
ವಿರಾಜಪೇಟೆ ಸೆ.17 NEWS DESK : ಸ್ಥಳೀಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಗೌರಿ ಗಣೇಶೋತ್ಸವವು 11 ದಿನಗಳ ಕಾಲ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಸೆಪ್ಟೆಂಬರ್ 20ರಂದು ಬೆಳಿಗ್ಗೆ 11 ಗಂಟೆಯಿಂದ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ ‘ವಾಯ್ಸ್ ಆಫ್ ವಿರಾಜಪೇಟೆ–2026’ ಗಾಯನ ಸ್ಪರ್ಧೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರನಾಥ ಕಾಮತ್ ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದ ರೂಪುರೇಷೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, 250ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕರು ಹಾಗೂ ಭಕ್ತಾದಿಗಳ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಈಗಾಗಲೇ ಮುತ್ತೈದೆಯರಿಂದ ವಿಶೇಷ ಗೌರಿ ಪೂಜೆ ಹಾಗೂ ಗೌರಮ್ಮನ ಪಲ್ಲಕ್ಕಿ ಉತ್ಸವ ನೆರವೇರಿದೆ ಎಂದು ತಿಳಿಸಿದರು. ಸೆ.18 ಮತ್ತು 19ರಂದು ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸೆ.21ರಂದು ಮೈಸೂರಿನ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಸುಮಾ ರಾಜಕುಮಾರ್ ಮತ್ತು ತಂಡದವರಿಂದ ಭಕ್ತಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.22ರಂದು ಶಿವಮೊಗ್ಗದ ರಂಗತರಂಗ ತಂಡದ ಶ್ರೀ ಅವಿನಾಶ್ ಮತ್ತು ಬಳಗದಿಂದ ‘ಗಾನ ಅಮೃತ’ ಕಾರ್ಯಕ್ರಮ ನಡೆಯಲಿದ್ದು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯ ಹಳೆಯ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು.
ಸೆಪ್ಟೆಂಬರ್ 24ರಂದು ‘ಬ್ರಹ್ಮಗಿರಿ’ ವಾರಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾಜ ಸೇವೆಗಾಗಿ ಕೆಂಜಂಗಡ ರೋಷನ್ ನಾಣಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸೆ.25ರಂದು ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದ್ದು, ರಾತ್ರಿ 8.30ರಿಂದ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ನೃತ್ಯ-ರೂಪಕಗಳು ಹಾಗೂ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ. ಸೆಪ್ಟೆಂಬರ್ 26ರಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದು ರವೀಂದ್ರನಾಥ ಕಾಮತ್ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಭಾರತದಲ್ಲಿಯೇ ವಿರಾಜಪೇಟೆಯಲ್ಲಿ ನಡೆಯುವ ಗೌರಮ್ಮನ ಪಲ್ಲಕ್ಕಿ ಉತ್ಸವವು ವಿಶಿಷ್ಟವಾದದ್ದು. ದೇಶದ ಇತರೆಡೆಗಳಲ್ಲಿ ಅಪರೂಪವಾಗಿರುವ ಇಂತಹ ಸುಂದರ ಸಂಪ್ರದಾಯ ಹಾಗೂ ಪರಂಪರೆ ವಿರಾಜಪೇಟೆಯಲ್ಲಿ ಮುಂದುವರಿದಿದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಗೌರಮ್ಮನ ಪಲ್ಲಕ್ಕಿ ಉತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಪವಿತ್ರ ಹಬ್ಬದ ಸಂದರ್ಭದಲ್ಲಿ ತವರುಮನೆಯ ಹೆಣ್ಣುಮಕ್ಕಳು ತಮ್ಮ ಊರಿಗೆ ಮರಳಿ ಬಂದು ಗೌರಮ್ಮನಿಗೆ ಪೂಜೆ ಸಲ್ಲಿಸುವ ವಿಶೇಷ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಗೌರಿ ಗಣೇಶೋತ್ಸವದ ಅಂಗವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ಜೆ.ಎನ್. ಪ್ರಸಾದ್, ವಿ.ಆರ್. ಪುರುಷೋತ್ತಮ್, ಜೆ.ಪಿ. ಅರುಣ್ ಜೈನ್, ಸದಸ್ಯರಾದ ಜೆ.ವಿ. ಪ್ರಕಾಶ್, ಡಾ. ಎನ್. ವೀರೇಂದ್ರ ಕಾಮತ್, ನರೇಂದ್ರ ಕಾಮತ್, ಚಂದ್ರ ಪ್ರಸಾದ್, ರಾಜೇಂದ್ರ ಕಾಮತ್ ಸೇರಿದಂತೆ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.








