ಮಡಿಕೇರಿ ಜೂ.17 : ಇದು ಇಂದಿನ ಆಧುನಿಕ ಕಾಲದ ಚುನಾವಣೆಯ ಚಿತ್ರಣ ಯಾವ ಪ್ರಜಾಪ್ರಭುತ್ವದಡಿಯಲ್ಲಿ ಚುನಾವಣೆಗಳು ನಿಸ್ಪಕ್ಷವಾಗಿ ನಿರ್ಭಯವಾಗಿ ನಡೆಯಬೇಕಿತ್ತು. ಆದರೆ ಇಂದು ಅದರ ಚಿತ್ರಣವೇ ಬೇರೆ ಆಗಿದೆ. ನಮ್ಮ ಮತಗಳನ್ನು ನಾವು ಮಾರಾಟಕ್ಕೆ ಇಟ್ಟಿದ್ದೇವೆ. ಅದರ ಮೌಲ್ಯವನ್ನು ಅಭ್ಯರ್ಥಿ ರಾಜಕೀಯ ಪಕ್ಷಗಳು ನಿರ್ಧಾರ ಕೈಗೊಳ್ಳುತ್ತಾರೆ. ಪೈಪೋಟಿ ಹೆಚ್ಚಾದಷ್ಟು ಮತದ ಮೌಲ್ಯ ಹೆಚ್ಚಾಗುತ್ತದೆ. ಇದು ಚುನಾವಣೆಯಲ್ಲಿ ಮೌಲ್ಯ ಸಿದ್ಧಾಂತಗಳಿಗೆ ಬೆಲೆಯೆ ಇಲ್ಲ. ಚುನಾವಣೆಯೇ ಒಂದು ದೊಂಬರಾಟ ಇಲ್ಲಿ ನೀವು ಯಾರು ಯಾರನ್ನು ಬೆಂಬಲಿಸಬೇಕು ಎಂಬುದು ಅರಿಯುವುದಿಲ್ಲ. ಏಕೆಂದರೆ ನಾಯಕ ಎನಿಸಿಕೊಂಡವನು ರಾತ್ರೋ ರಾತ್ರಿ ಪಕ್ಷ ಬದಲಿಸಿ ತಮ್ಮ ಸ್ವಾರ್ಥ ಸಾಧನೆಗಾಗಿ ಕಾರ್ಯಕರ್ತರ ಬಲಿ ತೆಗೆದು ತಾವು ಬದುಕುತ್ತಾರೆ. ಒಂದು ಪಕ್ಷದಲ್ಲಿ ಅನೇಕ ವರ್ಷ ಕಾಲ ಅಧಿಕಾರ ಅನುಭವಿಸಿ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಇದ್ದವನು ಒಂದು ದಿನ ಅವನಿಗೆ ಅಧಿಕಾರ ದೊರೆಯದಿದ್ದರೆ ಪಕ್ಷ ಬದಲಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಅಧಿಕಾರ ಬೇಕು. ವಿಪರ್ಯಾಸ ಏನೆಂದರೆ ಒಂದು ಪಕ್ಷದಲ್ಲಿ ವರ್ಷಗಳ ಕಾಲ ಎಲ್ಲಾ ಅನುಭವಿಸಿ…
ಲೇಖಕ: admin
ಮಡಿಕೇರಿ ಜೂ.17 : ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವವು ಜೂ.18 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಲಿದೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ ಮುರಳೀಧರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಗೌರವ ಅತಿಥಿಯಾಗಿ ರಕ್ಷಣಾ ಪಡೆಗಳ ಆಸ್ಪತ್ರೆ ಸೇವಾ ವಿಭಾಗದ ಮಾಜಿ ಮಹಾ ನಿರ್ದೇಶಕರು, ರಾಷ್ಟ್ರಪತಿಗಳ ಗೌರವ ಚಿಕಿತ್ಸಕ ಲೆ.ಜ. ಡಾ. ಬಿ.ಎನ್.ಬಿ.ಎಂ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು, ಕೊಡಗು ರೆಡ್ ಕ್ರಾಸ್ ಸಭಾಪತಿಗಳಾದ ಬಿ.ಕೆ ರವೀಂದ್ರ ರೈ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಜೂ.16 : ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರು ಅವರು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರನ್ನು ಅವರ ಸ್ವಗೃಹದಲ್ಲಿ ಇಂದು ಔಪಚಾರಿಕವಾಗಿ ಭೇಟಿಯಾದರು. ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಯೋಜನೆಗಳನ್ನು ರೂಪಿಸುವಂತೆ ಕೋರಿ ಸರಕಾರದ ಮುಂದೆ ಆಶೋತ್ತರಗಳನ್ನು ಮುಂದಿಡುವಂತೆ ಅವರಲ್ಲಿ ಕೇಳಿಕೊಳ್ಳಲಾಯಿತು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿದ್ದು ಸರಕಾರವು ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವಂತ ಯೋಜನೆಗಳನ್ನು ಕೈಗೊಳ್ಳಬೇಕು. ಆ ಮೂಲಕ ಕೊಡಗಿನ ವಿದ್ಯಾರ್ಥಿಗಳು ರಾಜ್ಯದ ಬೇರೆ ಜಿಲ್ಲೆಗೆ ಉತ್ತಮ ಶಿಕ್ಷಣವನ್ನರಸಿ ಹೋಗದಂತೆ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕು ಎಂಬ ಚರ್ಚೆಗಳನ್ನು ನಡೆಸಲಾಯಿತು. ಹೊಸದಾಗಿ ಆರಂಭವಾಗಿರುವ ವಿಶ್ವವಿದ್ಯಾಲಯಗಳ ಅರ್ಥಿಕ ಸ್ಥಿತಿಗತಿ ಸುಧಾರಿಸುವ, ಅನುದಾನಗಳನ್ನು ಪಡೆಯುವ, ಆ ಮೂಲಕ ಕೊಡಗಿನ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವಂತಹ ದೂರದೃಷ್ಟಿತ್ವ ಇರುವ ಅಂಶಗಳನ್ನು ಈ ನಿಯೋಗವು ಚರ್ಚಿಸಿತು. ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಸೀನಪ್ಪ ಅವರು, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ…
ಸೋಮವಾರಪೇಟೆ ಜೂ.16 : ಕೃಷಿ ಇಲಾಖೆಯ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಅಣಬೆ ಬೇಸಾಯದ ತರಬೇತಿ ಕಾರ್ಯಾಗಾರ ನಡೆಯಿತು. ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಶ್ಮಿ, ಅಣಬೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು, ಕೃಷಿ ಅಧಿಕಾರಿ ನವ್ಯನಾಣಯ್ಯ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಇದ್ದರು.
ಸೋಮವಾರಪೇಟೆ ಜೂ.16 : ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪರಿಸರ ನಾಶದಿಂದ ಅನೇಕ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು. ಅರಣ್ಯ ಇಲಾಖೆಯ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ನಿಡ್ತ ಮೀಸಲು ಅರಣ್ಯದ ಯರಪಾರೆಯಲ್ಲಿ ಬಿತ್ತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಪರಿಸರ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಚಿತ್ರದಲ್ಲಿ ಅರಣ್ಯ ಹಾಗೂ ವನ್ಯಪ್ರಾಣಿಗಳನ್ನು ನೋಡಬೇಕಾದ ಪರಿಸ್ಥಿತಿ ಬರಬಹುದು. ಮಕ್ಕಳು ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಆರೈಕೆ ಮಾಡಿ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್ ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಎ.ಟಿ. ಪೂವಯ್ಯ, ಮಡಿಕೇರಿ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಆರ್ಎಫ್ಓ ಗಳಾದ ಎಚ್.ಪಿ. ಚೇತನ್, ಶಿವರಾಮ್, ವಿಮಲ್ಬಾಬು ಇದ್ದರು.
ಮಡಿಕೇರಿ ಜೂ.16 : ಅಖಿಲ ಭಾರತ ಸಾಹಿತ್ಯ ಪರಿಷದ್ ವತಿಯಿಂದ ಜೂ.18 ರಂದು “ಕವಿತೆಗಳ ಮಳೆ” ವಿನೂತನ ಕವಿಗೋಷ್ಠಿ ನಡೆಯಲಿದೆ. ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಸಂಜೆ 3 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮಳೆಯ ಕುರಿತಂತೆ ಬರೆದ ಕವಿತೆಗಳನ್ನು ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಕವಿಗಳು ವಾಚಿಸಲಿದ್ದಾರೆ. ಕಾರ್ಯಕ್ರಮನ್ನು ಅ.ಭಾ.ಸ.ಪ ವಿಭಾಗ ಸಂಯೋಜಕ ಶ್ರೀ ಸುಂದರ್ ಶೆಟ್ಟಿ ಉದ್ಘಾಟಿಸಲಿದ್ದು, ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೊಡಗಿನ ಖ್ಯಾತ ಕವಯತ್ರಿ ಸ್ಮಿತಾ ಅಮೃತರಾಜ್ ಅವರ ಜೊತೆಗೆ ಕವಿತೆಗಳ ಕುರಿತಾದ ಸಂವಾದವೂ ನಡಯಲಿದೆ. ನೂತನವಾಗಿ ಆಯ್ಕೆಯಾದ ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಘಟಕದ ಅಧ್ಯಕ್ಷ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಜಿಲ್ಲಾ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಮತ್ತು ಸರ್ವ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಅಖಿಲ ಭಾರತ ಸಾಹಿತ್ಯ ಪರಿಷದ್ ಮನವಿ ಮಾಡಲಾಗಿದೆ.
ಮಡಿಕೇರಿ ಜೂ.16 : ಅಂತರರಾಷ್ಟ್ರೀಯ 9ನೇ ಯೋಗ ದಿನಾಚರಣೆ ಪ್ರಯುಕ್ತ ಜೂ.17 ರಂದು ಬೆಳಗ್ಗೆ 8 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಯೋಗ ಜಾಥಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಲಿದ್ದಾರೆ. ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಸ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆ ಮೂಲಕ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಯೋಗ ಜಾಥ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳೂರು ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಪುನೀತ್ ರಾಘವೇಂದ್ರ ಅವರು ಯೋಗದ ಮಹತ್ವ ಕುರಿತು ಮಾಹಿತಿ ನೀಡಲಿದ್ದಾರೆ.
ಮಡಿಕೇರಿ ಜೂ.16: ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾನಿಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಜೂ.19 ಮತ್ತು 20 ರಂದು 74ನೇ ಪ್ರತಿಭೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಪ್ರತಿಭೋತ್ಸವ ಕಾರ್ಯಕ್ರಮವು ಜೂ.19 ರಂದು ಬೆಳಗ್ಗೆ 10.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ, ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. 74ನೇ ಕಾಲೇಜು ವಾರ್ಷಿಕೋತ್ಸವದ ಉದ್ಘಾಟನೆಯು ಜೂ.20 ರಂದು ಬೆಳಗ್ಗೆ 10.30 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂಥರ್ ಗೌಡ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಹಾಗೂ ರೇಡಿಯೋಲಜಿಸ್ಟ್ ಡಾ.ಶ್ಯಾಮ್ ಅಪ್ಪಣ್ಣ, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಅಶೋಕ್ ಆಲೂರ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಜೂ.16 : ಅಂಚೆ ಅದಾಲತ್ನ ಸಭೆಯು ಜೂ.30 ರಂದು ಬೆಳಗ್ಗೆ 11.30 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ ಸಿದ್ದಾಪುರ ರಸ್ತೆ ಅಶೋಕಪುರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ `ಅಂಚೆ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂ.28 ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಜೂ.30 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಮಡಿಕೇರಿ ಜೂ.16 : ಪ್ರಸಕ್ತ (2023-24) ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ / ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. 18 ವರ್ಷ ತುಂಬಿದ ಪಟ್ಟಣ/ ಗ್ರಾಮಾಂತರ ಪ್ರದೇಶದ ಅರ್ಹ ಅಭ್ಯರ್ಥಿಗಳು www.kvic.org.in (pmegp online application) ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ ಇವರ ಕಚೇರಿಯನ್ನು ಹಾಗೂ ದೂ.ಸಂ.08272-228431/ 228746 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.






