


ಕುಶಾಲನಗರ ಜೂ.21 NEWS DESK : ಬೈಚನಹಳ್ಳಿ ಗ್ರಾಮದ ಗ್ರಾಮದೇವತೆ ಕನ್ನಂಬಾಡಮ್ಮ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕ ಡಾ.ಮಂತರಗೌಡ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೇವಾಲಯಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಸುಂದರ ತಾಣಗಳು. ದೇವಾಲಯ ನಿರ್ಮಾಣಕ್ಕೆ ಪ್ರತಿಯೊಬ್ಬರು ಜಾತಿ ಧರ್ಮ ಮೀರಿದ ಸಹಾಯ ಸಹಕಾರ ನೀಡಬೇಕು.
ಸರ್ಕಾರದಿಂದ ಅಗತ್ಯವಾಗಿ ಸಿಗುವ ಅನುದಾನದ ಜೊತೆಗೆ ವಯುಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಶಾಸಕರು ಹೇಳಿದರು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದಶಕಗಳ ಹಿಂದೆ ಬೈಚನಹಳ್ಳಿ ಯಲ್ಲಷ್ಟೇ ಜನವಸತಿ ಇತ್ತು. ಕ್ರಮೇಣ ಊರು ಆಧುನಿಕತೆಯತ್ತ ತೆರೆದುಕೊಂಡಿತು. ಈ ಗ್ರಾಮದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಾಲಯಕ್ಕೆ ಹೊಸ ರೂಪ ಕೊಡಲು ಈ ಹಿಂದೆ ಮಾಡಿದ ಯೋಜನೆಗಳೆಲ್ಲಾ ವ್ಯರ್ಥವಾದ ಬಗೆಯನ್ನು ಸ್ಮರಿಸಿದರಲ್ಲದೇ ಇದೀಗ ಆಗುತ್ತಿರುವ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ಸಾಗಲಿ ಎಂದರು.
ಕನ್ನಂಬಾಡಮ್ಮ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್.ಶಿವಕುಮಾರ್, ಉಪಾಧ್ಯಕ್ಷ ಡಿ. ಶ್ರೀಕಾಂತ್, ಕಾರ್ಯದರ್ಶಿಯೂ ಆದ ಪುರಸಭೆ ಸದಸ್ಯ ಬಿ.ಎಲ್. ಜಗದೀಶ್, ಕೋಶಾಧಿಕಾರಿ ಕೆ.ಪಿ.ಉಮೇಶ್, ನಿರ್ದೇಶಕರಾದ ಶ್ರೀಮಂತ, ಬಿ.ಆರ್.ಮಣಿಕಂಠ, ಗಣೇಶ, ಆರ್.ಮಂಜುನಾಥ್, ಎಸ್.ಮಂಜು, ಪ್ರಮುಖರಾದ ಕೆ.ಎನ್.ಅಶೋಕ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಕೂಡ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಬಿ.ಬಿ.ಭಾರತೀಶ್, ಎನ್.ಎನ್.ಶಂಭುಲಿಂಗಪ್ಪ ಮೊದಲಾದವರಿದ್ದರು. ಇದಕ್ಕೂ ಮುನ್ನಾ ದೇವಾಲಯದ ಗರ್ಭಗುಡಿ ನಿರ್ಮಾಣದ ಸ್ಥಳದಲ್ಲಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಗಿರೀಶ್ ಭಟ್, ಉಮೇಶ್ ಭಟ್, ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಭೂವರಹ ಶಾಂತಿ ಹೋಮ ನಡೆಯಿತು.









