ಸುಂಟಿಕೊಪ್ಪ ಜ.29 : ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಅಭಿವೃದ್ಧಿಗಾಗಿ ದೇಣಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ ‘ಬಾಲವಿಜ್ಞಾನ’ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಪ್ರತಿನಿಧಿಸಲು ಆಯ್ಕೆಗೊಂಡಿರುವ ಬಾಲ ವಿಜ್ಞಾನಿ ಎ.ಎಸ್.ಶ್ರೀಶಾ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ‘ಪ್ರಾಚ್ಯಪ್ರಜ್ಞೆ’ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಟಿ.ಎಸ್.ಫಾತಿಮತ್ ಸಹಲ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಸುಂಟಿಕೊಪ್ಪ ನಾಡು ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲು ರೂ.1,50,000 ದೇಣಿಗೆಯಾಗಿ 1980-81ನೇ ಸಾಲಿನ ವಿದ್ಯಾರ್ಥಿಗಳು ಡಾ. ಅಕ್ಕಪಂಡ ತಮ್ಮಯ್ಯ ಅವರ ನೇತೃತ್ವದಲ್ಲಿ ಕೆ.ಡಿ.ಪ್ರಕಾಶ್, ಪಿ.ಪಿ.ಸುಬ್ರಮಣಿ, ಎಫ್.ಬಿ.ಅಶೋಕ, ಕೆ.ಆರ್.ವಾಸು, ರಾಮಕೃಷ್ಣ, ಐ.ಎಸ್.ಗಣೇಶ, ವೀಣಾ ಅವರುಗಳು ಆಗಮಿಸಿ ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು ಮೌಲ್ಯ ರೂ.35 ಲಕ್ಷ ಹಣದ ಅವಶ್ಯಕತೆಯಿದ್ದು, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಇತರ ದಾನಿಗಳ ಸಹಾಯಹಸ್ತಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಭ ಶಾಲೆಯ ಮುಖ್ಯೋಪಾದ್ಯಾಯನಿ ಕೆ.ಎಸ್.ಇಂದಿರಾ, ನಿವೃತ್ತ ಮುಖ್ಯೋಪಾದ್ಯಾಯನಿ ಕೆ.ಎ.ಸಾವಿತ್ರಿ ಹಾಗೂ ಶಾಲಾ ಸಹಶಿಕ್ಷಕರು ಹಾಜರಿದ್ದರು.











