ಮಡಿಕೇರಿ ಅ.13 : ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವ ಸಮೂಹ ಮಾಡಬೇಕೆಂದು ಕಲಾವಿದೆ ಪದ್ಮಶ್ರೀ ರಾಣಿ ಮಾಚಯ್ಯ ಕರೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಬರೆದಿರುವ ಕೊಡವ ಮಕ್ಕಡ ಕೂಟದಿಂದ ಹೊರ ತಂದಿರುವ ದಾಖಲೆಯ 75ನೇ ಪುಸ್ತಕ “ಆ ಪನ್ನೆರಂಡ್ ತಿಂಗ” ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಯುವ ಜನರು ಅಸಡ್ಡೆ ತೋರುತ್ತಿದ್ದಾರೆ. ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಜ್ಞಾನವನ್ನು ಹೆಚ್ಚಿಸುವ ಶಕ್ತಿ ಹೊಂದಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಯುವ ಸಮೂಹದ ನಿರ್ಲಕ್ಷ್ಯ ಮನೋಭಾವದಿಂದ ಇಂದು ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ತಪ್ಪುಗಳನ್ನು ತಿದ್ದಬೇಕಾದ ತಂದೆ ತಾಯಿಯರು ಕೂಡ ಪದ್ಧತಿ, ಪರಂಪರೆ ಬಗ್ಗೆ ತಿಳಿ ಹೇಳದೆ ಮಕ್ಕಳು ಹೇಳಿದಂತೆ ಕೇಳುತ್ತಿದ್ದಾರೆ. ಈಗಿನ ಮಕ್ಕಳು ಬುದ್ಧಿ ಮಾತು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ, ಪುಸ್ತಕಗಳನ್ನು ಓದುವುದಿಲ್ಲ. ಇತ್ತೀಚೆಗೆ ಬಾಳೋಪಾಟ್ ಕಾರ್ಯಕ್ರಮವೊಂದರ ಸಂದರ್ಭ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಕುಪ್ಪೆಚಾಲೆ ತೊಡುವಂತೆ ಕೇಳಿಕೊಂಡಾಗ ತಾನು ತೊಡುವುದಿಲ್ಲವೆಂದು ಅಸಡ್ಡೆ ತೋರಿದ್ದಾನೆ. ಯುವ ಪೀಳಿಗೆ ಈ ರೀತಿಯಾಗಿ ಬೆಳೆಯುತ್ತಿದ್ದು, ಇದರಿಂದ ಸಂಸ್ಕೃತಿ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುಸ್ತಕಗಳನ್ನು ರಚಿಸುವುದು ಅತ್ಯಂತ ಒಳ್ಳೆಯ ಅಭ್ಯಾಸ, ನನಗೆ ಓದುವ ಹವ್ಯಾಸವಿದೆ, ಆದರೆ ಬರೆಯುತ್ತಿಲ್ಲ. ಇನ್ನು ಮುಂದೆ ಬರೆಯುವ ಪ್ರಯತ್ನ ಮಾಡುವುದಾಗಿ ರಾಣಿ ಮಾಚಯ್ಯ ಹೇಳಿದರು.
ಕೊಡವ ಪುಸ್ತಕ “ಆ ಪನ್ನೆರಂಡ್ ತಿಂಗ” ವನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು, ಪುಸ್ತಕಗಳ ಗಾತ್ರಗಿಂತ ಅದರೊಳಗಿರುವ ವಿಚಾರದ ಮೌಲ್ಯಗಳು ದೊಡ್ಡದಾಗಿರಬೇಕು ಮತ್ತು ಮಹತ್ವದ್ದಾಗಿರಬೇಕು ಎಂದರು.
ಇಂದು ಜನ ಪುಸ್ತಕಗಳನ್ನು ಓದುತ್ತಿಲ್ಲ, ಮೊದಲ ಪುಟ, ಕೊನೆಯ ಪುಟ, ದಪ್ಪಾಕ್ಷರಗಳು ಹಾಗೂ ಅದರಲ್ಲಿರುವ ಚಿತ್ರಗಳನ್ನು ನೋಡಿ ಕಪಾಟಿನಲ್ಲಿಟ್ಟು ಬಿಡುತ್ತಾರೆ. ಆದರೆ ಇಂದು ಬಿಡುಗಡೆಯಾಗಿರುವ “ಆ ಪನ್ನೆರಂಡ್ ತಿಂಗ” ಪುಸ್ತಕ ಕಪಾಟಿನಲ್ಲಿಡುವ ಪುಸ್ತಕವಲ್ಲ, ಕೊಡಗಿನ ಮೂಲನಿವಾಸಿಗಳ ಪ್ರತಿಯೊಬ್ಬರ ಮನೆಯ ಮೇಜಿನ ಮೇಲಿರಬೇಕಾದ ಮಾರ್ಗದರ್ಶಕ ಪುಸ್ತಕವಾಗಿದೆ. ಕೊಡಗಿನ ಎಲ್ಲಾ ಹಬ್ಬಗಳು, ಪದ್ಧತಿ, ಪರಂಪರೆ, ಹುಟ್ಟಿನಿಂದ ಹಿಡಿದು ಸಾವಿನ ವರೆಗೆ ಇರುವ ಆಚಾರ, ವಿಚಾರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಪುಸ್ತಕ ಮನೆಯಲ್ಲಿದ್ದರೆ ಯಾವುದೇ ಸಂದರ್ಭದಲ್ಲಿ ಪದ್ಧತಿಯ ಕುರಿತು ಮತ್ತೊಬ್ಬರಿಂದ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕೊಡವ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ ಪುಸ್ತಕದ ರೂಪದಲ್ಲಿ ಹೊರ ತರುವಲ್ಲಿ ಮಾಜಿ ಯೋಧರೂ ಆಗಿರುವ ಲೇಖಕ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಬೊಳ್ಳಿಜಿರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡವ ಮಕ್ಕಡ ಕೂಟ 75 ಪುಸ್ತಕಗಳನ್ನು ಹೊರ ತಂದಿದೆ. ಈ ಸಂಖ್ಯೆ ನೂರಕ್ಕೆ ಏರುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿ ಎಂದು ಅವರು ಶುಭ ಹಾರೈಸಿದರು.
ಮತ್ತೊಬ್ಬ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ ಮೌಲ್ಯಯುತ ಪುಸ್ತಕಗಳನ್ನು ಓದುಗರು ಹುಡುಕಿ ಓದುತ್ತಾರೆ. “ಪಟ್ಟೋಲೆ ಪಳಮೆ” ಪುಸ್ತಕ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಉತ್ತಮ ಪುಸ್ತಕಗಳಿಗೆ ಭವಿಷ್ಯವಿದೆ ಎಂದರು.
“ಆ ಪನ್ನೆರಂಡ್ ತಿಂಗ” ಪುಸ್ತಕದ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಮಾತನಾಡಿ ಇದು ನನ್ನ 5ನೇ ಪುಸ್ತಕವಾಗಿದ್ದು, ಪದ್ಧತಿ, ಪರಂಪರೆಗಳನ್ನು ಅಧ್ಯಯನ ಮಾಡಿ ಬರೆದಿದ್ದೇನೆ. ಪುಸ್ತಕ ಪ್ರತಿಯೊಬ್ಬರ ಕೈಸೇರುವ ಮೂಲಕ ನಮ್ಮ ಕೇರಿ, ಊರು, ನಾಡಿನ ಪರಂಪರೆಯ ಪರಿಚಯವಾಗಬೇಕು ಎಂದು ತಿಳಿಸಿದರು.
ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಶ್ರಮವನ್ನು ಶ್ಲಾಘಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಸಂಘಟನೆ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ನನ್ನ ಅಧ್ಯಕ್ಷತೆಯಲ್ಲಿ ಈವರೆಗೆ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 74 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ 75ನೇ ಪುಸ್ತಕವಾಗಿ 75 ವರ್ಷದ ಬರಹಗಾರ ಜಾಲಿ ಸೋಮಣ್ಣ ಅವರು ರಚಿಸಿರುವ “ಆ ಪನ್ನೆರಂಡ್ ತಿಂಗ” ಬಿಡುಗಡೆಗೊಂಡಿದೆ ಎಂದರು.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 74 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ವೀರಯೋಧ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
::: ಜಾಲಿ ಸೋಮಣ್ಣ ಪರಿಚಯ :::
ಜಾಲಿ ಸೋಮಣ್ಣ ಬೆಂಗ್ನಾಡ್ ಕೋಪಟ್ಟಿಯ ಕೊಟ್ಟುಕತ್ತಿರ ಒಕ್ಕದ ಪೊನ್ನಪ್ಪ-ಅಕ್ಕವ್ವ ದಂಪತಿಯ ಆರನೇ ಪುತ್ರ. ಚೆಟ್ಟಿಮಾನಿ, ಚೇರಂಬಾಣೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ನಂತರ ಮಡಿಕೇರಿಯಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದು, ಇಂಡಿಯನ್ ನೇವಿಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಪಾಕ್ನಲ್ಲಿ ತಮ್ಮ ಇಬ್ಬರು ಸಹೋದರರೊಂದಿಗೆ ಸೇವೆ ಸಲ್ಲಿಸಿರುವುದು ವಿಶೇಷ. ಒಂದು ವರ್ಷ ಮಾಲ್ಮಾ ವಿದೇಶ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ.









