
ವಿರಾಜಪೇಟೆ ಸೆ.17 NEWS DESK : ನಗರದ ನಾಟ್ಯಾಂಜಲಿ ನೃತ್ಯ ಸಂಸ್ಥೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಸಂಪ್ರದಾಯಬದ್ಧವಾಗಿ ಗೆಜ್ಜೆ ಪೂಜಾ ಕಾರ್ಯಕ್ರಮ ನಡೆಯಿತು. ಭರತನಾಟ್ಯ ಗುರುಗಳಾದ ಹೇಮಾವತಿ ಕಾಂತರಾಜ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟರಾಜನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೆಜ್ಜೆ, ಹೂವು, ಹಣ್ಣು, ತೆಂಗಿನಕಾಯಿ ಹಾಗೂ ಮಂಗಳ ದ್ರವ್ಯಗಳೊಂದಿಗೆ ಪುರೋಹಿತರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹಳದಿ ಮತ್ತು ಹಸಿರು ಸಮವಸ್ತ್ರದಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದರು. ಗುರು ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಕ್ಕಳು ಗೆಜ್ಜೆಯನ್ನು ದೇವರಲ್ಲಿ ಸಮರ್ಪಿಸಿ, ತಮ್ಮ ಕಲಾ ಪಯಣ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುಗಳಾದ ಹೇಮಾವತಿ ಅವರು, “ನೃತ್ಯ ಕಲಿಯುವ ಮುನ್ನ ಗೆಜ್ಜೆ ಪೂಜೆ ಮಾಡುವುದು ನಮ್ಮ ಸಂಪ್ರದಾಯ. ಇದು ಕೇವಲ ಒಂದು ಆಚರಣೆಯಲ್ಲ, ಕಲೆಯ ಬಗೆಗಿನ ಗೌರವ ಎಂದು ಹೇಳಿದರು.









