ಮಡಿಕೇರಿ, NEWS DESK ಸೆ.17: ಕೊಡಗಿನಲ್ಲಿ ಕೊಡವ ಸ್ವಾಯತ್ತ ಮಂಡಳಿ ಹಾಗೂ ‘ಕೊಡವ ಲ್ಯಾಂಡ್’ ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತ ಪ್ರದೇಶ ರಚನೆಗೆ ಸಂಬಂಧಿಸಿದ ಬೇಡಿಕೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ವಿರೋಧಿಸಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಸಿಎನ್ಸಿ ವತಿಯಿಂದ ಕೊಡವ ಸ್ವಾಯತ್ತ ಮಂಡಳಿ ಹಾಗೂ ‘ಕೊಡವ ಲ್ಯಾಂಡ್’ ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತ ಪ್ರದೇಶ ರಚಿಸಿ, ಆಂತರಿಕ ಸ್ವಯಂ ನಿರ್ಣಯದ ಹಕ್ಕು ಮತ್ತು ಅಧಿಕಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿರುವುದನ್ನು ಉಲ್ಲೇಖಿಸಿದರು. ಈ ಬೇಡಿಕೆಗಳಿಗೆ ಕೊಡಗಿನಲ್ಲಿ ವಾಸವಿರುವ ವಿವಿಧ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕವೂ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸಂಬಂಧ ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಕೊಡಗಿನಲ್ಲಿ ನೂರಾರು ವರ್ಷಗಳಿಂದ ವಿವಿಧ ಸಮುದಾಯಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿವೆ. ಒಂದು ಜನಾಂಗದ ಹಕ್ಕುಗಳನ್ನು ರಕ್ಷಿಸುವ ಹೆಸರಿನಲ್ಲಿ ಇತರೆ ಸಮುದಾಯಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು. ಕೊಡಗು ಜಿಲ್ಲೆಯಲ್ಲಿ ವಾಸಿಸುವ ಎಲ್ಲಾ ಜನಾಂಗದವರಿಗೂ ಸಮಾನ ಹಕ್ಕುಗಳಿವೆ. ಸಿಎನ್ಸಿಯ ಬೇಡಿಕೆ ಮುಂದಿನ ದಿನಗಳಲ್ಲಿ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವೀರಶೈವ ಮಹಾಸಭಾದ ಹೋರಾಟ ಯಾವುದೇ ಒಂದು ಸಮುದಾಯದ ವಿರುದ್ಧವಲ್ಲ. ಕೊಡವ ಸಮುದಾಯ, ಕೊಡವರ ಸಂಸ್ಕೃತಿ, ಆಚಾರ, ವಿಚಾರ ಹಾಗೂ ಸಾಹಿತ್ಯವನ್ನು ಗೌರವಿಸುತ್ತೇವೆ. ಎಲ್ಲಾ ಸಮುದಾಯಗಳ ಹಕ್ಕು, ಸುರಕ್ಷತೆ ಹಾಗೂ ಸೌಹಾರ್ದಯುತ ಸಹಬಾಳ್ವೆ ಉಳಿಯಬೇಕು ಎಂಬ ಉದ್ದೇಶದಿಂದ ಸಿಎನ್ಸಿ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೆಚ್.ವಿ. ಶಿವಪ್ಪ ಸ್ಪಷ್ಟಪಡಿಸಿದರು.
ಕೊಡವರಿಗೆ ಮಾತ್ರ ಪ್ರತ್ಯೇಕವಾಗಿ ಸ್ವಾಯತ್ತ ಮಂಡಳಿ ರಚನೆಯಾಗುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲೆಯಲ್ಲಿರುವ ಎಲ್ಲಾ ಜಾತಿ, ಜನಾಂಗದವರನ್ನು ಒಳಗೊಂಡ ಸ್ವಾಯತ್ತ ಮಂಡಳಿ ರಚನೆಯಾದರೆ ಯಾವುದೇ ಆಕ್ಷೇಪವಿಲ್ಲ. ಈ ಕ್ರಮದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಸುಮಾರು 263 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಾಲೇರಿ ರಾಜವಂಶಸ್ಥರು ಸರ್ವ ಜನಾಂಗದವರನ್ನು ಸಮಾನವಾಗಿ ಕಂಡಿದ್ದಾರೆ. ಎಲ್ಲಾ ಹಕ್ಕುಗಳನ್ನು ಸಮಾನವಾಗಿ ನೀಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲೂ ಸಮಾನ ಹಕ್ಕುಗಳ ಜಾರಿಯ ಅಗತ್ಯವಿದೆ ಎಂದು ತಿಳಿಸಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭ ಶಿವಯ್ಯ ಮಾತನಾಡಿ, ಬಸವಣ್ಣನವರ ಕಾಲದಿಂದಲೂ ಸಮ ಸಮಾಜಕ್ಕೆ ಆದ್ಯತೆ ನೀಡಲಾಗಿದ್ದು, ಇದು ಮುಂದುವರಿಯಬೇಕು. ಹಾಲೇರಿ ಅರಸರ ಕುರಿತು ಸಿಎನ್ಸಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಖಂಡಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಮಹಾಸಭಾದ ಕುಶಾಲನಗರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶುಭ ಶೇಖರ್ ಹಾಗೂ ವೀರಶೈವ ನೌಕರರ ಸಂಘದ ಮಾಜಿ ಕಾರ್ಯದರ್ಶಿ ವಿರೂಪಾಕ್ಷ ಉಪಸ್ಥಿತರಿದ್ದರು.







