂದ ರೈತರು, ವಯಸ್ಕರು, ಮಹಿಳೆಯರು, ಕೂಲಿಕಾರ್ಮಿಕರ ಕೆಲಸಗಳನ್ನು ವಿಳಂಬ ಮಾಡದೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಯುವ ನೌಕರರು ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದರೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಬಹುದು ಎಂದರು.
ಸರ್ಕಾರಿ ಆಸ್ಪತ್ರೆಯ ಪ್ರತಿವಿಭಾಗವನ್ನು ಪರಿಶೀಲಿಸಿದರು. ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ, ಯೋಗಕ್ಷೇಮ ವಿಚಾರಿಸಿದರು. ವೈದ್ಯರೊಂದಿಗೆ ಸಭೆ ಚರ್ಚಿಸಿದ ಶಾಸಕರು, ಆಸ್ಪತ್ರೆಗೆ ಬೇಕಾದ ಸವಲತ್ತುಗಳ ಪಟ್ಟಿಯನ್ನು ನೀಡಬೇಕೆಂದು ಆಡಳಿತ ವೈದ್ಯಾಧಿಕಾರಿಗೆ ತಿಳಿಸಿದರು. ನೂತನ ಸರ್ಕಾರ ರಚನೆಯಾದ ನಂತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಳು ಇಲ್ಲಿಯೇ ಸಿಗುವಂತಾಗಬೇಕು. ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಭರ್ತಿಗೆ ಅಧ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ತಾಲ್ಲೂಕು ತಹಸೀಲ್ದಾರ್ ಎಸ್.ಎನ್.ನರಗುಂದ, ಆಡಳಿತ ವೈದ್ಯಾಧಿಕಾರಿ ಸತೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ಪ್ರಮುಖರಾದ ಶೀಲಾ ಡಿಸೋಜ, ಕೆ.ಎ.ಯಾಕುಬ್, ಸುಜಿತ್, ಸಿ.ಈ.ಚೇತನ್, ಎಸ್.ಎಂ.ಡಿಸಿಲ್ವಾ ಮತ್ತಿತರು ಇದ್ದರು.










