ಮಡಿಕೇರಿ ನ.26 : ಕೊಡವ ನ್ಯಾಷನಲ್ ಕೌನ್ಸಿಲ್ ನ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದು, ಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಪ್ರಯತ್ನದ ಫಲವಾಗಿ ಶೀಘ್ರ ಕೊಡವ ಲ್ಯಾಂಡ್ ಪರ ತೀರ್ಪು ಹೊರ ಬೀಳಲಿದೆ ಎಂದು ವಿರಾಟ್ ಹಿಂದೂಸ್ಥಾನ್ ಸಂಘಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನಡೆದ 33ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಭಾರತೀಯ ಸಂವಿಧಾನ ದಿನದ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ಲ್ಯಾಂಡ್ ಸ್ವಾಯತ್ತತೆ ಕುರಿತು ವಿಜಯೋತ್ಸವ ಆಚರಿಸಲು ಕೊಡಗಿಗೆ ಬರುವುದಾಗಿ ಹೇಳಿದ್ದಾರೆ. ಕೆಲವೇ ದಿನಗಳಲ್ಲ್ಲಿ ಈ ಕುರಿತು ಅಂತಿಮ ತೀರ್ಪು ಬರಲಿದ್ದು, ಸಂವಿಧಾನ ಬದ್ಧವಾಗಿಯೇ ಕೊಡವ ಲ್ಯಾಂಡ್ ಬೇಡಿಕೆ ಈಡೇರಲಿದೆ ಎಂದರು.
ಹೈಕೋರ್ಟ್ ನಲ್ಲಿ ಕೊಡವ ಲ್ಯಾಂಡ್ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಕೇಂದ್ರ ಸರಕಾರದ ವಿಳಂಬ ಧೋರಣೆಗೆ ಕೋರ್ಟ್ ದಂಡವನ್ನೂ ವಿಧಿಸಿದೆ. ಎಂದು ಮಾಹಿತಿ ನೀಡಿದರು. ನ.29ರಂದು ಮತ್ತೆ ಹೈಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ. ಕಾನೂನು ಹೋರಾಟ ನಡೆಸುತ್ತಿರುವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಂವಿಧಾನ ಮತ್ತು ನ್ಯಾಯಾಲಯದ ಮೇಲೆ ವಿಶ್ವಾಸವಿರಿಸಿದ್ದು, ಸಿಎನ್ಸಿ ಬೇಡಿಕೆ ಈಡೇರಲಿದೆ ಎಂದು ಜಗದೀಶ್ ಶೆಟ್ಟಿ ಹೇಳಿದರು.
ಕೊಡವರಿಗೆ ಸಾಂವಿಧಾನಿಕ ಭದ್ರತೆ ಕಲ್ಪಿಸಬೇಕೆಂದು ಸಿಎನ್ಸಿ ಸಂಘಟನೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಐದು ಹಂತಗಳ ಪಾದಯಾತ್ರೆಯ ಮೂಲಕ ಕೊಡವ ಲ್ಯಾಂಡ್ ಕುರಿತು ಜನಜಾಗೃತಿ ಮೂಡಿಸಿರುವುದು ಶ್ಲಾಘನೀಯವೆಂದರು.
::: ಕೊಡವ ಲ್ಯಾಂಡ್ ಸಿಗಲಿದೆ :::
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಡಾರ್ಜಿಲಿಂಗ್ ಗೂರ್ಖಾ ಲ್ಯಾಂಡ್ ಮಾದರಿಯಲ್ಲಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನು ಪಡೆದೇ ತೀರುವುದಾಗಿ ಪ್ರತಿಜ್ಞೆ ಮಾಡಿದರು.
ಕಾನೂನು ಹೋರಾಟದ ಮೂಲಕ ಖ್ಯಾತ ಅರ್ಥ ಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ನಮಗೆ ದೊಡ್ಡ ಶಕ್ತಿ ತುಂಬಿದ್ದಾರೆ. ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ಅಪಾರ ಅಭಿಮಾನ ಹೊಂದಿರುವ ಸಿಎನ್ಸಿ ಹೋರಾಟದಲ್ಲಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡವ ಬುಡಕಟ್ಟು ಜನಾಂಗದ ವಿಸ್ತಾರ ಭೂಮಿಯಾದ ಮರೆನಾಡ್, ಐವತ್ ನಾಡ್, ಪಾಕೇರಿ ನಾಡ್ ನಿಂದ ಸೂರ್ಲಬಿನಾಡ್ ವರೆಗೆ, ಬಡಿಗೇರಿನಾಡ್, ಮುತ್ತನಾಡ್, ತಾವುನಾಡ್ ನಿಂದ ಅರ್ಕೇರಿ ನಾಡ್ ವರೆಗೆ, ಬೇಂಗ್ ನಾಡ್, ಕುಯ್ಯಂಗೇರಿ ನಾಡ್ ನಿಂದ ಪತ್ಕಟ್ ನಾಡ್ ವರೆಗೆ, ಗಡಿನಾಡ್ ನಿಂದ ಕುರ್ಚಿನಾಡ್ ವರೆಗೆ, ಪಾಡಿನಾಡ್ ನಿಂದ ತೊಡನಾಡ್ ವರೆಗೆ, ಪೋರಮಲೆ ನಾಡ್, ಮಡಿಕೇರಿ ನಾಡ್ ನಿಂದ ಕುತ್ನಾಡ್, ಬೇರಳಿನಾಡ್, ಬೊಟ್ಟಿಯತ್ ನಾಡ್ ವರೆಗೆ, ಪಾಲೇರಿ ನಾಡ್ ಮೂಡುಗೇರಿ ನಾಡ್ ನಿಂದ ಅಂಜಿಗೇರಿ ನಾಡ್, ಕಿರ್ನಾಲ್ ನಾಡ್, ಕಂಗಲತ್ತನಾಡ್ ವರೆಗೆ, ಕಡಿಯತ್ ನಾಡ್, ಬೆಪ್ಪನಾಡ್, ಕಾನತ್ ಮೂನಾಡ್ ನಿಂದ ನೂರಂಬಡ ನಾಡ್, ಬಲ್ಲತ್ ನಾಡ್, ನೆಲಜಿ ನಾಡ್ ವರೆಗೆ, ಪೆರವನಾಡ್, ಎಡೆನಾಲ್ನಾಡ್, ಬೋಟೋಳಿನಾಡ್ ನಿಂದ ನೂರೊಕ್ನಾಡ್ ಪೊರೆನಾಲ್ನಾಡ್, ನೆಲ್ಲಿಯಪುದಿಕೇರಿ ನಾಡ್, ಪಶ್ಚಿಮ ಘಟ್ಟಗಳ ಪರ್ವತ ಭೂಪ್ರದೇಶದಾದ್ಯಂತ ತಾಲೇರಿ ನಾಡ್ ನಿಂದ ಉಮ್ಮತ್ ನಾಡ್, ಬೈರನಾಡ್ ವರೆಗೆ ಕೊಡವರ ಅಖಂಡ ಆವಾಸಸ್ಥಾನದ ಸರಪಳಿಯಾಗಿದೆ.
ಈ ಭೂಮಿ ಹಾಗೂ ಬುಡಕಟ್ಟು ಜನಾಂಗವಾಗಿರುವ ಕೊಡವರ ಭದ್ರತೆಗಾಗಿ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡುವುದು ಅನಿವಾರ್ಯವೆಂದು ಪ್ರತಿಪಾದಿಸಿದರು.
ಕಾವೇರಿ ನದಿಯ ಎರಡೂ ಬದಿಯಲ್ಲಿ ಒಂದು ಅಖಂಡ ಆವಾಸಸ್ಥಾನದ ಸರಪಳಿಯಲ್ಲಿರುವ ಕೊಡವ ಕುಲಕ್ಕೆ ದೈವಿಕ ವಸಂತ ಕಾವೇರಿಯು ಹೇರಳವಾದ ಆಶೀರ್ವಾದವನ್ನು ನೀಡಿದಳು. ಪೂಜ್ಯ ಗುರು- ಕಾರೊಣ, ಪೂರ್ವಜರ ಮಾರ್ಗದರ್ಶನದಲ್ಲಿ ಕೊಡವ ಧರ್ಮವು ಸೂರ್ಯ-ಚಂದ್ರ, ಮಾತೃಭೂಮಿಯ ಸಾಕ್ಷಿಯಡಿಯಲ್ಲಿ ಅರಳಿತು. ಅತ್ಯಂತ ಪೂಜ್ಯ ಗರ್ಭಗುಡಿಯಂತಿರುವ ಮಂದ್ ಗಳು ಮತ್ತು ನಮ್ಮ ಪೂಜ್ಯ ಆರಾಧನೆಯ ಸಂಸ್ಕಾರ ಗನ್/ಆಯುಧಗಳೊಂದಿಗೆ ಕೊಡವ ಜನಾಂಗ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ ಎಂದರು.
ಕೊಡವರು ಕೊಡಗಿನ ಮೂಲ ನಿವಾಸಿಗಳಾಗಿದ್ದು, ಈ ಸಮುದಾಯವನ್ನು ನಾಶ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಸಿಎನ್ಸಿ ತನ್ನ ಹೋರಾಟದ ಮೂಲಕ ವಿಫಲಗೊಳಿಸುತ್ತಲೇ ಬಂದಿದೆ. ಕೊಡವರಲ್ಲಿ ಜಾಗೃತಿ ಮೂಡಿಸಲು ನಿರಂತರ ಪಾದಯಾತ್ರೆ ನಡೆಸಿ ಯಶಸ್ಸು ಸಾಧಿಸಲಾಗಿದೆ. ಕೊಡವರಿಗೆ ಕಾವೇರಿ ಮಾತೆ ಭೂಮಿ ನೀಡಿದ್ದೇ ಹೊರತು ರಾಜನಲ್ಲ ಅಥವಾ ಮತ್ಯಾರೋ ಅಲ್ಲ. ನಮ್ಮ ಪೂರ್ವಜರ ಕಾಲದಿಂದಲೇ ಕೊಡವ ಭೂಮಿ ನಮ್ಮದಾಗಿದೆ. ಈ ಭೂಮಿಯನ್ನು ಕಳೆದುಕೊಂಡರೆ ಕೊಡವರಿಗೆ ಭವಿಷ್ಯವಿಲ್ಲ ಎಂದು ನಾಚಪ್ಪ ಎಚ್ಚರಿಕೆ ನೀಡಿದರು.
ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯಿಂದ ಮಾತ್ರ ಕೊಡವ ಬುಡಕಟ್ಟು ಸಮುದಾಯ, ಕೊಡವರ ಸಂಸ್ಕೃತಿ, ಪದ್ಧತಿ, ಪರಂಪರೆ, ಆಚಾರ ವಿಚಾರಗಳು ಉಳಿಯಲು ಸಾಧ್ಯ ಎನ್ನುವುದನ್ನು ಕೊಡವರು ಅರಿತುಕೊಳ್ಳಬೇಕಾಗಿದೆ. ಕೊಡವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎನ್ನುವ ಅಂಶವನ್ನು ಸಂಶೋಧನೆಗಳೇ ಸಾಬೀತು ಪಡಿಸಿವೆ. ಆದ್ದರಿಂದ ಕೊಡವರಿಗೆ ಎಸ್ಟಿ ಟ್ಯಾಗ್ ನೀಡಬೇಕೆಂಬ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದರು.
ಕೋವಿ ವಿನಾಯಿತಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ಕೂಡ ನಡೆಯುತ್ತಿದ್ದು, ಕೊಡವರ ಸಾಂವಿಧಾನಿಕ ಹಕ್ಕುಗಳಿಗೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಿಲ್ಲ. ಕೂರ್ಗ್ ಪ್ರದೇಶ ಕರ್ನಾಟಕದೊಂದಿಗೆ ವಿಲೀವಾದ ನಂತರ ಕೊಡವರಿಗೆ ಅನ್ಯಾಯವಾಗುತ್ತಲೇ ಬಂದಿದೆ. ಈ ಬಗ್ಗೆ ಕೊಡವರು ಎಚ್ಚೆತ್ತುಕೊಂಡು ಸಿಎನ್ಸಿಯ ಹೋರಾಟದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
::: ನಿಮಗಾಗಿ ನಾನು ಬಂದಿಲ್ಲ :::
ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಬೇಕಾಗಿದ್ದ ಕೊಡವ ಲ್ಯಾಂಡ್ ಪರ ಕಾನೂನು ಹೋರಾಟಗಾರ, ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ವಿಡಿಯೋ ಮೂಲಕ ಸಂದೇಶ ರವಾನಿಸಿ ನಿಮ್ಮ ಒಳಿತಿಗಾಗಿ ನಾನು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. “ಕೊಡವ ಲ್ಯಾಂಡ್” ಪರ ಹೋರಾಟಕ್ಕೆ ಫಲ ದೊರೆಯುವ ಹಂತದಲ್ಲ್ಲಿ ನಾನು ಪಾಲ್ಗೊಳ್ಳುವುದು ಸರಿಯಲ್ಲ. “ಕೊಡವ ಲ್ಯಾಂಡ್” ಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ ನಾನು ಸಭೆಯಲ್ಲಿ ಪಾಲ್ಗೊಂಡು ಮಾತನಾಡುವುದು ಸೂಕ್ತವಲ್ಲ, ಕಾನೂನಾತ್ಮಕ ತೊಡಕುಗಳಿಗೆ ಎಡೆಯಾಗಬಹುದು, ನಾನು ದೇಶದ ಕಾನೂನನ್ನು ಅಪಾರವಾಗಿ ಗೌರವಿಸುತ್ತೇನೆ ಎಂದರು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 5 ಹಂತಗಳ ಪಾದಯಾತ್ರೆಯ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಕಾನೂನಿನ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರಲಿದೆ ಎಂದು ಸ್ವಾಮಿ ಭರವಸೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ವಿರಾಟ್ ಹಿಂದೂಸ್ಥಾನ್ ಸಂಘಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಸಿಎನ್ಸಿ ಸಂಚಾಲಕ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಕ್ಕೋಡ್ಲು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ತಂಡದಿಂದ ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಿಎನ್ಸಿ ಯ 9 ಪ್ರಮುಖ ಬೇಡಿಕೆಗಳ ಪರವಾಗಿ ನರೆದಿದ್ದವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಮುಖರಾದ ಕಲಿಯಂಡ ಪ್ರಕಾಶ್, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾಫಿ ಮಂಡಳಿ ಮಾಜಿ ಅಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ, ಕುಕ್ಕೇರ ಜಯ ಚಿಣ್ಣಪ್ಪ, ನಂದಿನೆರವಂಡ ನಿಶಾ, ಚಂಬಂಡ ಜನತ್, ಪುಲ್ಲೇರ ಕಾಳಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಕೊಡವ, ಕೊಡವತಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು.
Breaking News
- *ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್*
- *ಮಡಿಕೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ : ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ಬಿ.ಸಿ.ಶಂಕರಯ್ಯ*
- *ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು : ಅನೂಪ್ ಮಾದಪ್ಪ ಕರೆ*
- *ದೀಪ್ತಿ ದೇಚಮ್ಮ ಗೆ ಪಿ.ಹೆಚ್.ಡಿ ಪದವಿ ಪ್ರದಾನ*
- *ಜನಪರ ಮತ್ತು ರೈತಪರ ಬಜೆಟ್ : ತೇಲಪಂಡ ಶಿವಕುಮಾರ್ ನಾಣಯ್ಯ*
- *ರಾಜ್ಯದ ಹಿತಕ್ಕೆ ನಿರಾಶದಾಯಕ ಬಜೆಟ್ : ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ*
- *ಮುಖ್ಯಮಂತ್ರಿಗಳ ಕೊಡಗು ಭೇಟಿ ನಿರಾಶಾದಾಯಕ*
- *ಕೊಡಗು : ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ*
- *ವಿವೇಕಾನಂದ ಪಿಯು ಕಾಲೇಜಿನಲ್ಲಿ ವೆಲ್ ಫೇರ್ ಡೇ : ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ : ಡಾ.ದೇವರಾಜು ಸಲಹೆ*
- *ವಿರಾಜಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಯುವ ಸಮಾವೇಶ : ವಿವೇಕಾನಂದ-ಸುಭಾಷ್ ಚಂದ್ರ ಬೋಸ್ ಯುವ ಸಮುದಾಯದ ಪ್ರೇರಣಾ ಶಕ್ತಿಗಳು : ಶ್ರೀಶಾ*