
ಮಡಿಕೇರಿ ಸೆ.2 NEWS DESK : ಗಣೇಶೋತ್ಸವ ಆಚರಣೆಗೆ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕೆನ್ನುವ ಆಡಳಿತ ವ್ಯವಸ್ಥೆಯ ನೀತಿ ಹಿಂದೂ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ವಿವಿಧ ಗಣೇಶೋತ್ಸವ ಸಮಿತಿಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು. ನಗರಸಭೆ ಎದುರು ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯದ ನೆಪವೊಡ್ಡಿ, ಇಲ್ಲಸಲ್ಲದ ನೀತಿಗಳನ್ನು ರೂಪಿಸಿ ಗಣೇಶೋತ್ಸವ ಸಮಿತಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಮಿತಿಯ ಪ್ರಮುಖ್ ಕೆ.ಟಿ.ಉಲ್ಲಾಸ್ ಮಾತನಾಡಿ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಪರಿಸರ ಮಾಲಿನ್ಯ ಹಾಗೂ ಕಾನೂನಿನ ನೆಪವೊಡ್ಡಿ ಅಡ್ಡಿಪಡಿಸುತ್ತಿರುವುದು ಖಂಡನೀಯವೆಂದರು. ಕಾನೂನು ಪಾಲನೆ ಕೇವಲ ಹಿಂದೂಗಳಿಗಷ್ಟೇ ಸೀಮಿತ ಎನ್ನುವ ಧೋರಣೆಯನ್ನು ಆಡಳಿತ ನಡೆಸುವವರು ಹಾಗೂ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣ ಕಠಿಣ ನೀತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಗಣೇಶೋತ್ಸವ ಸಮಿತಿಗಳ ಪರವಾಗಿ ಮಾತನಾಡಿದ ಹಿಂದೂ ಯುವಶಕ್ತಿ ಮಂಡಳಿಯ ಪ್ರಮುಖ ಬಿ.ಕೆ.ಅರುಣ್ ಕುಮಾರ್ ಯಾವುದೇ ಕಾರಣಕ್ಕೂ ಹಿಂದೂಗಳು ಮುಚ್ಚಳಿಕೆ ಬಾಂಡ್ ನೀಡಿ ಹಬ್ಬಗಳನ್ನು ಆಚರಿಸುವ ಪರಿಸ್ಥಿತಿ ಉದ್ಭವಿಸಬಾರದು ಎಂದರು. ನಗರಸಭಾ ಆಯುಕ್ತರು ಮಡಿಕೇರಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆಗೆ ನಿಯಮಗಳನ್ನು ಹೇರುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಮಿತಿಯ ಸುಭಾಸ್ ತಿಮ್ಮಯ್ಯ, ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಜಿಲ್ಲಾ ಸಹ ಸಂಯೋಜಕ ಚೇತನ್ ಶಾಂತಿನಿಕೇತನ, ಪ್ರಮುಖರಾದ ಬೋಜೇಗೌಡ, ಯೋಗೇಶ್, ಜಿಲ್ಲಾಕಾರ್ಯಕಾರಿಣಿ ಸದಸ್ಯರಾದ ಕುಮಾರ್ ಮೇಕೇರಿ, ಸುನಿಲ್ ಮಾದಾಪುರ, ಶಾಂತೆಯಂಡ ತಿಮ್ಮಯ್ಯ, ರಾಜೀವ, ಭವನ್, ಉಮೇಶ್, ಮಡಿಕೇರಿ ತಾಲ್ಲೂಕು ಸಂಯೋಜಕ್ ದುರ್ಗೇಶ್, ಕುಶಾಲನಗರ ತಾಲ್ಲೂಕು ಸಂಯೋಜಕ ದಿನೇಶ್, ಪೊನ್ನಂಪೇಟೆ ತಾಲ್ಲೂಕು ಸಂಯೋಜಕ ಸುಖೇಶ್, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಪುದಿಯೊಕ್ಕಡ ರಮೇಶ್, ಸುರೇಶ್, ಬಜರಂಗದಳದ ನವೀನ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ, ಪ್ರಮುಖರಾದ ರಾಬಿನ್ ದೇವಯ್ಯ, ಧನಂಜಯ್ ಅಗೋಳಿಕಜೆ, ನಗರಸಭಾ ಸದಸ್ಯರುಗಳು, ಮಹಿಳಾ ಮೋರ್ಛಾ ಪದಾಧಿಕಾರಿಗಳು, ವಿವಿಧ ಗಣೇಶೋತ್ಸವ ಸಮಿತಿಗಳ ಮುಖಂಡರು ಪಾಲ್ಗೊಂಡಿದ್ದರು.








