ಮಡಿಕೇರಿ ಡಿ.4 : ಕೊಡವ ಹಾಗೂ ಕೊಡವ ಭಾಷಿಕ ಜನಾಂಗ ಇಗ್ಗುತಪ್ಪ ದೇವರ ಪುತ್ತರಿ ದೇವ ಕಟ್ಟ್ ನ್ನು ತಪ್ಪದೆ ಪಾಲನೆ ಮಾಡಲು ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.
ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಸಮೀಪದ ಬೊಟ್ಟಿಯತ್ ಮೂಂದ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್’ಗೆ ಸೇರಿದ “ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್”ನ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿವರ್ಷ ಪುತ್ತರಿ ನಮ್ಮೆಗೆ ಹದಿನೈದು ದಿವಸ ಮುಂಚಿತವಾಗಿ ಅಮಾವಾಸ್ಯೆಯ ದಿನದಂದು ಇಗ್ಗುತಪ್ಪ ದೇವರ ಮೂಲಸ್ಥಾನವಾದ “ಮಲ್ಮ” ಬೆಟ್ಟದಲ್ಲಿ ಶ್ರದ್ಧಾಭಕ್ತಿಯಿಂದ ತಕ್ಕಮುಖ್ಯಸ್ಥರು ಸೇರಿ ಪುತ್ತರಿ ಹಬ್ಬದ “ದೇವ ಕಟ್ಟ್” ಅನ್ನು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಒಂದಷ್ಟು ಕಟ್ಟುಪಾಡುಗಳನ್ನು ಕೂಡ ವಿಧಿಸಲಾಗುತ್ತದೆ ಹಾಗೂ ಅದನ್ನು ದೇವರ ಮುಂದೆ ಒಪ್ಪಿಸಲಾಗುತ್ತದೆ. ಆದರೆ ಇದನ್ನು ಜಿಲ್ಲೆಯ ಮಂದಿ ಸರಿಯಾಗಿ ಪಾಲನೆ ಮಾಡುತ್ತಿಲ್ಲ, ಇದರಿಂದ ಜಿಲ್ಲೆಯಲ್ಲಿ ಅನಾದಿಕಾಲದಿಂದಲೂ ಬದುಕು ಕಟ್ಟಿಕೊಂಡಿರುವ ಕೊಡವ ಹಾಗೂ ಕೊಡವ ಭಾಷಿಕ ಸಮುದಾಯ ದಯದವರು ಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದ ಅವರು, ಇದು ಕೆಲವರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಪುತ್ತರಿ ನಮ್ಮೆಗೆ ಹದಿನೈದು ದಿನಗಳ ಹಿಂದೆ ಇಗ್ಗುತಪ್ಪ ದೇವರ ಪುತ್ತರಿ ದೇವ ಕಟ್ಟ್ ಸಂದರ್ಭ ಹೇಳಲಾದ ಪ್ರತಿಯೊಂದು ವಾಕ್ಯಗಳು ದೇವರ ವಾಕ್ಯಗಳಂತೆ, ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಆಚಾರ ವಿಚಾರಗಳನ್ನು ಇದೀಗ ಮುಂದುವರಿಸಿಕೊಂಡು ಬರಲಾಗಿದೆ. ಪುತ್ತರಿ ದೇವ ಕಟ್ಟ್ ಸಮಯದಲ್ಲಿ ಹಲವಾರು ಕಟ್ಟುಪಾಡುಗಳಿದ್ದು, ಇದಕ್ಕೆ ಬಹಳಷ್ಟು ಶಕ್ತಿ ಇದೆ. ಅದನ್ನು ಯಾರು ಉಲ್ಲಂಘನೆ ಮಾಡದೆ ಪರಿಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಂದ್ ಮಾನಿಗಳು ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವಿದ್ದಂತೆ ಇದು ನಮಗೆ ದೇವಾಲಯವು ಹೌದು ಎಂದ ಅವರು. ಈ ಹಿಂದೆ ನಮ್ಮ ಪೂರ್ವಿಕರು ಎಲ್ಲಿಯೂ ಇತ್ಯರ್ಥ ಆಗದೆ ಇರುವ ಬಹಳಷ್ಟು
ವ್ಯಾಜ್ಯಗಳನ್ನು ಮಂದ್ ಮಾನಿಗಳಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತಿದ್ದರು, ಕೋರ್ಟ್ ಕಛೇರಿಗೆ ವ್ಯಾಜ್ಯಗಳು ಹೋಗುತ್ತಿರಲಿಲ್ಲ, ಈ ಮಂದ್’ಗಳಿಗೆ ಅಷ್ಟೊಂದು ಹಿರಿಮೆ ಇದೆ. ಮಂದ್’ಗಳಿಗೆ ಅಗಾಧವಾದ ಶಕ್ತಿ ಇದೆ, ಇದಕ್ಕೆ ಅಗೌರವ ತೋರಿಸಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಜಿಲ್ಲೆ, ಹೊರಜಿಲ್ಲೆ, ದೇಶ ವಿದೇಶಗಳಲ್ಲಿ ಸಿಗುವ ಸನ್ಮಾನಕ್ಕಿಂತ ನಮ್ಮ ನಾಡಿನಲ್ಲಿ ನಮ್ಮ ಊರಿನಲ್ಲಿ ಸಿಗುವ ಸನ್ಮಾನಗಳು ಬಹಳ ದೊಡ್ಡದು ಎಂದರು.
ಒಂದು ಡಾಕ್ಟರೇಟ್ ಪದವಿಯ ಹಿಂದೆ ಹಲವಾರು ವರ್ಷಗಳ ಕಠಿಣ ಪರಿಶ್ರಮವಿದೆ, ರಾತ್ರಿ ಹಗಲು ಎನ್ನದೆ ಓದಬೇಕು. ಇದ್ಯಾವುದೂ ದುಡ್ಡು ಕೊಟ್ಟರೆ ಸಿಗುವುದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ದುಡ್ಡಿಗೆ ಪದವಿಗಳು ಡಾಕ್ಟರೇಟ್’ಗಳು ದೊರೆಯುತ್ತಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಸಂಶೋಧನೆಗೂ ಹಾಗೂ ಹಣಕೊಟ್ಟು ಪಡೆದ ಪದವಿಗೂ ವ್ಯತ್ಯಾಸವಿದೆ. ಸಂಶೋಧನೆ ಮಾಡಿದವರನ್ನು ಆ ವಿಷಯವಾಗಿ ಎಂತಹ ಪ್ರಶ್ನೆ ಕೇಳಿದರೂ ಕೂಡಲೇ ಅಲ್ಲಿ ಉತ್ತರ ಸಿಗುತ್ತದೆ. ಆದರೆ ಹಣಕೊಟ್ಟು ಅಥವಾ ಶಿಫಾರಸ್ಸು ಮಾಡಿ ಪಡೆಯುವ ಪದವಿ ಕೇವಲ ತೋರ್ಪಡಿಕೆಗೆ ಅಷ್ಟೇ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿದಿರು.
ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಓದು ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ನಮ್ಮ ಪದ್ದತಿ ಸಂಸ್ಕೃತಿ, ಭಾಷೆ, ಮಂದ್, ಮುಂದ್ ಇದೆಲ್ಲವನ್ನು ಉಳಿಸಿದರೆ ಮಾತ್ರ ಕೊಡವಾಮೆ ಉಳಿವು ಸಾಧ್ಯ ಹಾಗೂ ಒಂದು ಜನಾಂಗದ ಉಳಿವು ಸಾಧ್ಯ, ಇದನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗ ಮುಂದೆ ಬರಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂರು ನಾಡಿನ ತಕ್ಕಮುಖ್ಯಸ್ಥರು ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕೈಮುಡಿಕೆ ಮಂದ್ ಎನ್ನುವುದು ಕೊಡಗಿನಲ್ಲಿ ಪ್ರಸಿದ್ಧಿ ಪಡೆದಿರುವ ಮಂದ್ ಆಗಿದ್ದು, ಸೇನಾ ಮಹಾದಂಡನಾಯಕನಾಗಿದ್ದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಅವರು ಕೋಲು ಹೊಡೆದ ಖ್ಯಾತಿಯನ್ನು ಹೊಂದಿದೆ. ಮುಂದಿನ ಪೀಳಿಗೆಗೂ ನಾವು ಈ ಮುಂದ್’ಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ವೇದಿಕೆಯಲ್ಲಿ ಕುತ್ತ್’ನಾಡ್ ತಕ್ಕ ಪಂದಿಮಾಡ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್, ಗೌರವ ಕಾರ್ಯದರ್ಶಿ ನಾಳಿಯಮ್ಮನ ಉಮೇಶ್ ಕೇಚಮಯ್ಯ, ಸಹಕಾರ್ಯದರ್ಶಿ ಅಪ್ಪಂಡೇರಂಡ ಮನು ಮೋಹನ್ ಸೇರಿದಂತೆ ಮೂರು ನಾಡಿನ ಊರು ತಕ್ಕರು ಹಾಜರಿದ್ದರು.
ನಾಡಿನವರು ಆಯಾಯ ಕುಂಞ ಮಂದ್’ಗಳಲ್ಲಿ ಕೋಲ್ ಹೊಡೆದು ಬಳಿಕ ಪ್ರಮುಖ ಮಂದ್’ನಲ್ಲಿ ಸಾಂಪ್ರದಾಯಿಕ ಮಂದ್ ಹಿಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೂರು ನಾಡಿನವರು ಮೂರು ಕಡೆಯಿಂದ ಪಟ್ಟ್(ರೇಷ್ಮೆ ವಸ್ತ್ರ) ಹಿಡಿದು ಓಡಿಬಂದು ಮಂದ್ ಮಧ್ಯಭಾಗದಲ್ಲಿರುವ ಮರಕ್ಕೆ ಕೋಲ್ ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮೂರು ನಾಡಿನವರು ಒಂದು ಸುತ್ತಿನ ಸಾಮೂಹಿಕ ಪುತ್ತರಿ ಕೋಲಾಟ್ ನಡೆಸಿದರು. ನಂತರ ಸಾರ್ವಜನಿಕವಾಗಿ ವಿವಿಧ ಕಾರ್ಯಕ್ರಮ ನಡೆಯಿತು.
ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋಪಾಟ್, ಪುತ್ತರಿ ಕೋಲಾಟ್, ವಾಲಗತ್ತಾಟ್, ಕೊಡವ ಪಾಟ್ ಪೈಪೋಟಿ, ಸಾಮೂಹಿಕ ನೃತ್ಯ ಸೇರಿದಂತೆ ಬುಡಕಟ್ಟು ಸಮುದಾಯದ ಯರವಾಟ್ ಹಾಗೂ ಚೀನಿದುಡಿ ನುಡಿಸುವ ಪೈಪೋಟಿ ಕಾರ್ಯಕ್ರಮ ನಡೆಯಿತು. ಮೂರು ನಾಡಿನವರಿಗೆ ಸೀಮಿತವಾಗಿ ಹಗ್ಗಜಗ್ಗಾಟ ಸೇರಿದಂತೆ ಹಲವು ಕಾರ್ಯಕ್ರಮಗಳು ಗಮನ ಸೆಳೆಯಿತು.
ಮೂರು ನಾಡಿನ ಕೈಮುಡಿಕೆ ಪುತ್ತರಿ ಕೋಲ್ ಮಂದ್’ನಲ್ಲಿ ಕೊಡವ ಶ್ರೀಮಂತ ಸಂಸ್ಕೃತಿಯ ಅನಾವರಣವಾಯಿತು. ಜಿಲ್ಲೆಯ ವಿವಿಧ ಶಾಲಾಕಾಲೇಜುಗಳು ಸೇರಿದಂತೆ ವಿವಿಧ ಮಂದ್ ಹಾಗೂ ಸಂಘಸಂಸ್ಥೆಗಳ ತಂಡಗಳು ಗಮನ ಸೆಳೆಯಿತು ಹಾಗೂ ಬಹುಮಾನಗಳನ್ನು ಪಡೆದರು.










