ಸುಂಟಿಕೊಪ್ಪ ಆ.19 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್ಬೈಲ್ ಕಾರ್ಯಕ್ಷೇತ್ರ ಶ್ರೀ ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಮಡಿಕೇರಿ ತಾಲ್ಲೂಕು ಯೋಜನಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಮಹಿಳೆಯರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಿದರಲ್ಲದೆ ಮಹಿಳೆಯರಿಗೆ ಜ್ಞಾನವಿಕಾಸ ಕೇಂದ್ರದ ವತಿಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಹಲವಷ್ಟು ತರಬೇತಿಗಳನ್ನು ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳುವುದರಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಅಲ್ಲದೇ ಪ್ರತಿ ತಿಂಗಳು ಇತರೆ ವಿಚಾರಗಳ ಕುರಿತು ತರಬೇತಿಯನ್ನು ನೀಡುವುದ ಮೂಲಕ ಪ್ರತಿ ಸದಸ್ಯರಿಗೂ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪುರುಷೋತ್ತಮ್ ಹೇಳಿದರು. ದಿನದ ಅಂಗವಾಗಿ ತಲಕಾವೇರಿ ಜ್ಞಾನವಿಕಾಸ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಸಮನ್ವಯ ಅಧಿಕಾರಿ ಮಾಲಿನಿ, ಒಕ್ಕೂಟದ ಅಧ್ಯಕ್ಷರುಗಳಾದ ಖತ್ತೀಜ ಹಾಗೂ ಭವ್ಯ ಬಹುಮಾನಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಸಂಘದ ಸದಸ್ಯೆ ದೇವಕ್ಕಿ,ಭವ್ಯ ಹಾಜರಿದ್ದರು. ಸೇವಾ ಪ್ರತಿನಿಧಿ ಯಶೋಧ ನಿರೂಪಿಸಿ, ಭವಾನಿ ವಂದಿಸಿದರು.









