
ಮಡಿಕೇರಿ ಸೆ.17 NEWS DESK : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ಅರ್ಹರಾಗಿರುವ ಎಲ್ಲಾ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರನ್ನು ಗುರುತಿಸಿ, ಶೇ.100ರಷ್ಟು ಅರ್ಹ ಫಲಾನುಭವಿಗಳ ನೋಂದಣಿಯನ್ನು ಖಚಿತಪಡಿಸುವ ಉದ್ದೇಶದಿಂದ ‘ಪೋಷಣೆಯೊಂದಿಗೆ ಮಾತೃ ವಂದನ’ ವಿಶೇಷ ನೋಂದಣಿ ಹಾಗೂ ನಾಗರಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುಮಂಗಲ ಜಿ. ಹಿರೇಮನಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬರೂ ಪ್ರತಿದಿನ ಸರಿಯಾದ ಸಮಯಕ್ಕೆ ಪ್ರೋಟೀನ್ಯುಕ್ತ ಹಾಗೂ ಪೌಷ್ಟಿಕ ಆಹಾರ ಸೇವಿಸುವಂತೆ ಕರೆ ನೀಡಿದರು. ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಅವರು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಅರ್ಹತಾ ಮಾನದಂಡಗಳು, ಯೋಜನೆಯ ಪ್ರಯೋಜನಗಳು, ಕಂತುಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ವಿವರಿಸಿದರು. ಫಲಾನುಭವಿಗಳ ಅನುಭವಗಳು ಮತ್ತು ಯಶೋಗಾಥೆಗಳನ್ನು ಸಾಮಾಜಿಕ ಹಾಗೂ ಸಮುದಾಯ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದ್ದು, ಅರ್ಹರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ‘ಬೇಟಿ ಬಚಾವೋ–ಬೇಟಿ ಪಡಾವೋ’, ಭಾಗ್ಯಲಕ್ಷ್ಮಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಕಾಮನಬಿಲ್ಲಿನ ವಿವಿಧ ಬಣ್ಣಗಳಂತೆ ಆಹಾರದಲ್ಲಿಯೂ ವಿವಿಧ ಬಣ್ಣಗಳ ಪೌಷ್ಟಿಕ ಆಹಾರಗಳನ್ನು ಸೇರಿಸಿಕೊಳ್ಳಬೇಕು. ವೈವಿಧ್ಯಮಯ ಪೋಷಕಾಂಶಗಳನ್ನು ಪಡೆಯಲು ತಾಜಾ ಹಾಗೂ ಬಿಸಿ ಆಹಾರ ಸೇವಿಸುವುದು ಮುಖ್ಯ. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪೌಷ್ಟಿಕಾಂಶ ಪ್ರಮುಖ ಪಾತ್ರ ವಹಿಸುವುದರಿಂದ ಪ್ರತಿದಿನದ ಆಹಾರದಲ್ಲಿ ಪ್ರೋಟೀನ್ಯುಕ್ತ ಆಹಾರವನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು ಎಂದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ‘ಪೋಷಣೆಯೊಂದಿಗೆ ಮಾತೃ ವಂದನ’ ಅಭಿಯಾನದ ಮೂಲಕ ಅರ್ಹ ತಾಯಂದಿರಿಗೆ ಯೋಜನೆಯ ಸೌಲಭ್ಯ ತಲುಪಿಸುವುದರ ಜತೆಗೆ ಪೌಷ್ಟಿಕ ಆಹಾರ, ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಸಮುದಾಯದ ಸಹಭಾಗಿತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಅಂಗನವಾಡಿ ನಿರ್ವಹಣಾ ಸಮಿತಿ ಹಾಗೂ ಬಾಲವಿಕಾಸ ಸಮಿತಿ ಸದಸ್ಯರು, ಸ್ವಸಹಾಯ ಸಂಘಗಳು, ಗ್ರಾಮ ಪಂಚಾಯಿತಿ/ನಗರಸಭೆ ಪ್ರತಿನಿಧಿಗಳು ಮತ್ತು ಪೋಷಕರನ್ನು ಒಳಗೊಂಡಂತೆ ಪೋಷಣ್ ಮಾಸಾಚರಣೆಯ ವಿವಿಧ ಚಟುವಟಿಕೆಗಳನ್ನು ಮುಂದಿನ ತಿಂಗಳ 8ರವರೆಗೆ ಕೈಗೊಳ್ಳಬೇಕು ಎಂದು ತಿಳಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಆಹಾರದ ರುಚಿ ಪರೀಕ್ಷೆಯನ್ನು ಸಮುದಾಯದ ಸಹಭಾಗಿತ್ವದಲ್ಲಿ ನಡೆಸುವಂತೆ ಸಲಹೆ ನೀಡಿದರು. ಅಂಗನವಾಡಿ ಕೇಂದ್ರಗಳ ಚಟುವಟಿಕೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ನಾಯಕತ್ವ ನೀಡುವುದು, ಪೋಷಣ್ ಸೇವೆಗಳ ವಿತರಣೆಯನ್ನು ಪರಿಶೀಲಿಸುವುದು ಹಾಗೂ ಪೋಷಣ್ ಮಾಸಾಚರಣೆಯ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಸಮಿತಿಗಳ ಪ್ರಮುಖ ಉದ್ದೇಶಗಳಾಗಿವೆ ಎಂದು ವಿವರಿಸಿದರು. ಅಂಗನವಾಡಿಯಲ್ಲಿ ವಿತರಿಸಲಾಗುವ ಎಲ್ಲಾ ಆಹಾರ ಪದಾರ್ಥಗಳ ವಿವರ ಹಾಗೂ ದಿನವಾರು ಮೆನು ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಿದರು. ಫಲಾನುಭವಿಗಳ ಹಕ್ಕುಗಳ ಕುರಿತು ಅರಿವು ಮೂಡಿಸುವ ಮೂಲಕ ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಸಮುದಾಯದ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
0–3 ವರ್ಷ ವಯಸ್ಸಿನ ಮಕ್ಕಳಿಗಾಗಿ 34 ಅಭಿವೃದ್ಧಿ ಮೈಲುಗಲ್ಲುಗಳನ್ನು ಒಳಗೊಂಡ ಗೃಹಭೇಟಿ ವೇಳಾಪಟ್ಟಿಯನ್ನು ಅಂಗನವಾಡಿ ಕೇಂದ್ರಗಳಲ್ಲಿ ಪ್ರದರ್ಶಿಸುವಂತೆ ತಿಳಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ವಿಳಂಬ ಕಂಡುಬಂದಲ್ಲಿ ಅದನ್ನು ಬಾಲ್ಯದಲ್ಲಿಯೇ ಗುರುತಿಸಿ, ಅಗತ್ಯ ಆರೋಗ್ಯ ಸೇವೆಗಳಿಗೆ ಸೂಕ್ತ ಸಮಯದಲ್ಲಿ ಶಿಫಾರಸು ಮಾಡಲು ಇದು ಸಹಕಾರಿಯಾಗಲಿದೆ ಎಂದರು. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಕೈತೋಟ ನಿರ್ಮಿಸುವುದು ಹಾಗೂ ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್ಗಳನ್ನು ಸಿದ್ಧಪಡಿಸುವಂತೆ ಸಮಿತಿ ಸದಸ್ಯರಿಗೆ ಸೂಚಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರದ ಮಹತ್ವವನ್ನು ಪ್ರಾಯೋಗಿಕವಾಗಿ ಪರಿಚಯಿಸುವಲ್ಲಿ ಇಂತಹ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಂಯೋಜಕಿ ನವ್ಯ, ಪೋಷಣ್ ಅಭಿಯಾನದ ಜಿಲ್ಲಾಮಟ್ಟದ ಸಂಯೋಜಕಿ ಕಾವ್ಯ, ಆರೋಗ್ಯ ಇಲಾಖೆಯ ವೈದ್ಯೆ ಡಾ. ನಿಶ್ವಿಕ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ದಿವ್ಯ, ಆಶಾ ಕಾರ್ಯಕರ್ತೆ ದೇವಿ, ಅಂಗನವಾಡಿ ವ್ಯಾಪ್ತಿಯ ಫಲಾನುಭವಿಗಳು, ಪೋಷಕರು ಹಾಗೂ ಕಸಬಾ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ಮೀರಾ ನೆರವೇರಿಸಿದರು.








